ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿರಣ್ಯಕಶಿಪು ನಮ್ಮೊಳಗಿನ ಅಹಂಕಾರ, ದರ್ಪ, ನಮ್ಮೊಳಗಿನ ಮಿಥ್ಯಾಹಂಕಾರ ಎಂದು ಸಮೀಕರಿಸಿಕೊಂಡರೆ ಮತ್ತೊಂದು ಬಗೆಯಲ್ಲಿ ನರಸಿಂಹಾವತಾರವನ್ನು ವ್ಯಾಖ್ಯಾನಿಸಿಕೊಳ್ಳಬಹುದು. ಈ ಅಹಂ ಕೆಟ್ಟದೆಂದು ನಮಗೆ ಗೊತ್ತಿದ್ದರೂ ನಾವು ಅದರಿಂದ ಹೊರಬಂದರೆ ಒದ್ದಾಡುತ್ತೇವೆ.
ಅಹಂಕಾರದಿಂದ ಹೊರಬಂದರೆ ನಮ್ಮ ಗುರುತನ್ನೇ, ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ ಎಂಬ ಭಯ ನಮ್ಮೊಳಗಿರುತ್ತದೆ. ಈ ಆತ್ಮವಿಸ್ಮøತಿಯನ್ನು ಕಳಚಿಕೊಳ್ಳುವುದಕ್ಕಾಗಿ, ನಮ್ಮ ಉದ್ಧಾರವಾಗುವುದಕ್ಕಾಗಿ ಭಗವಂತ ಅವತರಿಸಿ ಬರಬೇಕು. ನಮ್ಮೊಳಗೆ ಅವತರಿಸಬೇಕು. ಅದಕ್ಕಾಗಿ ನಾವು ಮೊರೆಯಿಡಬೇಕು. ಅವನನ್ನು ಕರೆಯಬೇಕು. ಅವನಿಗಾಗಿ ಹಂಬಲಿಸಬೇಕು.
ಭಗವಂತನಾದ ಮಹಾವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೆಯ ಅವತಾರ ಮಾನವಾಕೃತಿಯ ಸಿಂಹಮುಖನಾದ ನರಸಿಂಹಾವತಾರ. ಶ್ರೀಮನ್ನಾರಾಯಣನ ಇದಕ್ಕೂ ಹಿಂದಿನ ಅವತಾರಗಳಲ್ಲಿ ಮತ್ಸ್ಯ (ಮೀನು) ಕೂರ್ಮ (ಆಮೆ) ವರಾಹ (ಹಂದಿ) ಮನುಷ್ಯನ ರೂಪುರೇಷೆ ಪ್ರಕಟವಾದದ್ದೇ ಇಲ್ಲ. ನರಸಿಂಹನೆಂದರೆ ಅರ್ಥವೇ ಮಾನವಶ್ರೇಷ್ಠ ಎಂಬುದಾಗಿ. ಶ್ರೇಷ್ಠ ಮಾನವನು ಪ್ರಪ್ರಥಮ ಆವಿರ್ಭಾವವೇ ಶ್ರೀ ನರಸಿಂಹನ ಅವತಾರವಾಯಿತು.
ಅವತಾರ, ಅವತರಣ ಎಂದರೆ ಕೆಳಗಿಳಿದು ಬರುವುದು ಎಂಬ ಅರ್ಥವಿದೆ. ದುಷ್ಟ ಶಿಕ್ಷಣ – ಶಿಷ್ಟ ರಕ್ಷಣ ಕಾರ್ಯಗಳಿಗಾಗಿ ಭಗವದ್ ಶಕ್ತಿಯು ಮೇಲಿನಿಂದ ಭೂಲೋಕಕ್ಕೆ ಕೆಳಗಿಳಿದು ಬರುವುದನ್ನೇ ಅವತಾರ ಕಾರ್ಯವೆನ್ನುತ್ತಾರೆ. ಭಗವಂತ ಅವತರಣ ಮಾಡುವುದೇ ದುರ್ಜನರನ್ನು ಶಿಕ್ಷಿಸಿ ಸಜ್ಜನರನ್ನು ರಕ್ಷಿಸುವುದಕ್ಕಾಗಿ. ಶ್ರೀ ನರಸಿಂಹಾವತಾರವೂ ಕೂಡ ದುಷ್ಟ ಶಿಕ್ಷಣ ಶಿಷ್ಟ ರಕ್ಷಣದ ಮೂಲೋದ್ದೇಶದ ಕಾರ್ಯಕ್ಕಾಗಿ ಆವಿರ್ಭಾವಗೊಂಡಿದ್ದು.
ಕಶ್ಯಪ ಮುನಿ ಮತ್ತು ದಿತಿ ದಂಪತಿಗೆ ಅಕಾಲ ಸಂಯೋಗದ ಫಲವಾಗಿ ಹಿರಣಾಕ್ಷ ಮತ್ತು ಹಿರಣ್ಯಕಶಿಪು ಎಂಬ ರಾಕ್ಷಸ ಗಣದ ಮಕ್ಕಳು ಜನಿಸಿ ರಾಕ್ಷಸ ಗುಣಗಳನ್ನೇ ಮೈಗೂಡಿಸಿಕೊಂಡು ಬೆಳೆದು ದೈತ್ಯರಾಗಿ ದೇವತೆಗಳನ್ನೆಲ್ಲ ಗೆದ್ದು ಪ್ರಪಂಚಕ್ಕೆಲ್ಲ ಪೀಡನೆ ಇತ್ತು ಅಟ್ಟಹಾಸ ಮಾಡುತ್ತ ಮೆರೆಯುತ್ತಿದ್ದರು. ಅವರ ಹಿಂಸೆ, ಕಾಟ ತಾಳಲಾರದೆ ದೇವತೆಗಳು ಮಹಾವಿಷ್ಣುವಿನ ಮೊರೆ ಹೊಕ್ಕರು. ವಿಷ್ಣುವು ವರಾಹಾವತಾರದಿಂದ ಹಿರಣಾಕ್ಷನನ್ನು ಸಂಹರಿಸಿದನು. ಈಗ ಹಿರಣ್ಯಕಶಿಪು ತನ್ನನ್ನು ಸಂರಕ್ಷಿಸಿಕೊಳ್ಳಲು ಬ್ರಹ್ಮನನ್ನು ಕುರಿತು ತಪಸ್ಸಿಗೆ ತೊಡಗುತ್ತಾನೆ. ಅತ್ಯಂತ ನಿಷ್ಠೆಯಿಂದ ಕೂಡಿದ ದೀರ್ಘ ತಪಸ್ಸು. ಆ ಬ್ರಹ್ಮ ಸೋತು ವರ ನೀಡಲೇಬೇಕಾಗಿ ಬರುತ್ತದೆ ! ಹಿರಣ್ಯಕಶಿಪು ಕೇಳಿದ ವರವಾದರೂ ಎನು? ಅತ್ಯಂತ ಬುದ್ಧಿವಂತಿಕೆಯಿಂದ ಕೇಳಿದ ವರ ಅದು! “ಹಗಲಾಗಲೀ, ರಾತ್ರಿಯಾಗಲೀ, ಕೆಳಗಾಗಲೀ, ಮೇಲಾಗಲೀ ನನಗೆ ಸಾವು ಬರಬಾರದು. ಮಾನವರಿಂದಾಗಲೀ, ಪ್ರಾಣಿಗಳಿಂದಾಗಲೀ ಮೃತ್ಯು ಘಟಿಸಕೂಡದು. ಮನೆಯ ಒಳಗೂ ಹೊರಗೂ ಯಾವುದೇ ಆಯುಧದಿಂದಲೂ ನನಗೆ ಮರಣವು ಬರಕೂಡದು” ಎಂಬ ವರವನ್ನು ಕೊಡುವಂತೆ ಕೇಳಿದ್ದಕ್ಕೆ ಬ್ರಹ್ಮ ಅಸ್ತು ಎನ್ನಲೇಬೇಕಾಯಿತು!
ಹೀಗೆ ವರವನ್ನು ಪಡೆದು ಬೀಗಿ ತಾನೆ ಅಧಿಕಾರಕ್ಕೆ ಬಂದು ಅಹೋಬಲವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಾ ದೇವತೆಗಳನ್ನು ಪೀಡಿಸುವ ಕಾರ್ಯವನ್ನು ಇನ್ನೂ ಹೆಚ್ಚಾಗಿ ಮುಂದುವರಿಸುತ್ತ ಅಟ್ಟಹಾಸ ಮಾಡತೊಡಗಿದ.
ಆದರೆ ದೈವದ ಇಚ್ಛೆ ಮತ್ತೊಂದೇ ಯೋಜನೆ ಸಿದ್ಧಗೊಳಿಸಿರುತ್ತದಲ್ಲವೆ? ಹಿರಣ್ಯಕಶಿಪು ತಪಸ್ಸಿಗೆ ಹೋಗುವಾಗ ಆತನ ಹೆಂಡತಿ ಕಯಾದು ಗರ್ಭಿಣಿ. ನಾರದರ ಆಶ್ರಮದಲ್ಲಿ ಕಾಲ ಕಳೆಯಬೇಕಾಗಿ ಬಂದಿತ್ತು. ಅಲ್ಲಿ ಆಕೆ ನಾರದರಿಂದ ಶ್ರೀಹರಿಯ ಮಹಿಮೆಯನ್ನು ದಿನದಿನವೂ ಕೇಳುತ್ತ ಬರಬೇಕಾಗಿತ್ತು. ಆಕೆಯ ಗರ್ಭದ ಮೇಲೆ ಅದು ಪ್ರಭಾವ ಬೀರಿತು. ಈ ಗರ್ಭಸಂಸ್ಕಾರದ ಪ್ರಭಾವದಿಂದಲೇ ಜನಿಸಿದ ಶಿಶು ಪ್ರಹ್ಲಾದ ಹುಟ್ಟಿನಿಂದಲೂ ನಾರಾಯಣನ ಪರಮಭಕ್ತನಾಗಿಯೇ ಬೆಳೆದ. ತನ್ನ ಸಹಪಾಠಿಗಳನ್ನು ತನ್ನಂತೆಯೇ ಶ್ರೀಹರಿಯ ಭಕ್ತರನ್ನಾಗಿ ಪರಿವರ್ತನೆ ಮಾಡಿದ. ತಂದೆಗೂ ಮಗನಿಗೂ ಸದಾ ವಾಗ್ಯುದ್ಧ. ತಂದೆಯೋ ಶ್ರೀಹರಿಯ ಬದ್ಧವೈರಿ; ಮಗನೋ ಶ್ರೀಹರಿಯ ಪರಮಭಕ್ತ ! ಅಪ್ಪ ನಾರಾಯಣನ ದಾಸಾನುದಾಸನಾದ ಭಕ್ತ ಜೀವ! ಎಂಥಾ ವೈರುದ್ಧ್ಯಗಳ ಸಂಗಮವಾದ ಪಿತೃಪುತ್ರರಿವರು!
ಸದಾ ಪರಪೀಡನೆಯಲ್ಲಿ, ಆಸುರೀ ಆಡಳಿತದ ರಾಜಕಾರ್ಯದ ಆಗುಹೋಗುಗಳಲ್ಲಿ ವ್ಯಸ್ತನಾಗಿದ್ದ ಹಿರಣ್ಯಕಶಿಪುವಿಗೆ ಮಗನ ಭೇಟಿಗೆ ಸಮಯ ಸಿಗುತ್ತಿದ್ದುದೂ ಸಂಧ್ಯಾಕಾಲದಲ್ಲೇ. ತಂದೆ ಎಷ್ಟೆಷ್ಟು ಹರಿನಿಂದನೆ ಮಾಡುತ್ತಿದ್ದನೋ ಅಷ್ಟಷ್ಟೂ ಮಗನು ಹರಿಸ್ತುತಿಯಲ್ಲಿ ತೊಡಗುತ್ತಿದ್ದುದು ರಕ್ಕಸನನ್ನು ಕೆರಳಿಸುತ್ತಿತ್ತು. ಎಷ್ಟು ಹಿಂಸೆ, ಕ್ರೌರ್ಯ, ಶಿಕ್ಷೆ ಕೊಟ್ಟರೂ ಕೇಳದೆ ಬಾಲಕ ಪ್ರಹ್ಲಾದ ಹರಿಗೆ ನಿಷ್ಠನಾಗಿದ್ದುದನ್ನು ಕಂಡ ಹಿರಣ್ಯಕಶಿಪು ತನ್ನ ಕಡುವೈರಿಯಾದ ಹರಿಯನ್ನು ಹೀಗೆ ಸ್ಮರಿಸುವುದು ತರವಲ್ಲವೆಂದು ಪರಿಪರಿಯಾಗಿ ಹೇಳಿದರೂ ಕೇಳದ ಈ ಬಾಲಕನನ್ನು, ಬಗೆಬಗೆಯಾಗಿ ಚಿತ್ರಹಿಂಸೆಕೊಟ್ಟರೂ ಬಗ್ಗದ ಈ ಹುಡುಗನ್ನು ಕಟ್ಟಕಡೆಯದಾಗಿ ರೋಷದಿಂದ ಪ್ರಶ್ನಿಸುವುದು ಹೀಗೆ, “ನಿನ್ನ ಆ ಶ್ರೀಹರಿ ಎಲ್ಲ ಕಡೆ ಇದ್ದಾನೆಯ?” “ಹೌದು ಅಪ್ಪಾಜಿ” “ಈ ಅರಮನೆಯ ಸಭಾಭವನದ ಈ ಕಂಭದಲ್ಲಿಯೂ?..” ಹಿರಣ್ಯಕಶಿಪುವಿನ ಈ ಪ್ರಶ್ನೆ ವ್ಯಂಗ್ಯದಿಂದ ಕೂಡಿತ್ತು. ಆದರೆ ಪ್ರಹ್ಲಾದನ ಉತ್ತರ ಅಷ್ಟೇ ಭಕ್ತಿ ತತ್ಪರತೆಯಿಂದ ಕೂಡಿದ್ದಾಗಿತ್ತು. “ಖಂಡಿತವಾಗಿಯೂ ಭಗವಂತ ಅಲ್ಲಿಯೂ ಇದ್ದಾನೆ. ಆತ ಇಲ್ಲದ ಸೆಳೆದು ಅಟ್ಟಹಾಸದಿಂದ ಕಂಬವನ್ನು ಹೊಡೆದ. ತತ್ಕ್ಷಣದಲ್ಲಿಯೇ ಬ್ರಹ್ಮಸೃಷ್ಟಿಯಲ್ಲದ ಕುತ್ತಿಗೆಯವರೆಗೂ ಮಾನವನ ಹಾಗಿರುವ, ಸಿಂಹದ ಮುಖ ಹೊಂದಿರುವ ನರಸಿಂಹನ ಆವಿರ್ಭಾವವಾಗಿ ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಸಂಧ್ಯಾ ವೇಳೆಯಲ್ಲಿ ಹೊರಗೂ ಒಳಗೂ ಅಲ್ಲದ ಹೊಸ್ತಿಲಲ್ಲಿ ಕುಳಿತು ಯಾವ ಆಯುಧವೂ ಶಸ್ತ್ರ ಅಸ್ತ್ರವೂ ಅಲ್ಲದ ಕೇವಲ ತನ್ನ ಉಗುರುಗಳಿಂದಲೇ ತನ್ನ ತೊಡೆಯ ಮೇಲೇ ಹಿರಣ್ಯಕಶಿಪುವಿನ ದೇಹವನ್ನು ಎತ್ತಿಹಾಕಿಕೊಂಡು ಬಗಿದು ಕೊಂದು ಹಾಕಿದ.
ಅಣು ಮಹತ್ತಿನಲ್ಲೆಲ್ಲ ಸರ್ವವ್ಯಾಪಕತ್ವವನ್ನು ಹೊಂದಿರುವ ಭಗವಂತನಲ್ಲಿ ಅಚಲ ನಂಬಿಕೆ, ಭಕ್ತಿ ಮಗು ಪ್ರಹ್ಲಾದನದು. ದೈತ್ಯ ಹಿರಣ್ಯಕಶಿಪುವಿದಾದರೋ ತಾನೇ ದೇವರು, ತನ್ನನ್ನಾರೂ ಮೀರಿಸುವವರಿಲ್ಲ ಎಂಬ ಅಹಂಕಾರ, ಗರ್ವ ತುಂಬಿಕೊಂಡ ಪರಿಪೀಡನಾ ನಡವಳಿಕೆ. ಭಕ್ತನ ಮೊರೆ ಲಾಲಿಸಿ ಭಗವಂತ ಕಂಭವನ್ನೊಡೆದು ಬರಲೇಬೇಕಾಯಿತು. ದೈತ್ಯನ ಸಂಹಾರವಾಗಲೇಬೇಕಾಯಿತು.
ಮೇಲುನೋಟಕ್ಕೆ ಅತ್ಯಂತ ಕ್ರೂರನಾಗಿ ಭಗವಂತ ದೈತ್ಯನ ಕರುಳು ಬಗೆದು ಸಂಹರಿಸಿದ ಹಾಗೆ ಕಂಡರೂ ಇದು ಆಂತರ್ಯದಲ್ಲಿ ಸ್ವಾಮಿ ದೈತ್ಯನ ಎಲ್ಲ ಕರಾರುಗಳಿಗೆ ಹೊಂದುವಂತೆ ತಾನು ವಿಶೇಷವಾಗಿ ಅವತರಿಸಿ ಬಂದು ಮರಣವನ್ನು ಕರುಣಿಸಿ ಆ ಅಟ್ಟಹಾಸ ನಡೆಸಿದ್ದ ಜೀವಕ್ಕೆ ಸದ್ಗತಿಯನ್ನು ಪಾಲಿಸಿ ಮುಕ್ತಿ ಪಥವನ್ನು ತೋರಿಸಿದ ದಯೆಯನ್ನು ಪರಿಭಾವಿಸಬೇಕು. ಹೊರನೋಟಕ್ಕೆ ಇದು ಉಗ್ರನರಸಿಂಹನ ಕ್ರೌರ್ಯವೆಂದು ಕಾಣುವುದಾದರೂ ಭಗವಂತನ ತೊಡೆಯ ಮೇಲೆ ಮಲಗಿ ಮರಣಿಸಿದ ದೈತ್ಯನ ಪುಣ್ಯದಲ್ಲಿ ಬಹುಶಃ ಪಾಪಕಾರ್ಯಗಳನ್ನು ಕ್ಷಮಿಸಿ ಹಾಲೂಡುವ ತಾಯಿಯ ವಾತ್ಸಲ್ಯವೇ ಅಂತಿಮ ಗಳಿಗೆಯಲ್ಲಿ ಮರಣ ಸಂದರ್ಭದಲ್ಲಿ ಕಂಡುಂಡಿದ್ದಿರಬಹುದಾಗಿಯೂ ಪರಿಭಾವಿಸುತ್ತಾರೆ. ಏಕೆಂದರೆ ಭಗವಂತ ಎಲ್ಲ ಜೀವಗಳ ತಾಯಿ! ಸತ್ತ್ವ, ರಜೋ, ತಾಮಸ ಗುಣಗಳೆಲ್ಲದರ ಮೊತ್ತಗಳ ಜೀವಿಗಳೆಲ್ಲದಕ್ಕೂ ಆತ ತಾಯಿಯೇ. ಅವುಗಳ ಕರ್ಮಫಲಗಳಿಗುನುಗುಣವಾಗಿಯಾದರೂ ಸಲಹಲು ಆತ ಬಾರದಿರುವುದಿಲ್ಲ ! ಶಾಪಗ್ರಸ್ಥನಾಗಿ ಭೂಮಿಯಲ್ಲಿ ಅಸುರ ದೇಹದೊಂದಿಗೆ ಗುರುತಿಸಿಕೊಂಡು ಅನ್ಯಾಯದ ಬಾಳ್ವೆ ನಡೆಸುತ್ತಿದ್ದಾನೆ. ಅಂಥವನಿಗೆ ಸದ್ಗತಿಯ ಪಥ ತೋರಿಸುವುದು ಮರಣದ ಮೂಲಕವೊಂದೇ ಸರಿ, ಅದನ್ನು ತೋರಬೇಕಾದರೆ ಭಗವಂತನಿಂದಲ್ಲದೆ ಬೇರಾರಿಂದ ಸಾಧ್ಯವಿತ್ತು ಇಲ್ಲಿ? ಏನೆಲ್ಲ ಕರಾರು ಹಾಕಿ ತನ್ನ ರಕ್ಷೆ ಮಾಡಿಕೊಂಡಿದ್ದ ದೈತ್ಯನಾತ ! ಅಂಥವನಿಗೆ ಮುಕ್ತಿ ನೀಡಲು ನರಸಿಂಹನಾಗಿ ಭಗವಂತನೇ ಭುವಿಗೆ ಅವತರಿಸಿ ಬರಬೇಕಾಯಿತು!
ಸತ್ಯಂ ವಿಧಾತುಂ ನಿಜಭೃತ್ಯ ಭಾಷಿತಂ ಎಂಬ ಸೂಕ್ತಿಯಂತೆ ತನ್ನ ಭಕ್ತನ ಮಾತನ್ನು ಸತ್ಯಮಾಡಿ ತೋರಿಸಲೆಂದೇ ಪರಮಾತ್ಮನು ಈ ಅವತಾರವನ್ನು ಮಾಡಿದುದು ಕೃತಯುಗದಲ್ಲಿ. ಆದರೆ ಈ ತನ್ನ ಅವತಾರವನ್ನು ಉಪಸಂಹಾರ ಮಾಡಲಿಲ್ಲ. ಪುರಾಣಗಳು ತಿಳಿಸುವಂತೆ ಭಗವಂತನ ಉಳಿದೆಲ್ಲ ಅವತಾರಗಳಿಗೆ ಅಂತ್ಯವಿದೆ. ಉದಾಹರಣೆಗೆ ವರಾಹ ಶರೀರವನ್ನು ಕೋಕಾಮುಖ ತೀರ್ಥದಲ್ಲಿ ಪರಿತ್ಯಾಗ ಮಾಡಿದನೆಂದು ನೃಸಿಂಹ ಪುರಾಣವೇ ಹೇಳುತ್ತದೆ. ಸರಯೂ ನದಿಯಲ್ಲಿ ಶ್ರೀರಾಮನ ದೇಹ ತ್ಯಾಗವಾದರೆ ಪ್ರಭಾಸ ತೀರ್ಥದಲ್ಲಿ ಶ್ರೀಕೃಷ್ಣನ ಶರೀರ ನಿರ್ಯಾಣ. ಆದರೆ ನೃಸಿಂಹಾವತಾರದಲ್ಲಿ ಮಾತ್ರ ಅವತಾರದ ಉದ್ದೇಶ ಈಡೇರಿದರೂ ಆ ನರಸಿಂಹ ಶರೀರವು ಅವಿನಾಶಿಯಾಗಿಯೇ ಇರುವುದು ಎಂಬ ನಂಬಿಕೆ ಉಳಿದುಬಂದಿದೆ. ಒಂದೊಂದು ಕಲ್ಪದಲ್ಲಿ (ಬ್ರಹ್ಮನ ಒಂದು ದಿನ)ಯೂ ಈ ಅವತಾರ ಆವರ್ತಿತವಾಗುವುದರಿಂದಾಗಿ ನರಸಿಂಹ ಶರೀರಗಳು ಅನೇಕವಾಗುತ್ತವೆ. “ನ್ಯಾಯ ಸಿದ್ಧಾಂತ ಮುಕ್ತಾವಲಿ” ಎಂಬ ತರ್ಕಗ್ರಂಥದಲ್ಲಿಯೂ ಈ ವಿಶೇಷವನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಅವತಾರ ಕಾರ್ಯ ಮುಗಿದ ಮೇಲೆ ಶ್ರೀ ನೃಸಿಂಹನು ತನಗೆ ಬೇಕಾದ ಪ್ರದೇಶದಲ್ಲಿ ನೆಲೆಸುತ್ತಾನೆಂದು ಅದರಲ್ಲಿ ಹೇಳಲಾಗಿದೆ.
ನರಸಿಂಹ ಮಂತ್ರವ ಜಪಿಸೋ
ಶಂಕರಾಚಾರ್ಯರು, ಮಧ್ವಾಚಾರ್ಯರು ಇಬ್ಬರೂ ಲಕ್ಷ್ಮೀನರಸಿಂಹನನ್ನು ಕುರಿತು ಮನದುಂಬಿ ಸ್ತೋತ್ರ ರಚಿಸಿದ್ದಾರೆ. ಶಂಕರಾಚಾರ್ಯರ “ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರ”ವಂತೂ ತುಂಬ ಹೃದಯಸ್ಪರ್ಶಿಯಾಗಿ ಮನ ಕರಗುವಂತೆ ರಚಿಸಲ್ಪಟ್ಟಿದ್ದು ಮಾನವಜನ್ಮದ ಎಲ್ಲ ಕಷ್ಟ ಕಾರ್ಪಣ್ಯಗಳ, ಸಾಂಸಾರಿಕ ಬಂಧನಗಳ, ತೊಂದರೆ ತಾಪತ್ರಯಗಳ, ಆಪತ್ತು ವಿಪತ್ತುಗಳ ಸುಳಿಗಳಿಂದ ಬಿಡುಗಡೆಯನ್ನು ಕೋರುತ್ತ ಜೀವವು ಲಕ್ಷ್ಮೀನರಸಿಂಹನನ್ನು ಮೊರೆ ಮೊರೆದು ಕರೆಯುವ ರೀತಿಯಲ್ಲಿದೆ. ಒಟ್ಟು ಇಪ್ಪತ್ನಾಲ್ಕು ಉದಾಹರಣೆಗಾಗಿ ಇಲ್ಲಿ ನೀಡಲಾಗಿದೆ :
ಸಂಸಾರಯೂಧ ಗಜಸಂಹತಿ ಸಿಂಹದಂಷ್ಟ್ರ
ಭೀತಸ್ಯ ತೀಕ್ಷ್ಣಮತಿಶೇಷ ಭಯಂಕರೇಣ|
ಪ್ರಾಣ ಪ್ರಯಾಣ ಭವಭೀತಿ ನಿವಾರಣೇನ
ಲಕ್ಷ್ಮೀನರಸಿಂಹ ಮಮದೇಹಿ ಕರಾವಲಂಬಂ||
ಈ ಕರಾವಲಂಬನ (24 ಪೂರ್ತಿ ಪದ್ಯಗಳನ್ನು) ಸ್ತೋತ್ರವನ್ನು ಪ್ರತಿದಿನವೂ ಪಠಿಸಿದಲ್ಲಿ ಎಂಥ ಆಪತ್ತು, ಕಷ್ಟ ತೊಂದರೆಗಳೂ ಪರಿಹಾರವಾಗಿ ನೆರವು ದೊರೆತು ಲಕ್ಷ್ಮೀನರಸಿಂಹನು ಒದಗಿ ಬಂದು ಕಾಯುವನು ಎನ್ನುವುದು ಭಕ್ತರ ಅಚಲವಾದ ನಂಬಿಕೆ, ಶಂಕರಾಚಾರ್ಯರು ನೀಡಿರುವ ಭರವಸೆ ಕೂಡ!ಮಧ್ವಾಚಾರ್ಯರು ನರಸಿಂಹನ ಪ್ರಾರ್ಥನಾ ರೂಪವಾಗಿ `ನಖಸ್ತುತಿ’ಯನ್ನು ರಚಿಸಿದ್ದಾರೆ. ನಾರಾಯಣ ಪಂಡಿತರು ಎಂಬ ಕವಿಯಿಂದ ರಚಿತವಾದ ನರಸಿಂಹ ಸ್ತುತಿ ಕೂಡ ಇವರಿಂದ ಕನ್ನಡಕ್ಕೆ ಅನುವಾದಗೊಂಡಿದೆ. ಹರಿದಾಸ ಸಾಹಿತ್ಯದಲ್ಲಂತೂ ನರಸಿಂಹ ದೇವರು ಆದ್ಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀಪಾದರಾಜ ಯತಿಗಳು “ಶ್ರೀ ಲಕ್ಷ್ಮೀನರಸಿಂಹ ಪ್ರಾದುರ್ಭಾವ ದಂಡಕಂ” ಎಂಬ ಅದ್ಭುತವಾದ, ಸೊಗಸಾದ ಕಾವ್ಯವನ್ನೇ ರಚಿಸಿ ನೀಡಿದ್ದಾರೆ. ಭಾಗವತದಲ್ಲಿ ಉಕ್ತವಾದ ಶ್ರೀವಿಷ್ಣುವು ನರಸಿಂಹಾವತಾರವೆತ್ತಿ ಹಿರಣ್ಯಕಶಿಪುವನ್ನು ಸಂಹರಿಸಿ ಪ್ರಹ್ಲಾದನನ್ನು ಅನುಗ್ರಹಿಸಿದ ಕಥಾವಸ್ತುವನ್ನೇ ಇಲ್ಲಿ ಸುಂದರವಾದ ಕಾವ್ಯವಸ್ತುವಾಗಿ ಅನುವಾದಿಸಿದ್ದಾರೆ.
ಕನಕದಾಸರಿಗೂ ನರಸಿಂಹ ಅತ್ಯಂತ ಪ್ರಿಯನಾದ ದೇವರು. “ಯಾದವಗಿರಿ ವಾಸನಹುದೋ ಶ್ರೀನರಸಿಂಹ| ಆದಿ ನಾರಾಯಣ ಅಚ್ಯುತನಹುದೋ” ಎಂದು ಹಾಡಿದ್ದಾರೆ. ಇದಲ್ಲದೆ ಕನಕದಾಸರ “ಏನು ಕಾರಣ ಬಾಯಿ ತೆರೆದೆಯೊ ಪೇಳೆಲೋ ದಾನವಾಂತಕ ಅಹೋಬಲ ನಾರಸಿಂಹನೇ” ಎಂಬೊಂದು ಕೀರ್ತನೆ ತುಂಬ ಸ್ವಾರಸ್ಯಕರವಾಗಿದೆ. ಹೀಗೆಯೇ ಜಗನ್ನಾಥದಾಸರು, ವಿಜಯದಾಸರು, ಪ್ರಸನ್ನ ವೆಂಕಟದಾಸರು ಮುಂತಾದ ದಾಸವರೇಣ್ಯರು ಲಕ್ಷ್ಮೀನರಸಿಂಹನನ್ನು ಮನದುಂಬಿ ಸ್ತುತಿಸಿ ಕೀರ್ತನೆಗಳನ್ನು ರಚಿಸಿದ್ದಾರೆ. ವಿಜಯದಾಸರಂತೂ ಲಕ್ಷ್ಮೀನರಸಿಂಹನ ಮೇಲೆ ಸುಳಾದಿಯನ್ನೇ ರಚಿಸಿ ಧನ್ಯತೆಯನ್ನು ಮೆರೆದಿದ್ದಾರೆ. “ನರಸಿಂಹ ಮಂತ್ರವ ಜಪಿಸೋ | ಆ ಮಂತ್ರ, ಈ ಮಂತ್ರ ಎಂದು ನೆಚ್ಚಿ ನೀ ಕೆಡಲು ಬೇಡ” ಎಂದು ತಮ್ಮ ಕೃತಿಯೊಂದರಲ್ಲಿ ಪುರಂದರದಾಸರು ತಿಳಿ ಹೇಳಿದ್ದಾರೆ. ನರಸಿಂಹ ಸ್ವಾಮಿಯ ಮಹತ್ತ್ವವನ್ನು ಆ ಕೀರ್ತನೆಯಲ್ಲಿ ಸಾದ್ಯಂತವಾಗಿ ವಿವರಿಸಿ ಹಾಡಿದ್ದಾರೆ. ಹೇಳಲಾಗಿರುವುದು ಭಗವಂತನ ಸಾವಿರ ರೂಪಗಳನ್ನು ಸಾಧಿಸುತ್ತದೆ. ಅವುಗಳಲ್ಲಿ ಯೋಗಾ ನರಸಿಂಹ, ವ್ಯಾಘ್ರ ನರಸಿಂಹ, ಗಂಡ ಭೇರುಂಡ ನರಸಿಂಹ ಮುಂತಾದ ಕೆಲವೇ ರೂಪಗಳು ಮಾತ್ರ ಪರಿಚಿತವಾಗಿವೆ. ಆದರೆ ಸಹಸ್ರನಾಮಗಳನ್ನು ಪಠಿಸುವಾಗ ಅವುಗಳಿಗೆ ಶ್ರೀ ನೃಸಿಂಹ ಶಬ್ದವನ್ನು ಸೇರಿಸಿ ಹೇಳುವ ರೂಢಿ ಇದೆ. ಉದಾಹರಣೆಗೆ ಶ್ರೀ ಯೋಗಾಯ ಶ್ರೀ ನೃಸಿಂಹಾಯ ನಮಃ ಈ ಎಲ್ಲ ನಾಮಗಳಿಗೆ ಶಂಕರಾಚಾರ್ಯರು ವಿವರಣೆ, ವ್ಯಾಖ್ಯಾನ ನೀಡಿದ್ದಾರೆ. ಹೆಚ್ಚಿನ ಶಂಕರ ಮಠಗಳಲ್ಲಿ ಶ್ರೀ ನೃಸಿಂಹನ ಸನ್ನಿಧಿಯಿರುವುದನ್ನು ಇಂದಿಗೂ ಕಾಣಬಹುದು.
(ವಿವಿಧ ಮೂಲಗಳಿಂದ)
Get in Touch With Us info@kalpa.news Whatsapp: 9481252093
Discussion about this post