ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಗುರುವಾರದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು (Special Puja) ಭಕ್ತಿಭಾವದಿಂದ ನೆರವೇರಿದವು.
ಬೆಳಿಗ್ಗೆ ವಿಶೇಷ ಪೂಜೆ, ಅರ್ಚನೆ ಹಾಗೂ ಅನ್ನದಾನ ಸೇವೆಗಳು ನಡೆದವು. ಸಂಜೆ ನಡೆದ ಉತ್ಸವದಲ್ಲಿ ರಥೋತ್ಸವ, ಗಜವಾಹನೋತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಹಾಗೂ ಮಹಾಮಂಗಳಾರತಿ ನೆರವೇರಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ರಕ್ಷಿತಾ ರಘುನಾಥನ್ ಅವರು ತಮ್ಮ ಸಮೃದ್ಧಿ ಡ್ಯಾನ್ಸ್ ಫೌಂಡೇಶನ್ ವಿದ್ಯಾರ್ಥಿಗಳೊಂದಿಗೆ ಭರತನಾಟ್ಯ ನೃತ್ಯಸೇವೆಯನ್ನು ಅರ್ಪಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾದರು.
ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯ ಅವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಿದವು.

ಪ್ರಶಾಂತನಗರದ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ
ಇದೇ ವೇಳೆ, ಬೆಂಗಳೂರಿನ ಪ್ರಶಾಂತನಗರದ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಹರ ಚೌತಿ ಪ್ರಯುಕ್ತ ಆಗಸ್ಟ್ 2ರಂದು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಅನನ್ಯ ಬೆಳವಾಡಿ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಹರಿದಾಸರ ಪದಗಳು ಹಾಗೂ ಅನ್ನಮಾಚಾರ್ಯರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದ ಅವರು, ನೆರೆದಿದ್ದ ಭಕ್ತರ ಮನಸೂರೆಗೊಂಡರು.
Also read>> ಬೆಂಗಳೂರು : ಶೇಷಾದ್ರಿಪುರ ರಾಯರ ಮಠದಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ
ಇವರ ಗಾಯನಕ್ಕೆ ಶ್ರೀ ಟಿ.ಎಸ್. ರಮೇಶ್ ಕೀಬೋರ್ಡ್ನಲ್ಲಿ ಹಾಗೂ ಶ್ರೀ ವೆಂಕಟರಾಜು ತಬಲಾದಲ್ಲಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









