ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಇತ್ತೀಚಿಗೆ ಬಂಟ್ವಾಳದಲ್ಲಿ ನಡೆದ ಯುವತಿಯ ದಾರುಣವಾದ ಕೊಲೆಯನ್ನು(Youth Crime) ನೋಡಿದಾಗ ಅದೊಂದೇ ಅಲ್ಲ ಆ ರೀತಿಯ ಅನೇಕ ಪ್ರಕರಣಗಳನ್ನು ನಮ್ಮ ಸಮಾಜದ ಸುತ್ತಲೂ ಕೇಳುತ್ತಲೇ ಇರುತ್ತೇವೆ. ಆಗಿನ ಕಾಲದಲ್ಲಿ ಅಪರೂಪ ಎನಿಸುತ್ತಿದ್ದ ಕೊಲೆ, ಸುಲಿಗೆ, ಆತ್ಮಹತ್ಯೆ, ಅತ್ಯಾಚಾರದಂತಹ ಪ್ರಕರಣಗಳು ಪ್ರಸ್ತುತ ದಿನಗಳಲ್ಲಿ ಪ್ರತಿನಿತ್ಯ ಪತ್ರಿಕೆಗಳಲ್ಲಿ ಹಾಗೂ ದೃಶ್ಯಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಾಗಿದೆ.
ಉಪನಿಷತ್ತಿನ ಈ ಸಾಲುಗಳು
ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ l
ಸ್ಥಿರೈರಂಗೈಃ ಸ್ತುಷ್ಟುವಾಗುಂ ಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ II ಎಂಬ ವಾತಾವರಣ ನಮ್ಮ ಮನೆ ಮನಗಳಲ್ಲಿ ಅಂದು ಸಹಜವಾಗಿಯೇ ಹಾಸುಹೋಕ್ಕಾಗಿತ್ತು.
ಮನೆ ಎಂದರೆ ಎಲ್ಲರೂ ಒಟ್ಟಿಗೇ ಕಲೆತು, ಬೆರೆತು ಕಷ್ಟ ಸುಖಗಳಲ್ಲಿ ಒಂದಾಗಿ ಪರಸ್ಪರಂ ಭಾವಯಂತಃ…ಎಂಬಂತೆ ನಂದಗೋಕುಲದ ಹಾಗೇ ಇತ್ತು. ಅವಿಭಕ್ತ ಕುಟುಂಬದಲ್ಲಿ ಹಾಡು, ಹರಟೆ, ನಗು, ಜಗಳ, ಮುನಿಸು, ಕೋಪ ಎಲ್ಲವೂ ಇರುತಿತ್ತು. ಎಲ್ಲರೂ ಒಟ್ಟಿಗೆ ಊಟ ಮಾಡುತಿದ್ದೆವು. ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೆವು, ಮನೆಯಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ,ಅಕ್ಕ, ತಂಗಿ, ಅಣ್ಣ, ತಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ಕೂಡಿಯೇ ಇರುತ್ತಿದ್ದೆವು. ಏನೇ ಸಮಸ್ಯೆ ಇದ್ದರೂ ಒಬ್ಬರಲ್ಲ ಒಬ್ಬರ ಬಳಿ ಹೇಳಿಕೊಳ್ಳುತ್ತಿದ್ದೆವು ಅಲ್ಲಿ ಪರಿಹಾರವೂ ದೊರೆಯುತ್ತಿತ್ತು. ಸೂಕ್ಷ್ಮ ಮನಸ್ಸು, ಒಂಟಿತನ, ಇವುಗಳನ್ನು ಕೇಳಿಯೇ ಇರಲಿಲ್ಲ ನಾವು. ಶಾಲೆ, ಆಟ, ಪಾಠ ಎಲ್ಲದರಲ್ಲೂ ಎಲ್ಲರೊಂದಿಗೆ ಬೆರೆತು ಸಂತಸದಿಂದ ಇರುತ್ತಿದ್ದೆವು. ಸಣ್ಣ ಪುಟ್ಟ ಜಗಳ ಮುನಿಸುಗಳು ಇದ್ದರೂ ಅದರ ಅವಧಿ ತುಂಬಾ ಕಡಿಮೆ.
ಸಹಜವಾಗಿಯೇ ಮನೆಯ ಹಿರಿಯರು ಸಂಸ್ಕಾರದ ರೂವಾರಿಗಳಾಗಿದ್ದರು. ಪರಸ್ಪರ ಕೂಡಿ ಬದುಕು, ಹಂಚಿ ತಿನ್ನು, ಹಿರಿಯರನ್ನು ಗೌರವಿಸು, ಮನೆಯ ಕೆಲಸಗಳಲ್ಲಿ ಸಹಾಯ ಮಾಡು, ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಭಾಗಿಯಾಗು, ವಿಶೇಷ ದಿನಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಸಂತೋಷಪಡುವುದು ಇತ್ಯಾದಿಗಳೆಲ್ಲ ನಮ್ಮನ್ನು ರೂಪಿಸಿದ ಸಂಗತಿಗಳಾಗಿದ್ದವು.
ಆಗ ದೂರದರ್ಶನ ಇದ್ದರೂ ಎಲ್ಲರ ಮನೆಗಳಲ್ಲಿ ಇರುತ್ತಿರಲಿಲ್ಲ. ರೇಡಿಯೋ ಇದ್ದರೂ ಅದರಲ್ಲಿ ಉತ್ಕೃಷ್ಟ ಹಾಗೂ ಮೌಲ್ಯಯುತ ಕಾರ್ಯಕ್ರಮಗಳೇ ಪ್ರಸಾರವಾಗುತ್ತಿದ್ದವು. ದೂರದರ್ಶನದಲ್ಲೂ ಇತ್ತೀಚಿನ ದಿನಗಳ ಹಾಗೆ ಮನೆ ಮುರುಕ ಧಾರವಾಹಿಗಳು, ಹೆಣ್ಣು ಮಕ್ಕಳೇ ವಿಲ್ಲನ್ ಆಗಿರುವಂತಹ, ಮನೆಯವರೇ ಶತ್ರುಗಳಾಗುವ, ಮನೆಯವರೇ ಮನೆಯವರನ್ನು ಕೊಲ್ಲಲು ಸಂಚು ಮಾಡುವ, ಎರಡು ಮೂರು ಹೆಂಡತಿಯರಿರುವ ಇತ್ಯಾದಿ ಮನಸ್ಸನ್ನು ಕದಡುವ ಯಾವುದೇ ಧಾರವಾಹಿ, ಸಿನಿಮಾಗಳು ಇರುತ್ತಿರಲಿಲ್ಲ. ಮನೆಯವರೆಲ್ಲರೂ ಕೂಡಿ ಒಟ್ಟಿಗೆ ನೋಡಬಹುದಾದ ಅಶ್ಲೀಲವಲ್ಲದ ಚಿತ್ರಗಳನ್ನು ಅಂದು ಕಾಣ ಬಹು ದಿತ್ತು.
ನೀತಿವಂತರಾಗಿ ಜನರೇ ಬಾಳುತ್ತಿದ್ದರು. ಪ್ರಾಮಾಣಿಕತೆ ಇತ್ತು. ಸಮಾಜದಲ್ಲಿ ಸ್ತ್ರೀಯರನ್ನು ಗೌರವಯುತವಾಗಿ ಕಾಣುತ್ತಿದ್ದರು. ದುಷ್ಟರ ಸಂಖ್ಯೆ ಕಡಿಮೆ ಇತ್ತು. ಬದುಕಿನ ಗುಣಮಟ್ಟ ಶ್ರೇಷ್ಠತೆಯಿಂದಲೇ ಕೂಡಿತ್ತು. ಆದಾಯ ಕಡಿಮೆ ಇದ್ದರೂ ಅಸೂಯೆ ಇರಲಿಲ್ಲ. ಇರುವುದರಲ್ಲಿ ಸಂಭ್ರಮಿಸಿ ಬದುಕುವ ಕಲೆ ಗೊತ್ತಿತ್ತು. ಎಲ್ಲವೂ ತುಂಬು ಶ್ರೀಮಂತಿಕೆಯ ಮನಸ್ಥಿತಿಯಿಂದ ಕೂಡಿದ್ದುದರಿಂದಲೇ ಬದುಕು ಹಸನಾಗಿತ್ತು.
ಶಾಲೆಗಳು ಸಹ ಮೌಲ್ಯವನ್ನ ಪ್ರತಿಪಾದಿಸುತ್ತಿದ್ದವು. ಕಾರ್ಪೊರೇಟ್ ಗಳಾಗಿರಲಿಲ್ಲ. ಹಬ್ಬದ ದಿನಗಳಿಗೆ ರಜೆ ಇದ್ದು, ಅವುಗಳನ್ನು ಆಚರಿಸಲು ಮಕ್ಕಳಿಗೆ ಅವಕಾಶವನ್ನು ನೀಡುತ್ತಿದ್ದರು. ಪರೀಕ್ಷೆಗಳು ಸಹ ಹಬ್ಬಗಳ ಆಚರಣೆಗೆ ಅಡ್ಡಿಯಾಗುವಂತಿರಲಿಲ್ಲ. ಶಿಕ್ಷಣ ಬದುಕಿಗೆ ಅಗತ್ಯ ಎಂದು ಕೊಡಿಸುತ್ತಿದ್ದರೇ ಹೊರತು ದುಡಿಮೆಗಾಗಿ ಅಲ್ಲ. ಅಲ್ಲೂ ಶಿಸ್ತು ಪಾಲನೆಗೆ ಒತ್ತು ನೀಡಲಾಗಿತ್ತು. ಆದರೆ ಇಂದು ಒತ್ತಾಯದ ಶಿಸ್ತು, ಹಿಂಸೆಯ ಶಿಕ್ಷಣ, ಸಂಪಾದನೆಗಾಗಿ ಓದು, ಇವುಗಳು ಮಕ್ಕಳ ಮುಗ್ಧತೆ, ಬಾಲ್ಯ, ಕ್ರಿಯಾಶೀಲತೆಯನ್ನು ಕಸಿಯುತ್ತಿವೆ. ಅರಳಬೇಕಾದ ಮನಸ್ಸುಗಳು ಮುದುಡಿ ಹೋಗುತ್ತಿವೆ. ಎಲ್ಲೆಡೆಯೂ ಟೆನ್ಶನ್ ಎಂಬ ಭೂತ ತಾಂಡವ ಆಡುತ್ತಿದೆ. ಶ್ರೀಮಂತನಾಗುವ ಬಯಕೆ, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿರುವುದು, ನಾಳಿನ ಬಗೆಗಿನ ಚಿಂತನೆಯ ಅರಿವಿಲ್ಲದೆಯೇ ಇಂದಿನ ಯುವ ಜನತೆಯ ಬದುಕು ನಲುಗಿದೆ ಎಂದರೆ ತಪ್ಪಾಗಲಾರದು.
ಮನಸ್ಸಿನ ತಲ್ಲಣಗಳನ್ನು ಹೇಳಿಕೊಳ್ಳಲು ಆಗ ಸಮಯವಿತ್ತು, ಕೇಳುವ ಕಿವಿಯೂ ಇತ್ತು. ಆದರೆ ಈಗ ಎರಡೂ ಇಲ್ಲದಂತಾಗಿದೆ. ಎಲ್ಲದರ ಸ್ಥಾನವನ್ನು ಮೊಬೈಲ್ ಆಕ್ರಮಿಸಿದೆ. ಸಾಮಾಜಿಕ ಜಾಲ ತಾಣಗಳೂ ಸಹ ಒಳ್ಳೆಯದಕ್ಕೆ ಬಳಕೆ ಆಗುವುದಕ್ಕಿಂತ, ಬೇಡದ ಇತರೇ ಆಮಿಶಗಳ ಸಂಗತಿಗಳಿಗೆ ಬಳಕೆಯಾಗುತ್ತಿದೆ. ಸಮೃದ್ಧ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿ ಅನುಕರಿಸುವಂತೆಯಾಗಿದೆ. ಭಾರತೀಯತೆಯನ್ನು ತಿರಸ್ಕರಿಸಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣ, ಗುರು-ಹಿರಿಯರಲ್ಲಿ ಗೌರವ ನೀಡದೇ ಇರುವುದು ಈ ಅಧಃಪತನಕ್ಕೆ ಕಾರಣವಾಗಿದೆ.
ಮನೆಯಲ್ಲಿ ಮೊದಲು ಸಂಸ್ಕಾರ ಕಲಿಸಬೇಕು. ಗುರು ಹಿರಿಯರಿಗೆ ಗೌರವ, ಧರ್ಮ, ನೈತಿಕತೆಗೆ ಪ್ರಾಮುಖ್ಯತೆ ಇತ್ಯಾದಿ ಜೀವನ ಮೌಲ್ಯಗಳು ಬಾಲ್ಯದಿಂದಲೇ ಬಂದಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.
ಭಾರತೀಯ ಕುಟುಂಬ ಪದ್ಧತಿಯಲ್ಲಿನ ಒಟ್ಟಿಗೆ ಊಟ, ಪೂಜೆ, ಹಬ್ಬಗಳ ಆಚರಣೆ, ಇದರಿಂದ ಪರಸ್ಪರ ಸಂವಾದಗಳಿಗೆ ಅವಕಾಶ ದೊರೆಯುತ್ತದೆ. ಪರಸ್ಪರ ಮಾತಾಡಿದರೆ ಅನೇಕ ತಲ್ಲಣಗಳಿಗೆ ಅಲ್ಲಿಯೇ ಪರಿಹಾರವೂ ದೊರೆಯುತ್ತದೆ.
Also Read>> ಯಡಕುಮರಿ ಬಳಿ ಭೂಕುಸಿತ | ಬೆಂಗಳೂರು, ಮಂಗಳೂರು 6 ರೈಲುಗಳ ಮಾರ್ಗ ಬದಲಾವಣೆ
ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಅಜ್ಜ ಅಜ್ಜಿ, ಚಿಕ್ಕಪ್ಪ ಚಿಕ್ಕಮ್ಮ, ಮಾವ ಮೊದಲಾದವರೊಂದಿಗೆ ಒಟ್ಟಿಗೆ ಖುಷಿಯಿಂದ ಬೆಳೆದ ಮಕ್ಕಳು ಭಾವನಾತ್ಮಕವಾಗಿ ಒಂಟಿತನ ಅನುಭವಿಸುವುದಿಲ್ಲ. ಇಂದಿನ ಕಾಲದಲ್ಲಿ ಕುಟುಂಬದ ಹಿರಿಯರು ಮಕ್ಕಳ ಭಾವನೆಗಳನ್ನು ಕೇಳಬೇಕಾದ ಅನಿವಾರ್ಯತೆ ಇದೆ. ಅಗತ್ಯವಿದ್ದಲ್ಲಿ ತಜ್ಞರ ಸಲಹೆಯನ್ನು, ಆಪ್ತ ಸಮಾಲೋಚಕರ ಸಹಾಯವನ್ನು ಪಡೆದು ಅವರಿಗೆ ಕಂಪರ್ಟ್ ಫೀಲ್ ಕೊಡುವುದೂ ಸಹ ಜವಾಬ್ದಾರಿಯ ಭಾಗವೇ ಆಗಬೇಕು. ಇದು ಕುಟುಂಬಗಳನ್ನು ಇನ್ನಷ್ಟು ಬಲಪಡಿಸಲು ಪೂರಕ.
ಮನೆಯಲ್ಲಿ ಭಗವದ್ಗೀತೆ, ಭಾಗವತ, ರಾಮಾಯಣ ಮಹಾಭಾರತ ಮೊದಲಾದ ಗ್ರಂಥಗಳ ಕುರಿತು ಮಕ್ಕಳಿಗೆ ತಿಳಿಸುತ್ತಿರಬೇಕು. ಅವುಗಳಿಂದ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವವನ್ನು ಬೆಳೆಸುವಂತಾಗುತ್ತದೆ.
ತಾಯಿ ತಂದೆ ಗುರುಗಳು ಮಗುವಿನ ಜೀವನದ ಪ್ರಮುಖ ಸ್ತಂಭಗಳು. ಈ ಮೂರರ ನಡುವೆ ಪ್ರೀತಿ ವಿಶ್ವಾಸ ಮತ್ತು ನಿರಂತರ ಸಂವಾದ ಇದ್ದರೆ ಸಮಸ್ಯೆಗಳನ್ನು ಆರಂಭದಲ್ಲಿಯೇ ಎದುರಿಸಲು ಸಾಧ್ಯವಾಗುತ್ತದೆ. ಒಮ್ಮೊಮ್ಮೆ ಮಕ್ಕಳ ಆಲೋಚನೆಗೂ ಗೌರವ ಕೊಡಬೇಕಾಗುತ್ತದೆ.
ಕುಟುಂಬದ ಸಂಸ್ಕಾರ, ಶಾಲೆಯ ಬೆಂಬಲ, ಸಮಾಜದ ಜವಾಬ್ದಾರಿ. ಅಗತ್ಯವಿದ್ದರೆ ಮಾನಸಿಕ ಆರೋಗ್ಯ ಸೇವೆಗಳ ನೆರವು ಇವೆಲ್ಲವೂ ಸೇರಿ ಮಕ್ಕಳಿಗೆ ಸುರಕ್ಷಿತ ಮತ್ತು ಪ್ರೀತಿ ಪೂರ್ವಕ ವಾತಾವರಣ ನೀಡುತ್ತವೆ. ಭಾರತೀಯ ಹಿಂದೂ ಕುಟುಂಬ ಪದ್ಧತಿಯಲ್ಲಿರುವ ಪ್ರೀತಿ, ಜವಾಬ್ದಾರಿ, ಪರಸ್ಪರ ಕಾಳಜಿ ಮತ್ತು ಸಂವಾದದ ಮೌಲ್ಯಗಳು ಈ ದಿಕ್ಕಿನಲ್ಲಿ ಮಹತ್ವದ ಕೊಡುಗೆ ನೀಡಬಲ್ಲದು.
ಮಾನಸಿಕ ಒತ್ತಡ
ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಆತಂಕ.
ಸಾಮಾಜಿಕ ಮಾಧ್ಯಮದ ಪ್ರಭಾವ
ಇತರರ ಯಶಸ್ಸಿನೊಂದಿಗೆ ನಿರಂತರ ಹೋಲಿಕೆ, ಸೈಬರ್ ಬುಲ್ಲಿಯಿಂಗ್, ಮತ್ತು “ಪರಿಪೂರ್ಣ ಜೀವನ” ಎಂಬ ಭ್ರಮೆ.
ಏಕಾಂಗಿ ಜೀವನ
ಕುಟುಂಬದೊಂದಿಗೆ ಕಡಿಮೆ ಸಂವಹನ, ಸ್ನೇಹಿತರ ಬೆಂಬಲದ ಕೊರತೆ, ಸಾಮಾಜಿಕ ಸಂಪರ್ಕ ಕಡಿಮೆಯಾಗುವುದು.
ಮಾನಸಿಕ ಆರೋಗ್ಯ ಸಮಸ್ಯೆಗಳು
ಖಿನ್ನತೆ (Depression), ಆತಂಕ (Anxiety), ವ್ಯಸನ, ಹಾಗೂ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಮಯಕ್ಕೆ ಚಿಕಿತ್ಸೆ ದೊರೆಯದಿರುವುದು.
ಮಾದಕ ವಸ್ತುಗಳ ಬಳಕೆ
ಮದ್ಯ, ಮಾದಕ ದ್ರವ್ಯಗಳು ಅಥವಾ ಇತರ ವ್ಯಸನಗಳು ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಬಹುದು.
ಹಿಂಸಾತ್ಮಕ ವಿಷಯಗಳ ಪ್ರಭಾವ
ಕೆಲವು ಸಿನಿಮಾಗಳು, ಆಟಗಳು ಅಥವಾ ಆನ್ಲೈನ್ ವಿಷಯಗಳು ಕೆಲವು ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಇವು ಮಾತ್ರವೇ ಅಪರಾಧಕ್ಕೆ ನೇರ ಕಾರಣವಾಗುವುದಿಲ್ಲ; ವ್ಯಕ್ತಿಯ ಪರಿಸ್ಥಿತಿ, ಕುಟುಂಬ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಅಂಶಗಳೂ ಮುಖ್ಯ.
ಕುಟುಂಬ ಮತ್ತು ಸಮಾಜದ ಬೆಂಬಲದ ಕೊರತೆ
ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇಲ್ಲದಿರುವುದು.
ಆತ್ಮಹತ್ಯೆ ಮತ್ತು ಅಪರಾಧ ಎರಡೂ ಒಂದೇ ಕಾರಣದಿಂದ ಉಂಟಾಗುವುದಿಲ್ಲ. ಆತ್ಮಹತ್ಯೆ ಸಾಮಾನ್ಯವಾಗಿ ತೀವ್ರ ಮಾನಸಿಕ ನೋವು ಮತ್ತು ನಿರಾಶೆಯೊಂದಿಗೆ ಸಂಬಂಧ ಹೊಂದಿದ್ದರೆ, ಅಪರಾಧದ ಹಿಂದೆ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಮತ್ತು ಕೆಲವೊಮ್ಮೆ ಮಾನಸಿಕ ಅಂಶಗಳ ಸಂಕೀರ್ಣ ಸಂಯೋಜನೆ ಇರುತ್ತದೆ.
Youth Crime : ಸಂಸ್ಕಾರದ ಕೊರತೆಯೂ ಸಹ ಕಾರಣ
ಸಮಾಜದಲ್ಲಿ ಯುವಕ ಸಮೂಹದಲ್ಲಿ ಹೆಚ್ಚುತ್ತಿರುವ ಅಪರಾಧಿ ಮನೋಭಾವನೆ, ಆತ್ಮಹತ್ಯೆಯ ಮನಃಸ್ಥಿತಿ, ನೈತಿಕ ಮೌಲ್ಯಗಳ ಕುಸಿತ ಸೇರಿದಂತೆ ಹಲವು ನಕಾರಾತ್ಮಕ ಬೆಳವಣಿಗೆಗಳಿಗೆ ಸಂಸ್ಕಾರ ಕೊರತೆಯೂ ಸಹ ಕಾರಣ ಎನ್ನಬಹುದು.
ನೈತಿಕ ಮೌಲ್ಯಗಳ ದುರ್ಬಲತೆ
ಸತ್ಯ, ಪ್ರಾಮಾಣಿಕತೆ, ಕಾನೂನಿನ ಗೌರವ ಮತ್ತು ಇತರರ ಭಾವನೆಗಳಿಗೆ ಮೌಲ್ಯ ನೀಡುವ ಗುಣಗಳು ಬೆಳೆದಿಲ್ಲದಿದ್ದರೆ, ತಪ್ಪು ನಿರ್ಧಾರಗಳ ಸಾಧ್ಯತೆ ಹೆಚ್ಚಾಗಬಹುದು.
ಸಹಾನುಭೂತಿಯ ಕೊರತೆ
ಇತರರ ನೋವು ಅಥವಾ ಹಕ್ಕುಗಳ ಬಗ್ಗೆ ಸಂವೇದನೆ ಕಡಿಮೆಯಾದರೆ, ಹಿಂಸೆ ಅಥವಾ ಅಪರಾಧದತ್ತ ಒಲವು ಹೆಚ್ಚಾಗುವ ಸಾಧ್ಯತೆ ಇದೆ.
ಕೋಪ ಮತ್ತು ಭಾವನೆಗಳ ನಿಯಂತ್ರಣದ ಕೊರತೆ
ಸಹನೆ, ಆತ್ಮಸಂಯಮ ಮತ್ತು ಸಮಸ್ಯೆಗಳನ್ನು ಶಾಂತಿಯುತವಾಗಿ ಎದುರಿಸುವ ಕೌಶಲ್ಯಗಳು ಬೆಳೆಯದಿದ್ದರೆ, ಆವೇಗದಲ್ಲಿ ತಪ್ಪು ನಡೆ ಉಂಟಾಗಬಹುದು.
ಕುಟುಂಬದ ಮಾರ್ಗದರ್ಶನದ ಕೊರತೆ
ಪೋಷಕರೊಂದಿಗೆ ಸಮಯ, ಸಂವಾದ ಮತ್ತು ಉತ್ತಮ ಮಾದರಿಯ ಕೊರತೆಯಿಂದ ಮಕ್ಕಳ ಮೌಲ್ಯಗಳ ಬೆಳವಣಿಗೆಗೆ ಪರಿಣಾಮ ಬೀರಬಹುದು.
ಜವಾಬ್ದಾರಿಯ ಅರಿವಿನ ಕೊರತೆ
ತನ್ನ ನಡೆ-ನುಡಿಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳದಿದ್ದರೆ, ಸಮಾಜ ವಿರೋಧಿ ವರ್ತನೆಯ ಅಪಾಯ ಹೆಚ್ಚಾಗಬಹುದು.
ಆತ್ಮಹತ್ಯೆ ಸಾಮಾನ್ಯವಾಗಿ ಖಿನ್ನತೆ, ತೀವ್ರ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು, ಆಘಾತಕಾರಿ ಅನುಭವಗಳು, ಏಕಾಂಗಿ ಭಾವನೆ ಅಥವಾ ನೆರವಿನ ಕೊರತೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿರುತ್ತದೆ. ಉತ್ತಮ ಸಂಸ್ಕಾರ ಹೊಂದಿರುವ ವ್ಯಕ್ತಿಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಸಂಸ್ಕಾರವು ಉತ್ತಮ ವ್ಯಕ್ತಿತ್ವ ಮತ್ತು ಜವಾಬ್ದಾರಿಯುತ ನಾಗರಿಕನನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಯುವಕರಲ್ಲಿ ಆತ್ಮಹತ್ಯೆ ಮತ್ತು ಅಪರಾಧ ಮನಃಸ್ಥಿತಿಗೆ ಸಂಸ್ಕಾರ ಕೊರತೆಯೊಂದೇ ಕಾರಣವಲ್ಲ. ಕುಟುಂಬ, ಶಿಕ್ಷಣ, ಮಾನಸಿಕ ಆರೋಗ್ಯ, ಸಾಮಾಜಿಕ ಪರಿಸರ, ಆರ್ಥಿಕ ಒತ್ತಡ, ಸ್ನೇಹಿತರ ಪ್ರಭಾವ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಹಲವು ಅಂಶಗಳು ಒಟ್ಟಾಗಿ ಪರಿಣಾಮ ಬೀರುತ್ತವೆ.
ತಡೆಗಟ್ಟಲು ಏನು ಮಾಡಬಹುದು?
- ಕುಟುಂಬದಲ್ಲಿ ಮುಕ್ತ ಸಂಭಾಷಣೆಗೆ ಅವಕಾಶ ಕಲ್ಪಿಸುವುದು.
- ಶಾಲೆ ಮತ್ತು ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಶಿಕ್ಷಣ ಮತ್ತು ಕೌನ್ಸೆಲಿಂಗ್ಗೆ ಆದ್ಯತೆ ನೀಡುವುದು.
- ಸಾಮಾಜಿಕ ಮಾಧ್ಯಮವನ್ನು ಸಮತೋಲನದಿಂದ ಬಳಸುವುದು.
- ಒತ್ತಡವನ್ನು ನಿಭಾಯಿಸಲು ಕ್ರೀಡೆ, ಕಲೆ, ಧ್ಯಾನ ಅಥವಾ ಹವ್ಯಾಸಗಳನ್ನು ಉತ್ತೇಜಿಸುವುದು.
- ಅಗತ್ಯವಿದ್ದರೆ ಮನೋವೈದ್ಯರು ಅಥವಾ ಮನೋವಿಜ್ಞಾನಿಗಳ ಸಹಾಯ ಪಡೆಯಲು ಹಿಂಜರಿಯದಿರುವುದು.
ಯಾವುದೇ ಯುವಕ ಅಥವಾ ಯುವತಿ ತಮ್ಮ ಜೀವನಕ್ಕೆ ಅಂತ್ಯಹಾಕಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದರೆ ಅಥವಾ ತೀವ್ರ ನಿರಾಶೆಯ ಲಕ್ಷಣಗಳನ್ನು ತೋರಿಸುತ್ತಿದ್ದರೆ, ಅದನ್ನು ಎಂದಿಗೂ ನಿರ್ಲಕ್ಷಿಸಬಾರದು. ತಕ್ಷಣವೇ ಕುಟುಂಬದವರು, ವಿಶ್ವಾಸಾರ್ಹ ವ್ಯಕ್ತಿ ಅಥವಾ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯುವುದು ಅತ್ಯಂತ ಮುಖ್ಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







