ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈ ಪ್ರಕೃತಿ ಎಷ್ಟೊಂದು ಸೋಜಿಗ ಅಲ್ಲವೇ? ಒಂದೆಡೆ ಹಸಿರ ಹಾಸು, ಇನ್ನೊಂದೆಡೆ ಬಿರುಕು ಬಿಟ್ಟ ಭೂಮಿ ಮತ್ತದೇ ಮೈಕೊರೆಯುವ ಹಿಮದ ರಾಶಿ, ವಿಶಿಷ್ಟ ಜಗತ್ತಿನಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಕಾಲಂತರದಲ್ಲಿ ಬಂದು ಹೋಗುವ ಸಂಬಂಧಿಕರಂತೆ ಅನಿಸಿಬಿಡುತ್ತದೆ ಅಷ್ಟರ ಮಟ್ಟಿಗೆ ಹಾಸಿಕೊಂಡಿವೆ ನಮ್ಮೊಳಗೆ.
ಇದರ ನಡುವೆ ಆ ಮೊದಲ ಹನಿಗಾಗಿ ಕಾಯುವ ಕೊಡೆಯು ನನ್ನೊಳಗೆ ಹೊಕ್ಕ ಮಳೆಗಾಲದ ಸಾಹುಕಾರ! ಬಿಟ್ಟು ಬಿಡದಂತ ಸೆಳೆತ ಅವನ ಮೇಲೆ. ಅವನ ಹುಡುಕುವಿಕೆಯಲ್ಲೂ ನಾವು ಬಣ್ಣಗಳ ಮೊರೆ ಹೋಗಿ ಬಿಡುತ್ತೇವೆ, ಅಲ್ಲಿಯೂ ತಾರತಮ್ಯ. ಈ ಸಾಹುಕಾರನ ಅಪ್ಪುಗೆಗಾಗಿ ಅದೆಷ್ಟೋ ಹನಿಗಳು ಬಣ್ಣಗಳಾಗಿ ಪ್ರಥಮ ಮುತ್ತಿನ ಸಿಂಚನಕ್ಕಾಗಿ ಕಾಯುತ್ತಾ ಕೂತಿರುತ್ತವೆ. ಈ ಜಗತ್ತೆ ಹಾಗೆರೀ. ಬಣ್ಣಗಳಲಿ ಹೊರಳಾಡಿಸುವ ಜಾದುಗಾರ.
ಪುರಾತನ ಕಾಲದಿಂದಲೂ ಅಜ್ಜನ ಊರುಗೋಲಾಗಿ, ಅಜ್ಜಿಗೆ ಕಂಕುಳ ಸಂಚಿಯಾಗಿ, ತಾರೆಯರಿಗೆ ಮೆರುಗು ತುಂಬಿಕೊಟ್ಟವನು ಇವನು. ಇಂದಿಗೂ ಬಣ್ಣಗಳನು ಬದಲಿಸುತ್ತ ಮೆರುಗು ತುಂಬಿ ಹನಿಗಳಿಗೆ ಚುಂಬಿಸುತ್ತಾ ಇರುವ ಕಾವಲುಗಾರ ಈತ! ಇಂದಿನ ದಿನಮಾನದಲ್ಲಿ ಈ ಬಣ್ಣದ ಛಾಮರ ಹುಡುಕಲೆಂದೇ ಒಂದರಗಳಿಗೆ ಮೀಸಲಿಡುವುದುಂಟು ಅಷ್ಟರ ಮಟ್ಟಿಗೆ ಮನದೊಳಗಿನ ಮೋಜುಗಾರನಾಗಿ ಬಿಟ್ಟಿದ್ದಾನೆ. ಈ ಛತ್ರಿಯಲ್ಲಿ ನಾನಾಬಗೆಯ ನಮೂನೆಯನ್ನು ನೋಡಬಹುದು.
ಸುಮಾರು ನೂರು ರೂಪಾಯಿಂದ ಹಿಡಿದು ತೊಂಬತ್ತು ಸಾವಿರ ರಾಶಿಯನೇ ಹಾಕಿಬಿಡುವಷ್ಟರ ಮಟ್ಟಿಗೆ ಐಶಾರಾಮಿ ಜೀವನ ಹೊಂದಿದೆ. ಬಡತನದ ಹೂವಾಗಿ ಸಿರಿತನದ ಸೊಬಗಾಗಿ ಕಂಡ ಛಾಯೇ ಈ ಮಾಯೆ. ಹರೆಯದ ಹುಡುಗಿಯರಂತು ಹನಿಯ ಚುಂಬಿಸುವ ಬರದಲ್ಲಿ ಈ ಛತ್ರಿಯ ಕಳೆಯನ್ನೇ ಹೆಚ್ಚುಗೊಳಿಸಿಬಿಡುತ್ತಾರೆ. ಬಣ್ಣಗಳನ್ನು ಅಪ್ಪಿಕೊಂಡು ಮುದ್ದಾಡುತ್ತಾರೆ. ಈ ಬಣ್ಣದ ಕೊಡೆ ಕೈಜಾರಿದರೆ ಜೀವವನವೇ ಮುಗಿದವರಂತೆ ಬಿಕ್ಕುತ್ತಾರೆ. ಈ ಕೊಡೆಗೆ ಇವರಿಗಿರುವ ಸಂಬಂಧ ಎಷ್ಟು ಗಟ್ಟಿಯಾಗಿದೆ ಅಲ್ಲವೇ!
ಬರದಿ ಸಾಗುವ ಜಗತ್ತಿನಲ್ಲಿ ಬದಲಾವಣೆ ಸಹಜ ಹಿಂದೆ ಇದೆ ಕೊಡೆಯು ಹೊರಲಾರದಷ್ಟು ಭಾರ ಎನಿಸುತ್ತಿತ್ತು. ಈಗ ಅಂಗೈಯಲ್ಲಿ ಮುದುರಿಕೊಂಡರೆ ಯಾವುದೋ ಹೂವನ್ನೆ ಕೈಯಲ್ಲಿ ಹಿಡಿದಿರಬಹುದೇನೋ ಅನಿಸಿಬಿಡುತ್ತೆ. ಸುಂದರತೆಯೊಳಗೆ ಹೊಕ್ಕು ಛತ್ರಿಯ ಮನವು ಹಗುರಾಗಿದೇರಿ, ಮನಗಳು ಭಾರವಾಗಿಬಿಟ್ಟಿವೆ ಅಷ್ಟೇ! ಈ ಛತ್ರಿಯ ರೂಪ, ಬಣ್ಣ ಹೊಳಪು, ತೊಟ್ಟ ಬಟ್ಟೆ ಬೇರೆಯಾಗಿರಬಹುದು ಅದು ಶ್ರೀಮಂತನ ಸಿಂಹಾಸನದ ಪಕ್ಕದಲ್ಲಿ ಕೂರಬಹುದು. ಬಡವನು ಸೂರಲ್ಲಿ ಸಿಕ್ಕಿಸಿಕೊಂಡು ಇರಬಹುದು. ಬಂಗಾರದ ಹಿಡಿಯ ತೊಟ್ಟರು ಸರಿಯೇ, ಮರದ ಕಡ್ಡಿಯನ್ನು ಸಿಕ್ಕಿಸಿಕೊಂಡು ಸಡಗರಪಟ್ಟರು ಸರಿಯೇ ಬೇಧವಿಲ್ಲದೆ ಎಲ್ಲರೊಳಗೆ ಒಂದಾಗಿಬಿಡುತ್ತದೆ. ಇದು ಬರಿ ವಸ್ತು ಆಗಿಯಂತೂ ಕಾಣದು ಹೃದಯ ಸಾಮ್ರಾಜ್ಯದ ಜಾದುಗಾರನೇ ಸರಿ. ಇವನಿಗಿರುವ ಹೊಟ್ಟೆಕಿಚ್ಚು ನೋಡಿ. ಸೂರ್ಯ ತನ್ನರಸನತ್ತ ಕಣ್ಣಾಯಿಸಿ ಸೆಳೆದು ಬಿಡಬಹುದು ಎಂದು ತಾನೇ ಎಲ್ಲಾ ಬೇಗೆಯನ್ನು ಸಹಿಸಿಕೊಂಡು, ಮನೆತನಕ ಕೂಡ ಮರೆಮಾಚಿ ಕರೆತಂದು ಮೆರುಗು ತರುತ್ತಾನೆ. ಈತನಲ್ಲವೇ ಸಹನೆಯ ಹರಿಕಾರ. ಒಂದರಗಳಿಗೆ ಅನಿಸಿಬಿಡುತ್ತದೆ ನಿನ್ನ ಬಿಟ್ಟು ನಾನಿರಲಾರೆ ಎಂದು ಅದ್ಯಾಕೋ ನಾನರಿಯೇ ನನ್ನೊಳಗೆ ಹುದುಗಿದ ಅಗಾಧ ಪ್ರೀತಿಯಲಿ ನೀನು ಒಬ್ಬನಾಗಿ ಬಿಟ್ಟೆಯಲ್ಲೋ.
ಮಳೆಯ ಹನಿ ಮೈ ಸೋಕಿದಾಗ ನಿನ್ನ ನೆನಪಾಯಿತು ಗೆಳೆಯ ಕಣ್ಣಾಲಿಗಳು ತುಂಬಿಕೊಂಡವು, ಮನ ಭಾರವಾಯಿತು ಮನಸು ನಿನ್ನ ನೆನೆದು. ಮತ್ತದೇ ಹುರುಪು ತುಂಬಲು ನೀ ಬರುತ್ತೀಯಾ, ನನಗೆ ಆಸರೆ ನೀಡುತ್ತೀಯಾ ಅಪ್ಪಿಕೊಳುತ್ತೀಯಾ ಎಂದು ಈ ಮನ ಕಾಯುತ್ತಿದೆ. ಹೀಗೆ ಬಂದು ಹಾಗೇ ಹೋಗಲಾದರು ಬರುತ್ತೀಯಾ ಎಂಬ ಸಮಾಧಾನದಿಂದ ಕಾಯುತ್ತಿದ್ದೇನೇ. ಬರುತ್ತೀಯಾ ತಾನೇ. ಈ ಮನದ ಬಾಗಿಲು ಸದಾ ತೆರೆದುಕೊಂಡಿರುತ್ತದೆ ಸಹೃದಯನ ಆಗಮನಕೆ.
Get In Touch With Us info@kalpa.news Whatsapp: 9481252093
Discussion about this post