ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
‘ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ . ಎಂಬ ಕನಕದಾಸರ ಪದಗಳಲ್ಲಿ ತಿಳಿಸಲಾಗಿರುವ ಸತ್ಯದಲ್ಲಿ ಸ್ವಲ್ಪವನ್ನಾದರೂ ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಅವರು ಇಂದು ಚಿಕ್ಕಾಬಳ್ಳಾಪುರದಲ್ಲಿ ಹಮ್ಮಿಕೊಳ್ಳಾಗಿದ್ದ ದಾಸಶ್ರೇಷ್ಠ ಕನಕದಾಸರ 534 ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಚಿಕ್ಕಬಳ್ಳಾಪುರದಲ್ಲಿ ಕನಕಭವನ ನಿರ್ಮಾಣಕ್ಕೆ 20 ಗುಂಟೆ ಸ್ಥಳವನ್ನು ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಅದರ ನಿರ್ಮಾಣಕ್ಕೆ ಅಗತ್ಯ ನೆರವು ನೀಡಿ, ಕನಕಭವನದ ಉದ್ಘಾಟನೆಯನ್ನು ಖುದ್ದು ತಾವೇ ಮಾಡುವುದಾಗಿ ಮುಖ್ಯಮಂತ್ರಿ ಅವರು ತಿಳಿಸಿದರು.
ಕನಕದಾಸರ ವಿಚಾರಗಳು ನಮ್ಮ ಆತ್ಮದ ಒಳಗಿದೆ. ಕನಕದಾಸರ Kanakadasaru ಊರು ಬಾಡಾ ಶಿಗ್ಗಾವಿ ಕ್ಷೇತ್ರದಲ್ಲಿರುವುದರಿಂದ ಕನಕದಾಸರಿಗೆ ಮತ್ತು ನಮಗೆ ಅವಿನಾಭಾವ ಸಂಬಂಧವಿದೆ. ವಿಜಯನಗರ ಅರಸರ ಸಾಮಂತ ರಾಜರಾಗಿದ್ದ ಕನಸದಾಸರ ಹಿರಿಯರು ಹಾಗೂ ಕನಕದಾಸರೂ ಕೂಡ ರಾಜರಾಗಿ ಆಡಳಿತ ಮಾಡಿದವರು. ದಾಯಾದಿಗಳ ನಡುವೆ ಹೋರಾಟ ನಡೆದು ಅವರಿಗೆ ಸೋಲುಂಟಾಯಿತು. ನಂತರ ಆದಿಕೇಶವನ ಆಶೀರ್ವಾದ ಹಾಗೂ ಪತ್ನಿಯ ಸಲಹೆಯಂತೆ ಅವರು ದಾಸರಾಗಿ ಪರಿವರ್ತನೆಯಾದರು. ಅವರು ವ್ಯಾಸರಾಯರ ಬಳಿ ಶಿಷ್ಯರಾಗಿ ಸಂಪೂರ್ಣ ಜ್ಞಾನ ಪಡೆದು ಅಕ್ಕಪಕ್ಕದ ರಾಜ್ಯಗಳನ್ನು ಸುತ್ತಿನ ನಂತರ ದಾಸಶ್ರೇಷ್ಠರಾದರು. ಅವರ ಮುಕ್ತಿಯ ಭೂಮಿ ಕಾಗಿನೆಲೆ. ಕಾಗಿನೆಲೆಯಲ್ಲಿ ಮಾರ್ಮಿಕವಾಗಿ ಹೇಳಿದ ಮಾತು: ‘ಆವೊಂದು ಸೋಲಿನಲ್ಲಿ ನಾನು ಹಲವಾರು ಗೆಲುವನ್ನು ಕಂಡೆ ನನ್ನನ್ನು ನಾನೇ ಗೆದ್ದುಕೊಂಡೆ’ ಎಂದರು. ಸೋಲೂ ಕೂಡ ಹಲವಾರು ಗೆಲುವಿಗೆ ದಾರಿಮಾಡಿಕೊಡುತ್ತದೆ ಎಂದರು.
ದಾಸಪರಂಪರೆಯಲ್ಲಿ ಕನಕದಾಸರು ಶ್ರೇಷ್ಠರು:
600 ವರ್ಷಗಳ ಹಿಂದೆಯೇ ಅವರ ಸಾಹಿತ್ಯ ಸಮಾನತೆಯನ್ನು ಸಾರಿದವು. ದಾಸರ ಪರಂಪರೆಯಲ್ಲಿ ಕರ್ನಾಟಕದಲ್ಲಿ ಕನಕದಾಸರು ಮತ್ತು ಪರಂದರದಾಸರಿದ್ದಂತೆ ಉತ್ತರ ಭಾರತದಲ್ಲಿ ರಾಮದಾಸ ಹಾಗೂ ತುಳಸೀದಾರು ಇದ್ದರು. ಹಲವಾರು ದಾಸ ಪರಂಪರೆಯ ಪೈಕಿ ಕನಕದಾಸರು ಮತ್ತು ಪುರಂದರದಾಸರು ಶ್ರೇಷ್ಠರು. ಅವರ ಜೀವನ ಚರಿತ್ರೆ, ಅವರ ಸಾಹಿತ್ಯ ನಮಗೆ ಬದುಕಿಗೆ ದಾರಿಯನ್ನು ತೋರುತ್ತದೆ ಎಂದರು. ಬಾಡಾದಲ್ಲಿ ಕನಕದಾಸರ ಈ ಎಲ್ಲಾ ಸಾಹಿತ್ಯವನ್ನು, ಕನಕನ ಅರಮನೆಯನ್ನು, ಕೋಟೆಗಳನ್ನು ಕಟ್ಟಿ ಅವರ ಪದಗಳನ್ನು ಬಿಡಿಸಲಾಗಿದೆ. 4 ಡಿ ಥಿಯೇಟರ್ ಕೂಡ ಮಾಡಿದ್ದು, ಸಾವಿರಾರು ಯಾತ್ರಿಕರು ಪ್ರತಿನಿತ್ಯ ಆಗಮಿಸುತ್ತಾರೆ. ಈ ಭಾಗದ ಜನರೂ ಸಹ ಕನಕದಾಸರ ಹುಟ್ಟೂರು ಬಾಡಾ ಮತ್ತು ಕಾಗಿನೆಲೆಗೆ ಭೇಟಿ ನೀಡಬೇಕು ಎಂದು ಆಹ್ವಾನಿಸಿದರು.
Also read: ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಸದ ರಾಘವೇಂದ್ರ ಸೂಚನೆ
ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post