ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಟಿಂಬರ್ ಕಾರ್ಮಿಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕ್ಷುಲಕ ಕಾರಣಕ್ಕೆ ಹತ್ಯೆ ನಡೆಸಲಾಗಿದೆ ಎನ್ನಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಬಳಿಯ ಇಚನಹಳ್ಳಿ ತಾಂಡಾದ ಪರಶುರಾಮ್ ಲಮಾಣಿ ಕೊಲೆಯಾದ ದುರ್ದೈವಿ. ಅದೇ ತಾಂಡಾದ ಸಹ ಕಾರ್ಮಿಕರಾದ ಪರಶುರಾಮ್ ಶೆಟ್ಟಪ್ಪ ತಂಬೂರಿ ಹಾಗೂ ಅರುಣ್ ಪುನ್ನಪ್ಪ ಲಮಾಣಿ ಕೃತ್ಯ ಎಸಗಿದವರು. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮೇಸ್ತ್ರಿ ಲಕ್ಷ್ಮಣ್ ರಾಠೋಡ್ ನೇತೃತ್ವದಲ್ಲಿ ಇಚನಹಳ್ಳಿ ತಾಂಡಾದ ಐವರು ಕಾರ್ಮಿಕರು ಟಿಂಬರ್ ಕಟ್ಟಿಂಗ್ ಕೆಲಸಕ್ಕಾಗಿ ಕಳೆದ ಮೇ ತಿಂಗಳಲ್ಲಿ ಹೊಸನಗರಕ್ಕೆ ಬಂದಿದ್ದರು. ಸೊನಲೆ ಗ್ರಾಮದ ಕುಮಾರ್ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಿದ್ದರು. ಮೃತ ಪರಶುರಾಮ್ ಲಮಾಣಿ 15 ದಿನಗಳ ಹಿಂದೆ ಊರಿನಲ್ಲಿ ಮನೆ ಸ್ಲಾಬ್ ಕೆಲಸಕ್ಕಾಗಿ ತೆರಳಿದ್ದು, ಶನಿವಾರ ಸಂಜೆಯಷ್ಟೇ ಮರಳಿ ಸೊನಲೆ ಗ್ರಾಮಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
Also read: Prime Minister Modi Inaugurates Redeveloped Bantawala Railway Station through Video Conferencing
ರಾತ್ರಿ ಬಾಡಿಗೆ ಮನೆಯಲ್ಲಿ ಕಾರ್ಮಿಕರು ಒಟ್ಟಾಗಿ ಮದ್ಯಪಾನ ಮಾಡುತ್ತಿದ್ದಾಗ, ಅರುಣ್ನ ಸಂಸಾರದ ವಿಚಾರವಾಗಿ ಪರಶುರಾಮ್ ಲಮಾಣಿ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ತಕ್ಷಣ ಮೇಸ್ತ್ರಿ ಹಾಗೂ ಇತರೆ ಕಾರ್ಮಿಕರು ಗಲಾಟೆ ಬಿಡಿಸಿ ಇಬ್ಬರನ್ನೂ ಸುಮ್ಮನಿರಿಸಿದ್ದಾರೆ ಎಂದು ಆರೋಪಿಸಲಾಗಿದೆ
ಬುದ್ಧಿ ಹೇಳಿದ ವಿಚಾರವಾಗಿ ಅರುಣ್ ಹಾಗೂ ಪರಶುರಾಮ್ ಶೆಟ್ಟಪ್ಪ ಮತ್ತೆ ಪರಶುರಾಮ್ ಲಮಾಣಿ ಜೊತೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಪರಶುರಾಮ್ ಶೆಟ್ಟಪ್ಪ ಅಡುಗೆ ಮನೆಯಲ್ಲಿದ್ದ ಚಾಕು ತಂದು ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೃತ್ಯದ ಬಳಿಕ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತದೇಹವನ್ನು ಹೊಸನಗರ ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








