ಕಲ್ಪ ಮೀಡಿಯಾ ಹೌಸ್ | ಲೇಖಕರು: ಅಜೇಯ ಸಿಂಹ ಕೆ.ವಿ., ಶಿವಮೊಗ್ಗ, (ರಂಗಾಭ್ಯಾಸಿಗಳು) |
ಭಾರತದ ಪ್ರಜಾಸತ್ತೆಯನ್ನು ಸಮಸ್ತ ವಿಶ್ವವೇ ಅಚ್ಚರಿಯಿಂದ ನೋಡುತ್ತದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದು ಈ ಬಾರಿಯ ಸಾರ್ವತ್ರಿಕ ಚುನಾವಣಾ ಫಲಿತಾಂಶ.
ಎರಡು ಬಾರಿ ಪ್ರಚಂಡ ಗೆಲುವು ಸಾಧಿಸಿದ್ದ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್’ಡಿಎ ಕೂಟ ಅಥವಾ ನರೇಂದ್ರ ಮೋದಿಯ ವರ್ಚಸ್ಸು ಈ ಬಾರಿಯೂ ಮತ್ತೆ ಮುಂದುವರೆಯುತ್ತದೆ ಎಂದು ಸಾರಾಸಗಟಾಗಿ ಎಲ್ಲ ಸಮೀಕ್ಷೆಗಳು ಹೇಳುತ್ತಿದ್ದವು.
ಇದು ಮತದಾನ ಪೂರ್ವ ಸಮೀಕ್ಷೆಗೆ ಸೀಮಿತವಾಗದೇ, ಮತದಾನೋತ್ತರದಲ್ಲೂ ರಿಂಗಣಿಸಿತ್ತು. ಯಾವ ಪಕ್ಷಗಳಿಗೂ ಸಮೀಕ್ಷಾ ತಂಡಗಳಿಗೂ ಸೇರದ ರಾಜಕೀಯ ವೀಕ್ಷಕರು, ಚುನಾವಣಾ ಪಂಡಿತರೂ ಸಹಾ ಇದಕ್ಕೇ ತಲೆದೂಗುತ್ತಿದ್ದರು. ಆದರೆ, ಬೆರೆಳೆಣಿಕೆಯಷ್ಟು ವಿಶ್ಲೇಷಕರು ಮಾತ್ರ ಸಮೀಕ್ಷೆ ಏನಾದರೂ ಇರಲಿ, ಇಂಡಿ ಒಕ್ಕೂಟ ದೊಡ್ಡ ಛಾಪು ಮೂಡಿಸಲಿದೆ. ಅಧಿಕಾರವನ್ನೇ ಪಡೆದರೂ ಅಚ್ಚರಿಪಡುವಷ್ಟೇನಿಲ್ಲ ಎಂದಿದ್ದರು. ಆದರೆ, ಇದಕ್ಕೆ ಬಹುಸಂಖ್ಯಾತ ಆಡಳಿತ ಪಕ್ಷದ ಬೆಂಬಲಿಗರು ಸಾಧ್ಯವಿಲ್ಲ ಎಂದು ಉದ್ಧಟತನದಲ್ಲಿ ಮೆರೆದರು. ಆದರೆ, ಸಾಮಾನ್ಯ ಮತದಾರ ತನ್ನ ನಿರ್ಧಾರವನ್ನು ಮತಯಂತ್ರದಲ್ಲಿ ಬಚ್ಚಿಟ್ಟು, ತಣ್ಣಗೆ ನಗುತ್ತಿದ್ದ. ಇದು ಮೋದಿಗೆ ಜೈ ಎನ್ನುತ್ತಿದ್ದವರಿಗೇ ಕಾಣಲೇ ಇಲ್ಲ.
ಈ ಬಾರಿಯಂತೂ ಸಮೀಕ್ಷೆಯ ಪರವಾಗಿ ಆಡಳಿತಾರೂಢರಲ್ಲಿ ಯಾವ ಮಟ್ಟದ ವಿಶ್ವಾಸವಿತ್ತೆಂದರೆ, ಮತದಾನೋತ್ತರ ಸಮೀಕ್ಷೆಯ ನಂತರ ನೈಜ ಫಲಿತಾಂಶ ಬರುವ ಮುನ್ನವೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಎನ್’ಡಿಎಗೆ ಮತ್ತೆ ಅಧಿಕಾರದ ಚುಕ್ಕಾಣಿ ನೀಡಿದ ಜನತೆಗೆ ಕೃತಜ್ಞತೆಯನ್ನೂ ಸಮರ್ಪಿಸಿಬಿಟ್ಟರು. ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಶಾಮಿಯಾನ ಸಹಿತ ಸಂಭ್ರಮದ ಸಿದ್ಧತೆ ಭರ್ಜರಿಯಾಗಿತ್ತು. ಮತ ಎಣಿಕೆಗೂ ಮುನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ತುರ್ತುಸಭೆ ನಡೆಸಿ, ಸಂಭ್ರಮಾಚರಣೆಯ ರೂಪುರೇಷೆಯ ಚರ್ಚೆ ನಡೆಸಿದರೆಂದು ಸಹಾ ವರದಿಯಾಗಿತ್ತು. ಕಮಲ ಪಡೆಯ ಕೆಲವು ನಾಯಕರಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಸಮೀಕ್ಷೆಗಳನ್ನೂ ಮೀರಿ ನಾವು ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂದು ಮಾಧ್ಯಮಗಳಲ್ಲಿ ಹೇಳಿದರು. ನಾವು ಕೆಲಸ ಮಾಡಿದ್ದೇವೆ ನಮಗೆ ನೀವು ಮತ ಹಾಕಲೇಬೇಕೆಂಬ ಧೋರಣೆಯೇ ಢಾಳಾಗಿ ಕಾಣತೊಡಗಿತ್ತು. ಮತದಾನಕ್ಕೆ ಮನವಿ ಮಾಡಿಕೊಳ್ಳುವ ಮನಃಸ್ಥಿತಿಯನ್ನೂ ನಾಯಕರೂ ದಾಟಿ ಬಿಟ್ಟಿದ್ದರು.
ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂಬ ಹೇಳೀಕೆಯನ್ನು ಚುನಾವಣೆ ಘೋಷಣೆಗೂ ಮುನ್ನ ನೀಡಿ, ಪ್ರತಿಪಕ್ಷಗಳನ್ನು ಹೇಗೆ ದಾರಿತಪ್ಪಿಸಿ(?)ಬಿಟ್ಟೆ ಎಂದು ಖುದ್ದು ಮೋದಿಯೇ ಮಾಧ್ಯಮವೊಂದರ ಸಂದದರ್ಶನದಲ್ಲಿ ಹೇಳಿ ವ್ಯಂಗ್ಯವಾಡಿ, ಅಣಕಿಸಿದ್ದರು. ಸ್ವತಃ ಮೋದಿಗೇ ಯಾವ ಮಟ್ಟದ ವ್ಯಕ್ತಿಪೂಜೆಯ ಅಮಲನ್ನು ಸ್ವಪಕ್ಷೀಯರು ಏರಿಸಿದ್ದರೆಂಬುದಕ್ಕೆ ಈ ಬಾರಿಯ ಆಡಳಿತದ ಉತ್ತರಾರ್ಧದಲ್ಲಿ ಮೋದಿ ಭಾಷಣದಲ್ಲಿ ಇದು ಮೋದಿಯ ಸಾಧನೆ ಎಂದೇ ಹೇಳಿಕೊಳ್ಳುತ್ತಿದ್ದರು. ಇದರ ಉತ್ತುಂಗ ಹೇಗಿತ್ತೆಂದರೆ ಇದು ಮೋದಿ ಗ್ಯಾರೆಂಟಿ, ಮೋದಿ ಇರುವವರೆಗೂ ಏನೂ ಮಾಡಕ್ಕೆ ಆಗಲ್ಲ. ತಾನು ದೇವತಾ ಮನುಷ್ಯ ಎನ್ನುವಷ್ಟರ ಮಟ್ಟಿಗೆ ಆಗಿತ್ತು.
ಇದನ್ನೆಲ್ಲ ಗ್ರಹಿಸುತ್ತಲೇ ಇದ್ದ ಮತದಾರ, ಸರಿಯಾಗಿ ತನ್ನ ಅಧಿಕಾರ ಚಲಾಯಿಸಿದ. ದೇಶದಾದ್ಯಂತ ಆಡಳಿತ ವಿರೋಧಿ ಅಲೆ ಇರಲಿಲ್ಲ, ಪರ್ಯಾಯ ಸರ್ಕಾರ ತರಲೇಬೆಕೆಂಬ ಹಠ ದೇಶದಲ್ಲಿ ಇರಲಿಲ್ಲ ಎಂಬುದೆಲ್ಲ ಒಂದು ಹಂತಕ್ಕೇ ಸತ್ಯವೇ ಇರಬಹುದು. ಆದರೆ, ಈ ಬಾರಿ ಒಂದು ಪಾಠ ಕಲಿಸಲೇಬೇಕೆಂಬ ಇರಾದೆ ಮತದಾರನ ಮನದಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದುದ್ದು ಭಾಜಪದ ಕಣ್ಣಿಗೇ ಕಾಣಲೇ ಇಲ್ಲ. ಅಥವಾ ನೋಡಲಾರದಷ್ಟು ಅತಿಯಾದ ಆತ್ಮವಿಶ್ವಾಸದ ಪೊರೆ ಮುಚ್ಚಿತ್ತೆನ್ನಬಹುದು.
ಇತ್ತ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರದಿಂದಲೂ ಮಲ್ಲಿಕಾರ್ಜುನ ಖರ್ಗೆ 2024ರ ಚುನಾವಣಾ ತಯಾರಿ ಆರಂಭಿಸಿದರು. ಮೊದಲಿಗೆ ಉತ್ಸಾಹವೇ ಇರದಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು. ಈ ಬಾರಿ ಕಾಂಗ್ರೆಸ್ ಕೂಡಾ ಖರ್ಗೆಯವರಿಗೆ ತುಂಬಾ ಸ್ವಾತಂತ್ರವನ್ನು ನೀಡಿತು.
ಈ ಹಿಂದೆ ಗಾಂಧಿ ಕುಟುಂಬರೇತರರು ಅಧ್ಯಕ್ಷರಾಗಿದ್ದಾಗ ನಡೆದುಕೊಂಡ ಎಲ್ಲ ರೀತಿಗಳು, ಕಲಿತ ಪಾಠಗಳನ್ನು ಬಳಸಿಕೊಂಡಿತು. ಗಾಂಧಿ ಕುಟುಂಬಕ್ಕೇ ಉಘೇ ಎನ್ನುತ್ತಾ, ಅವರನ್ನೂ ಹಾದಿ ತಪ್ಪಿಸುತ್ತಿದ್ದ ವಂಧಿಮಾಗಧರು ಸುತ್ತ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ನ ಯುವರಾಜ ಎಂದೇ ಬಿಂಬಿತವಾದ ರಾಹುಲ್ ಗಾಂಧಿ, ಬೀದಿಗಿಳಿದು ದೇಶದಾದ್ಯಂತ ಭಾರತ ಜೋಡೋ, ಭಾರತ್ ನ್ಯಾಯ ಯಾತ್ರಾ ಹೀಗೆ ಜನರ ನಾಡಿಮಿಡಿತ ಅರಿತರು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇದಕ್ಕೆ ಸಿಕ್ಕ ಅಸಹಕಾರದ ನಡುವೆಯೂ ಯಶಸ್ವಿಯಾದರು.
ಇಷ್ಟಕ್ಕೇ ಸೀಮಿತವಾಗದೇ ಬಿಜೆಪಿ ನೇತೃತ್ವದ ಎನ್ಡಿಎ #NDA ವಿರುದ್ಧ ಪ್ರಬಲವಾದ ಮೈತ್ರಿ ಅಗತ್ಯವನ್ನು ಸ್ಥಳೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಇಂಡಿ ಒಕ್ಕೂಟವೆಂಬ ಮಹಾ ಫಲಕದಡಿಗೆ ತಂದರು. ಅಷ್ಟೇ ಅಲ್ಲದೇ, ಒಕ್ಕೂಟದೊಳಗೆ ಬರಬಹುದಾದ ಎಲ್ಲಾ ತಕರಾರು, ಅಧಿಕಾರ ಹಂಚಿಕೆ ಇತ್ಯಾದಿಗಳನ್ನು ಸಮರ್ಥವಾಗಿ ನಿಭಾಯಿಸಲು ಸ್ವತಃ ಶ್ರಮಿಸಿದರು. ಯಾವ ಮುಲಾಜಿಲ್ಲದೇ ಅನೇಕ ಕಡೆ ರಾಜಿಯಾದರು. ಕರ್ನಾಟಕದ ಡಿ.ಕೆ. ಶಿವಕುಮಾರ್ ರಂತಹ #DKShivakumar ಅನುಭವಿ ನಾಯಕರು, ಪಕ್ಷ ನಿಷ್ಠರನ್ನೂ ಗುರುತಿಸಿ ಒಕ್ಕೂಟದೊಳಗೆ, ಪಕ್ಷದಲ್ಲಿ ಜವಾಬ್ದಾರಿಗಳನ್ನಿತ್ತರು. ಅನೇಕಾನೇಕ ಭರ್ತ್ಸನೆಯ ಮಾತುಗಳು, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯರೂಪದ ಚಿತ್ರಣಗಳನ್ನೂ ಮೀರಿ ಬೆಳೆದುನಿಂತರು. ಹಿಂದೆ ರಾಜಕುಮಾರನನ್ನು ಶತ್ರುಪಾಳೆಯಕ್ಕೆ ಗೊತ್ತಾಗದಂತೆ ಅಜ್ಞಾತವಾಗಿ ಬೆಳೆಸಿ, ದೊಡ್ಡ ಗೆಲುವಿನೊಂದಿಗೆ ಜನತೆಯ ಮುಂದೆ ತರುತ್ತಿದ್ದ ಸಂಗತಿಯೇ ನೆನಪಾಗುವಂತೆ ಮಾಡಿಬಿಟ್ಟರು.
ಎನ್’ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ತರಬಹುದಾದ ಹೊಸ ಕಾನೂನುಗಳನ್ನು, ಅದರಿಂದ ತೊಂದರೆಯಾದೀತು ಎಂದು ಬಿಂಬಿಸಲಾಗುವ ಸಮುದಾಯಗಳನ್ನು ಹೆಚ್ಚು ಕೇಂದ್ರೀಕರಿಸಿ ಅದನ್ನು ತಲುಪಿಸಿದರು. ಜಾತ್ಯತೀತ ರಾಷ್ಟ್ರವೆಂದು ಸಂವಿಧಾನದ ಪೀಠಿಕೆಗೆ ಮಾತ್ರ ಸೀಮಿತವಾಗಿರುವ ನಮ್ಮ ದೇಶದಲ್ಲಿ ಚುನಾವಣಾ ಸಮಯದ ಜಾತಿ ಲೆಕ್ಕಾಚಾರ, ಜಾತಿಯ ಮೀಸಲಾತಿ, ಅಸ್ತಿತ್ವದ ವಿಚಾರದಲ್ಲಿ ಇರಬಹುದಾದ ಸಹಜ ಭಯಗಳನ್ನು ತಮ್ಮಂತೆ ಪರಿವರ್ತಿಸಿಕೊಳ್ಳುತ್ತಾ ಸಾಗಿದ ರಾಹುಲ್ ಪಡೆ ಯಶಸ್ವಿಯಾಯಿತು.
ದೆಹಲಿಯ #NewDelhi ಮಾರ್ಗ ಲಖ್ನೋ ಮುಖಾಂತರ ಎನ್ನುವ ಮಾತಿನಂತೆ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜೊತೆಗೆ ಬೇಷರತ್ ಕೈಜೋಡಿಸಿ, ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿಗೆ ದೊಡ್ಡ ಆಘಾತ ನೀಡಿ ಬೀಗಿದರು. ಹೀಗಾಗಿ 2019ರ ಚುನಾವಣೆಯಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ತೋರಿದ್ದ ಕಾಂಗ್ರೆಸ್ ನೇತೃತ್ವದ ಮಿತ್ರಕೂಟ ಈ ಬಾರಿ ಗೆಲುವಿನ ಸಮೀಪ ಬಂದಿತು.
ಮೊಲದಂತೆ ಓಡಿ, ಗೆದ್ದೇ ಗೆಲುವೆ ಎಂದು ಅತಿ ಆತ್ಮವಿಶ್ವಾಸದಿಂದ ವಿಶ್ರಮಿಸಿಕೊಂಡು ಸರಳ ಬಹುಮತಕ್ಕೇ ಪ್ರಯಾಸಪಟ್ಟ ಎನ್’ಡಿಎ #NDA ಏದುಸಿರು ಬಿಟ್ಟರೆ, ಆಮೆಯಂತೆ ನಿಧಾನವಾಗಿ ಚಲಿಸುತ್ತಾ, ಗೆಲುವಿನ ರೇಖೆಯ ಸಮೀಪಕ್ಕೆ ಸಮಾಧಾನದಿಂದ ಬಂದ ಐಎನ್’ಡಿಎ ಮಂದಹಾಸ ಬೀರುತ್ತಿದೆ… ಇದೇ ಅಲ್ಲವೇ ನಿಜವಾದ ಪ್ರಜಾಪ್ರಭುತ್ವದ ಮತದಾರನ ಮನಸಿನ ಚಿದಂಬರ ರಹಸ್ಯ.
ಮತದಾನ ಪೂರ್ವ, ಮತದಾನೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ ಜನಾದೇಶವನ್ನು ನೀಡುವುದು ಭಾರತ ಪ್ರಜಾಸತ್ತೆಗೆ ಮೊದಲೇನೂ ಅಲ್ಲ. ಬಾಬಾಸಾಹೇಬರ ನೇತೃತ್ವದ ಸಂವಿಧಾನ ರಚನಾ ಸಮಿತಿ ದೇಶದ ಪ್ರಜೆಗಿತ್ತ ಗುಪ್ತಮತದಾನದ ಹಕ್ಕು ಪ್ರಜಾಪ್ರಭುತ್ವದ ಆಶಯಗಳನ್ನು ಹೇಗೆ ಉನ್ನತೀಕರಿಸುತ್ತದೆ ಎನ್ನುವುದಕ್ಕೆ ಈ ಬಾರಿಯ ಜನತಾತೀರ್ಪು ಮತ್ತೊಂದು ಉದಾಹರಣೆಯಾಗಿದೆ.
ಮೋದಿ, ಬಿಜೆಪಿ ವಿರುದ್ಧವಾದ ಸಮೀಕ್ಷೆಗಳೇ ಇರಲಿಲ್ಲ ಎಂಬಂತ ಹೊತ್ತು ಇದಾಗಿದ್ದರೂ, ಜನರು ತಮ್ಮ ಆಯ್ಕೆಯನ್ನು ನಿಶಬ್ದವಾಗಿ ಮಾಡಿದ್ದಾರೆ. ಸಮೀಕ್ಷೆಗಳು ಮೇಲ್ನೋಟದ ವಿಚಾರ ಅಷ್ಟೇ. ಮತದಾರನ ಅಂತರಂಗವನ್ನು ಬೆದಕಲಾರದು. ಮತದಾರ ಮನಸು ಮಾಡಿದರೆ ಏನೂ ಬೇಕಾದರೂ ಮಾಡಬಲ್ಲ ಎಂದು ಮತ್ತೆ ಸಾಬೀತಾಯಿತು. ಗುಪ್ತಮತದಾನದ ಅಂಶವನ್ನು ಅಡಕ ಮಾಡಿದ ಮಾಡಿದ ನಮ್ಮ ಸಂವಿಧಾನಕ್ಕೆ ಮತ್ತೊಮ್ಮೆ ಗೌರವಪೂರ್ವಕ ಜೈ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post