ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ದೇಶದ ಸೈನ್ಯ ಹಾಗೂ ಸೈನಿಕರ ಬಗ್ಗೆ ತಿಳಿದುಕೊಳ್ಳಬೇಕು. ಮಿಲಿಟರಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ದೇಶ ಸೇವೆಗೆ ಯುವಕರು ಸನ್ನದ್ಧರಾಗಬೇಕು. ಸೈನಿಕರ ತ್ಯಾಗ, ಹೋರಾಟ ಮತ್ತು ಶಿಸ್ತು ಜೀವನದಲ್ಲಿ ಆದರ್ಶವಾಗಬೇಕು ಎಂದು ನಿವೃತ್ತ ಸುಬೇದಾರ್ ಮೇಜರ್ ಕೆ.ಆರ್. ದಿನೇಶ್ ಕರೆ ನೀಡಿದರು.
ನಗರದ ಪಿಇಎಸ್’ಐಟಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಯೋಧ ಸಮ್ಮಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೇಶದ ಸೈನ್ಯ ಹಾಗೂ ಸೈನಿಕರ ಬಗ್ಗೆ ತಿಳಿದುಕೊಳ್ಳಬೇಕು. ಮಿಲಿಟರಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ದೇಶ ಸೇವೆಗೆ ಯುವಕರು ಸನ್ನದ್ಧರಾಗಬೇಕು. ಸೈನಿಕರ ತ್ಯಾಗ, ಹೋರಾಟ ಮತ್ತು ಶಿಸ್ತು ಜೀವನದಲ್ಲಿ ಆದರ್ಶವಾಗಬೇಕು ಎಂದು ಹೇಳಿದರು.
ಮಿಲಿಟರಿಯಲ್ಲಿ ಸೈನಿಕ ಹಂತದಿಂದ ಅಧಿಕಾರಿ ಹುದ್ದೆಯವರೆಗೆ ವಿವಿಧ ಅವಕಾಶಗಳಿರುವುದನ್ನು ತಿಳಿಸಿ, ತಮ್ಮ ತರಬೇತಿ ಅನುಭವ, ಶಿಸ್ತು ಮತ್ತು ಸಮರ್ಪಣಾ ಮನೋಭಾವಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
Also read>> ಜು.29-ಸೆ.26 | ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳ ಅನ್ನಬ್ರಹ್ಮ ಚಾತುರ್ಮಾಸ್ಯ
ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಎನ್.ಎಸ್. ರಂಗನಾಥ್ ಅವರು ಮಾತನಾಡಿ, ಜಮ್ಮು-ಕಾಶ್ಮೀರ, ಪಂಜಾಬಿನ ವಾಘಾ ಗಡಿ, ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿಕೊಂಡರು.
ಯೋಧರ ತ್ಯಾಗ ಮತ್ತು ಬಲಿದಾನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಯೋಧರು ದೇಶ ಸೇವೆಗೆ ಸದಾ ಸಿದ್ಧರಾಗಿರುತ್ತಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ. ಸುದರ್ಶನ್ ಅವರು ಮಾತನಾಡಿ, 18,000 ಅಡಿ ಎತ್ತರದಲ್ಲಿಯೂ ತಮ್ಮ ವೈಯಕ್ತಿಕ ಸುಖವನ್ನು ಬದಿಗೊತ್ತಿ ದೇಶದ ರಕ್ಷಣೆಗೆ ತೊಡಗಿರುವ ಯೋಧರ ದೇಶಪ್ರೇಮ ಅಪ್ರತಿಮ. ಇತಿಹಾಸವನ್ನು ಕೆಲವರು ಲೇಖನಿಯಿಂದ ಬರೆಯುತ್ತಿದ್ದರೆ, ನಮ್ಮ ಯೋಧರು ತಮ್ಮ ರಕ್ತದಿಂದ ಬರೆಯುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ಯೋಧರನ್ನು ಆದರ್ಶವನ್ನಾಗಿ ತೆಗೆದುಕೊಂಡು ಮಹೋನ್ನತ ಗುರಿಗಳನ್ನು ಹೊಂದಬೇಕು ಎಂದು ಕರೆ ನೀಡಿದರು.
ರಾಸೇಯೋ ಕಾರ್ಯಕ್ರಮಾಧಿಕಾರಿಗಳಾದ ಡಾ. ಎನ್. ಪ್ರವೀಣ್ ಚಂದ್ರ ಅವರು ವಾಚಿಸಿ, ಕಾರ್ಗಿಲ್ ಯುದ್ಧವು ದೇಶ ಮೊದಲು’ ಎಂಬ ಸಂದೇಶ ನೀಡಿತು. ಶತ್ರುಗಳ ವಿರುದ್ಧ ನಮ್ಮ ಯೋಧರ ಬಲಿದಾನ ಮತ್ತು ಹೋರಾಟದಿಂದ ಆಪರೇಷನ್ ವಿಜಯ್’ ಯಶಸ್ವಿಯಾಯಿತು. ಸಿಯಾಚಿನ್ನಂತಹ ಎತ್ತರ ಪ್ರದೇಶಗಳಲ್ಲಿ ನಮ್ಮ ಯೋಧರು ದಶಕಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ನಿವೃತ್ತ ಯೋಧರಾದ ಸುಬೇದಾರ್ ಮೇಜರ್ ದಿನೇಶ್ ಹಾಗೂ ಎನ್.ಎಸ್. ರಂಗನಾಥ್ ಅವರನ್ನು ಸನ್ಮಾನಿಸಲಾಯಿತು.
ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಿ. ಮೋಹನ್, ಸಹಾಯಕ ಪ್ರಾಧ್ಯಾಪಕರಾದ ಎಂ.ಎಚ್. ಸಚ್ಚಿದಾನಂದ, ಓಜ್ವನ್ ಸಾಂತ್ಮೇರ್, ಗ್ರಂಥಪಾಲಕರಾದ ಎಸ್.ವಿ. ಪ್ರಸಾದ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಶ್ರೇಯ, ಪೃಥ್ವಿ, ಪ್ರೀತಿ ಹಾಗೂ ಶರ್ಮದ ಅವರು ಪ್ರಾರ್ಥಿಸಿ, ಪ್ರಿಯಾಂಕ ಸ್ವಾಗತಿಸಿದರು. ನಮ್ರತಾ ಮತ್ತು ಕಾರ್ತಿಕ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಿದ್ಧಾರ್ಥ ವಂದಿಸಿ, ಕೃತಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








