ಭಾರತದಲ್ಲಿ ಕ್ರೀಡೆ ಎಂದಾಕ್ಷಣ ಎಲ್ಲರ ಬಾಯಲ್ಲಿ ಬರುವುದು ಕ್ರಿಕೆಟ್ ಎಂಬ ಮೂರಕ್ಷರ ಆಟ. ಕಾರಣ ಭಾರತೀಯ ಕ್ರೀಡಾ ಲೋಕವನ್ನು ಅಕ್ಷರಶಃ ಅಧಿಪತಿಯ ಹಾಗೆ ಆಳುತ್ತಿರುವದು ಕ್ರಿಕೆಟ್. ಹಾಗಾಗಿ ಕ್ರಿಕೆಟ್ ಇಲ್ಲಿ ಒಂದು ಆಟವಾಗಿ ಉಳಿದಿಲ್ಲ. ಬದಲಾಗಿ ಒಂದು ಧರ್ಮದ ರೀತಿಯಲ್ಲಿ ಬೆಳೆದು ನಿಂತಿದೆ. ಇದಕ್ಕಾಗಿ ಭಾರತವನ್ನು ಕ್ರಿಕೆಟ್ ಧರ್ಮ ರಾಷ್ಟ್ರ ಎಂದೂ ಕರೆಯಲಾಗುತ್ತದೆ. ಆದರೆ ಇಂದು ಅದೇ ಕ್ರಿಕೆಟ್ ನಮ್ಮ ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳನ್ನು ಆಪೋಷಣೆ ಪಡೆಯುತ್ತಿರುವದು ಖೇದಕರ.
ಕ್ರಿಕೆಟ್ ಆಟಕ್ಕೆ ಸಿಗುವಷ್ಟು ಪ್ರಾಶಸ್ತ್ಯ ಇತರ ಆಟಕ್ಕೆ ಸಿಗುವುದಿಲ್ಲ. ಹಾಗಂತ ನಾನೇನು ಕ್ರಿಕೆಟ್ ಆಟವನ್ನು ಟೀಕೆ ಮಾಡುತ್ತಿಲ್ಲ. ಕಾರಣ ನಾನು ಸಹ ಕ್ರಿಕೆಟ್’ನ ಅಪ್ಪಟ ಅಭಿಮಾನಿ. ಇದ್ಯಾಕೆ ಈ ಮಾತು ಎಂದುಕೊಂಡಿರಾ? ಲೇಖನವನ್ನು ಪೂರ್ಣ ಓದಿ.
ಅಂತಾರಾಷ್ಟಿಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿ ಪಡೆದು ಅದಾಗ್ಯೂ ಬೆಳಕಿಗೆ ಬಾರದ ಒಂದು ಪ್ರತಿಭೆಯ ಕಿರು ಪರಿಚಯ ಮಾಡಿಕೊಡುವ ಉದ್ದೇಶ ಈ ಲೇಖನದ್ದು. ಇವರ ಹೆಸರು ಶಾಲಿನಿ ರಾಜೇಶ್ ಶೆಟ್ಟಿ. ಉಡುಪಿಯ ಪೆರ್ಡೂರುನವರು. ಇವರ ಪರಿಚಯ ಮಾಡಲು ಹೋದರೆ ಬಹುಶಃ ಒಂದು ಕಾದಂಬರಿ ರೂಪದಲ್ಲಿ ಕೃತಿಯನ್ನೇ ಬರೆಯಬಹುದೇನೋ.
ನಾರಾಯಣ ಶೆಟ್ಟಿ ಮತ್ತು ಲಲಿತಾ ಶೆಟ್ಟಿ ಅವರ ಮಗಳಾದ ವೃತ್ತಿಯಲ್ಲಿ ದೈಹಿಕ ಶಿಕ್ಷಕಿ ಆಗಿರುವ ಇವರು ಕ್ರೀಡಾ ಲೋಕದೊಳಗೆ ತಮ್ಮದೇ ಆದ ಒಂದು ಹೆಜ್ಜೆ ಗುರುತು ಮೂಡಿಸಿದವರು. ಇವರ ಕ್ರೀಡಾ ಸಾಧನೆ ಹೇಳ ಹೊರಟರೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಹೈಸ್ಕೂಲ್ ಜೀವನದಿಂದ ಆರಂಭವಾದ ಇವರ ಸಾಧನೆ ಈ ಕ್ಷಣದವರೆಗೂ ನಿಂತಿಲ್ಲ.
ಹೈಸ್ಕೂಲ್ ಮಟ್ಟದಲ್ಲಿ ಓಟದಲ್ಲಿ ಪ್ರಾಬಲ್ಯ ಇವರದು. ಓಟದಲ್ಲಿ ರಾಜ್ಯಕ್ಕೆ ಚಾಂಪಿಯನ್ ಆಗಿದ್ದರು. ಸಾಯಿ ಕ್ರೀಡಾ ಹಾಸ್ಟೆಲ್’ನಲ್ಲಿ ಭಾರತೀಯ ಶಿಬಿರಕ್ಕೆ ಆಯ್ಕೆ. ಮುಂದೆ ಅನಾರೋಗ್ಯ ಹಿನ್ನೆಲೆ ಮರಳಿ ಬಂದ ಇವರು ಕ್ರೀಡಾ ಸಾಧನೆಯನ್ನು ನಿಲ್ಲಿಸದೆ ಮುಂದುವರೆಸಿದವರು. ಮಹಾತ್ಮಾ ಗಾಂಧಿ ಕಾಲೇಜಿನ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ವಾಲಿಬಾಲ್ ತಂಡದ ನಾಯಕಿಯಾಗಿ ಇವರು ಮೂರು ವರ್ಷಗಳ ಕಾಲ ಕಾಲೇಜು ತಂಡವನ್ನು ಮುನ್ನಡೆಸಿದ್ದಾರೆ.
ಅಲ್ಲದೆ ಕರ್ನಾಟಕ ರಾಜ್ಯ ತಂಡವನ್ನು ಸಹ ನಾಲ್ಕು ವರ್ಷಗಳ ಪ್ರತಿನಿಧಿಸಿದ್ದಾರೆ. ಇದಾದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು ಪತಿ ರಾಜೇಶ್ ಅವರೊಂದಿಗೆ ಹದಿನಾರು ವರ್ಷಗಳ ಕಾಲ ಬಹೈರೇನ್’ನಲ್ಲಿ ವಾಸ ಮಾಡಿ ಅಲ್ಲೇ ದೈಹಿಕ ಶಿಕ್ಷಕ ವೃತ್ತಿಯನ್ನು ಮುಂದುವರೆಸಿದರು.
ತಮ್ಮ ಕ್ರೀಡಾ ಸಾಧನೆಯಲ್ಲಿ ಇವರು GCC ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೈಹರೇನ್ ದೇಶವನ್ನು ಪ್ರತಿನಿಧಿಸುವ ಮೂಲಕ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡರು. ಮಗಳ ವಿದ್ಯಾಭ್ಯಾಸದ ಕಾರಣ ಮಾತೃದೇಶಕ್ಕೆ ಮರಳಿದ ಶಾಲಿನಿಶೆಟ್ಟಿಯವರು ಇಲ್ಲಿಯೂ ಸುಮ್ಮನೆ ಕೂರದೆ ಐದರಿಂದ ಕಾಲೇಜು ಮಟ್ಟದ ಸುಮಾರು ಐವತ್ತರಿಂದ ಅರವತ್ತು ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ತರಬೇತಿ ನೀಡುವ ಕೆಲಸ ಮಾಡುತಿದ್ದಾರೆ. 2016ರ ಅಂತಾರಾಷ್ಟಿಯ ಮಾಸ್ಟರ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಈಕೆ ವಿದೇಶಿ ನೆಲದಲ್ಲಿ ನಡೆದ ಕ್ರೀಡೆಯಲ್ಲಿ ಭಾರತಕ್ಕೆ ಯಶಸ್ಸು ತಂದುಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಈಟಿ ಮತ್ತು ಗುಂಡು ಎಸೆತ ಇದರಲ್ಲಿ ಚಿನ್ನ ಹೈಜಂಪ್ ಮತ್ತು ಚಕ್ರ ಎಸೆತದಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಗೆದ್ದಿದ್ದಾರೆ. ಸಿಂಗಾಪುರ ದೇಶದಲ್ಲಿ ನಡೆದ 19ನೇ ಏಷ್ಯಾ ಚಾಂಪಿಯನ್ ಶಿಪ್’ನಲ್ಲಿ ಗುಂಡು ಎಸೆತದಲ್ಲಿ ಭರ್ಚಿ ಮತ್ತು ಗುಂಡು ಎಸೆತದಲ್ಲಿ ಬೆಳ್ಳಿ ಪದಕಗಳನ್ನು ಗೆದ್ದವರು. ಇದಲ್ಲದೆ ಚೀನಾದಲ್ಲಿ ನಡೆದ 20ನೇ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್’ನಲ್ಲಿ ಗುಂಡು ಎಸೆತದಲ್ಲಿ ಕಂಚು ಮತ್ತು ಈಟಿ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.
ಮೈಸೂರಿನಲ್ಲಿ ನಡೆದ ರಾಷ್ಟ ಮಟ್ಟದ ಪಂದ್ಯಾವಳಿಯಲ್ಲಿ ಗುಂಡು ಎಸೆತ, ಹೈಜಂಪ್, ಈಟಿ ಎಸೆತ ಇದರಲ್ಲಿ ಸಾಲಾಗಿ ಮೊದಲ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯ ಮಟ್ಟದ ಕ್ರೀಡೆಯಲ್ಲಿ ಚಾಂಪಿಯನ್ ಸಹ ಆಗಿರುವ ಶಾಲಿನಿಶೆಟ್ಟಿಯವರು, ಆಸ್ಟ್ರೇಲಿಯಾದ ಪರ್ತ್’ನಲ್ಲಿ ನಡೆದ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ Javelin (ಈಟಿ ) ಎಸೆತದಲ್ಲಿ ಕಂಚು ಗೆದ್ದಿದ್ದಾರೆ. ಇವರು ತರಬೇತಿ ನೀಡಿರುವ ಆಟಗಾರರು ತಾಲೂಕು, ಜಿಲ್ಲೆ, ರಾಜ್ಯ ರಾಷ್ಟ ಮತ್ತು ಅಂತಾರಾಷ್ಟಿಯ ಮಟ್ಟದ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಲ್ಲದೆ ಆರ್ಥಿಕ ಪರಿಸ್ಥಿತಿಯಲ್ಲಿ ಅಡಚಣೆ ಇರುವ ಪ್ರತಿಭಾವಂತ ಆಟಗಾರರಿಗೆ ಅವರ ಅಗತ್ಯ ವಸ್ತುಗಳನ್ನು ಕೊಳ್ಳಲು ಆರ್ಥಿಕ ನೆರವು ನೀಡುವ ಉದಾರ ಮನಸ್ಸು ಇವರದು.
ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸಹ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಶಾಲಿನಿ ಶೆಟ್ಟಿ ಅವರನ್ನು ಗುರುತಿಸದೆ ಇರುವುದು ಅತ್ಯಂತ ದೊಡ್ಡ ವಿಪರ್ಯಾಸ. ಇಷ್ಟು ಮಾತ್ರವಲ್ಲದೆ ದೇಶವನ್ನು ಅಂತಾರಾಷ್ಟಿಯ ಮಟ್ಟದಲ್ಲಿ ಪ್ರತಿನಿಧಿಸುವ ಸಮಯದಲ್ಲಿ ಸರ್ಕಾರ ಇವರಿಗೆ ಯಾವುದೇ ಸಹಾಯ ನೀಡದೆ ಇರುವುದು ಸಹ ನಮ್ಮ ದೇಶದಲ್ಲಿ ಇತರೆ ಕ್ರೀಡೆಗಳಿಗೆ ಎಷ್ಟು ಬೆಲೆ ಇದೆ ಎಂಬುದನ್ನು ತೋರಿಸುತ್ತದೆ. ಪ್ರತಿ ಬಾರಿ ಇವರು ಸ್ವಂತ ಖರ್ಚಿನಲ್ಲಿ (2.50 ಲಕ್ಷ) ಹೋಗಿ ಬರುವ ಅನಿವಾರ್ಯತೆ ಇದೆ. ಇದು ಕೇವಲ ಒಬ್ಬ ಕ್ರೀಡಾಪಟುವಿನ ಕತೆಯಲ್ಲ. ಬಹುತೇಕ ಪ್ರತಿಭೆಗಳ ಸ್ಥಿತಿ ಇದೆ ಆಗಿದೆ.
ಆರ್ಥಿಕವಾಗಿ ಹಿಂದುಳಿದ ಪ್ರತಿಭೆಗಳು ತಮ್ಮ ಕ್ರೀಡಾ ಜೀವನವನ್ನು ಸಾಯಿಸುವ ಪರಿಸ್ಥಿತಿ ಇದೆ. ಒಲಂಪಿಕ್ ಅಂತಹ ಕ್ರೀಡೆಗಳಲ್ಲಿ ಪದಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ ಎನ್ನುವ ಬದಲು ಇಂತಹ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಇತರರಲ್ಲಿ ಸಹ ಕ್ರೀಡೆಯ ಕುರಿತು ಅಭಿಮಾನ ಹುಟ್ಟು ಹಾಕುವ ಕೆಲಸ ಮಾಡುವ ಅನಿವಾರ್ಯತೆ ಇದೆ. ಅಲ್ಲದೆ ಪಾಲಕರು ಸಹ ಇದರತ್ತ ಗಮನ ಹರಿಸಬೇಕು. ಬರಿ ಅಂಕಗಳನ್ನು ಮಾತ್ರ ಪರಿಗಣಿಸದೆ ಅವರಲ್ಲಿ ಇರುವ ಪ್ರತಿಭೆಯನ್ನು ನೋಡಿ ಅದಕ್ಕೆ ಪ್ರೋತ್ಸಾಹ ನೀಡಬೇಕು. ಆಟಕ್ಕೆ ಮೊಬೈಲ್ ವಿಡಿಯೋ ಗೇಮ್ ನೀಡುವ ಬದಲು ದೇಶಿ ಕ್ರೀಡೆಗಳನ್ನು ಆಡಿಸಬೇಕಿದೆ. ಆಗ ಮಾತ್ರ ಭಾರತ ದೇಶಿ ಕ್ರೀಡೆಗಳು ಅಂತಾರಾಷ್ಟಿಯ ಮಟ್ಟದಲ್ಲಿ ಹೆಚ್ಚಿನ ಹೆಸರು ಮಾಡಲು ಸಾಧ್ಯ ಎನ್ನುವುದು ನನ್ನ ಅಭಿಪ್ರಾಯ.
ಹಾಗೆ ಇವರ ಎಲ್ಲಾ ಸಾಧನೆಗೆ ಬೆನ್ನೆಲುಬು ಇವರ ಪತಿ ರಾಜೇಶ್ ಶೆಟ್ಟಿ ಮತ್ತು ಮಗಳು ಸ್ಮೃತಿ ಶೆಟ್ಟಿ ಕಾರಣ ಎನ್ನುತ್ತಾರೆ ಶಾಲಿನಿಯವರು.
ಇವರು ಹೇಳುವಂತೆ ಕ್ರೀಡಾ ಲೋಕದಲ್ಲಿ ಸಾಧಿಸಿರುವ ಜನಪ್ರಿಯತೆ ಪಡೆದ ಆಟಗಾರರನ್ನು ತರಬೇತಿ ನೀಡುವ ಬದಲು ಕ್ರೀಡೆಯಲ್ಲಿ ಆಸಕ್ತಿರುವ ಪಟ್ಟ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಸಾಧಿಸುವ ಛಲ ಹುಟ್ಟಿಸಿ ಅವರನ್ನು ಕ್ರೀಡಾ ಲೋಕದ ಸಾಧಕರನ್ನಾಗಿಸಬೇಕು ಎನ್ನುವ ಅಭಿಪ್ರಾಯ ಶಾಲಿನಿಶೆಟ್ಟಿ ಅವರದು. ಇವರ ಕ್ರೀಡಾಕ್ಷೇತ್ರದ ಸಾಧನೆ ಹೀಗೆ ಮುಂದುವರೆಯಲಿ ಹಾಗೆಯೆ ದೇಶದ ಕೀರ್ತಿ ಇನ್ನಷ್ಟು ಹೆಚ್ಚಲಿಯೆಂದು ನಾವೆಲ್ಲರೂ ಪೆರ್ಡೂರು ಅನಂತ ಪದ್ಮನಾಭನಲ್ಲಿ ನಾವೆಲ್ಲರೂ ಪ್ರಾರ್ಥನೆ ಮಾಡೋಣ.
(ಕ್ರೀಡಾಭಿಮಾನಿಗಳು ನೀಡಿರುವ ಬಿರುದನ್ನು ಇಲ್ಲಿ ನಮೂದಿಸಲಾಗಿದೆ)
ಲೇಖನ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಮಾಹಿತಿ ಸಂಗ್ರಹ: ರೋಹನ್ ಪಿಂಟೋ ಗೇರುಸೊಪ್ಪ
Discussion about this post