ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಪ್ರವಾಸಿ ಮಂದಿರದಲ್ಲಿ ಕಳೆದ ಜೂನ್ 12 ರಂದು ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಅರಳಗೋಡು, ಚೆನ್ನಗೊಂಡ, ಭಾನುಕುಳ್ಳಿ ಮತ್ತು ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರೈತ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯ ಮುಂದುವರಿದ ಭಾಗವಾಗಿ, ಅಂದು ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಅನುಷ್ಠಾನ ಹಾಗೂ ಪ್ರಗತಿಯ ಕುರಿತು ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ನೀಡಿದ ದೂರುಗಳು ಮತ್ತು ಮನವಿಗಳಿಗೆ ಕೇವಲ ಭರವಸೆ ನೀಡದೇ, ಅವುಗಳನ್ನು ತಳಮಟ್ಟದಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರುವುದೇ ನಮ್ಮ ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು: ಅರಣ್ಯ ಇಲಾಖೆ ತೊಂದರೆಗೆ ಮುಕ್ತಿ-ಎಫ್.ಸಿ ಪ್ರಸ್ತಾವನೆ: ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಫಾರೆಸ್ಟ್ ಕ್ಲಿಯರೆನ್ಸ್ ಬೌಂಡ್ರಿಗಳನ್ನು ನಿಖರವಾಗಿ ಫಿಕ್ಸ್ ಮಾಡಲು ಸೂಚಿಸಲಾಯಿತು. ಅಗತ್ಯವಿರುವ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಾಮಗಾರಿಗಳಿಗಾಗಿ ಅರಣ್ಯ ಇಲಾಖೆಯ ಒಪ್ಪಿಗೆ ಕೋರಿ ಮೇಲಧಿಕಾರಿಗಳಿಗೆ ತಕ್ಷಣವೇ ಪ್ರಸ್ತಾವನೆ ಹಾಗೂ ಅರ್ಜಿಗಳನ್ನು ಸಲ್ಲಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.
ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ: ಕಾನೂರುಕೋಟೆ, ಭೀಮೇಶ್ವರ, ಉರುಳಗಲ್ಲು, ಮೇಘಾನೆ ಹಾಗೂ ಮುಪ್ಪಾನೆ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹೊರತುಪಡಿಸಿ, ಬಾಕಿ ಉಳಿದಿರುವ ಕಂದಾಯ ಭೂಮಿ ಮತ್ತು ಬಗರ್ಹುಕಂ ಸಾಗುವಳಿ ಜಮೀನುಗಳ ನಿಖರ ಗುರುತಿಸುವಿಕೆಗಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಸರ್ವೆ ನಡೆಸುವಂತೆ ಆದೇಶಿಸಲಾಯಿತು.
ಬಿಎಸ್ಎನ್ಎಲ್ ಟವರ್ ಕಾಮಗಾರಿ ಪ್ರಗತಿ : ಬರಂಗಿ ಹೋಬಳಿಯಲ್ಲಿ ನಿರ್ಮಾಣವಾಗುತ್ತಿರುವ ಬಿಎಸ್ಎನ್ಎಲ್ ಟವರ್ಗಳ ಕಾಮಗಾರಿಯನ್ನು ತ್ವರಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಸೂಚಿಸಲಾಯಿತು. ಹೊಸ ಟವರ್ ನಿರ್ಮಾಣವಾಗಬೇಕಿರುವ ಗ್ರಾಮಗಳ ಸರ್ವೆ ನಡೆಸಿ ವಿವರವಾದ ಪಟ್ಟಿಯನ್ನು ಸಂಸದರ ಕಚೇರಿಗೆ ಸಲ್ಲಿಸಲು ತಿಳಿಸಲಾಯಿತು. ಮಳೆಗಾಲ ಹತ್ತಿರವಿರುವುದರಿಂದ ನೆಟ್ವರ್ಕ್ ಅಡೆತಡೆಯಿಲ್ಲದೆ ಸಿಗಲು ಸೋಲಾರ್ ಬದಲು ವಿದ್ಯುತ್ ಸಂಪರ್ಕ ಕಲ್ಪಿಸಲು ತಕ್ಷಣ ಕ್ರಮ ಜರುಗಿಸಲು ಸೂಚಿಸಲಾಯಿತು.
ಜೋಗದಿಂದ ಮುರುಡೇಶ್ವರ ರಸ್ತೆ ಸಂಪರ್ಕ: ಪ್ರವಾಸೋದ್ಯಮ ಹಾಗೂ ಮಲೆನಾಡಿನ ಸ್ಥಳೀಯ ಸಂಪರ್ಕದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಜೋಗ್ನಿಂದ ಮುರುಡೇಶ್ವರ ರಸ್ತೆ ಸಂಪರ್ಕದ ಪ್ರಗತಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸಲು ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಮಾಜಿ ಸಚಿವರಾದ ಹರತಾಳು ಹಾಲಪ್ಪ, ದಿಶಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಟಿ.ಡಿ. ಮೇಘರಾಜ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಬರಂಗಿ ಹೋಬಳಿಯ ವಿವಿಧ ಗ್ರಾಮಗಳ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Comments 1