ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
‘ಗೃಹ ಜ್ಯೋತಿ’ ಯೋಜನೆ ಉಳ್ಳವರಿಗೆ ಸೀಮಿತವೇ? ಬಡವರು ಬಡವರಾಗಿಯೇ ಉಳಿಯಬೇಕೆ? ‘ಗ್ಯಾರೆಂಟಿ’ ಕೊಡುಗೆ ಮೂಲಕ ಮನೆ ಮಾಲಿಕರಿಗಷ್ಟೇ ಜೈ, ಬಾಡಿಗೆದಾರರಿಗೆ ‘ಕೈ’? ‘ಬಡವರು ಬಡವರಾಗಿಯೇ ಉಳಿಯಬೇಕೆ? ಎಂಬ ಸರಣಿ ಪ್ರಶ್ನೆಗಳನ್ನು ಮುಂದಿಟ್ಟು ಹೋರಾಟಗಾರರ ಅಭಿಪ್ರಾಯಗಳನ್ನಾಧರಿಸಿ ‘ಗ್ಯಾರೆಂಟಿ’ ಅವಾಂತರ ಬಗ್ಗೆ ಸಿಟಿಜನ್ಸ್ ರೈಟ್ಸ್ ಫೌಂಡೇಷನ್ ಮುಖ್ಯಸ್ಥ ಕೆ.ಎ. ಪಾಲ್ ಸರ್ಕಾರಕ್ಜೆ ದೂರು ಸಲ್ಲಿಸಿದ್ದಾರೆ.
ಗ್ಯಾರೆಂಟಿ ಅವಾಂತರದ ಬಗ್ಗೆ ಸರ್ಕಾರದ ಗಮನಸೆಳೆಯಲು ಮುಂದಾಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಚುನಾವಣಾ ಪೂರ್ವದಲ್ಲಿ ನೀಡಿರುವಂತೆ ‘ಐದು ಗ್ಯಾರೆಂಟಿ’ ಜಾರಿಯಾಗಿಲ್ಲ, ಷರತ್ತುಗಳ ವಿಚಾರದಿಂದಾಗಿ ಗೊಂದಲ ಉಂಟಾಗಿದ್ದು, ಆದೇಶವು ‘ಬಡವರು ಬಡವರಾಗಿಯೇ ಉಳಿಯಬೇಕೇ’ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ಸಿಎಂ, ಡಿಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಜಿಂದಾಲ್ ಭೂಚಕ್ರ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿ ಕರ್ಮಕಾಂಡ, ಹೀಗೆ ಹತ್ತಾರು ವಿಚಾರಗಳಲ್ಲಿ ಪರಿಪೂರ್ಣ ಕಾನೂನು ಹೋರಾಟ ನಡೆಸಿರುವ ಪಾಲ್, ಷರತ್ತುಗಳು ಜನರ ಒಳಿತಿಗಾಗಿಯೇ ಅಥವಾ ಕೊಡುಗೆ ಜನಸಾಮಾನ್ಯರಿಗೆ ತಲುಪಬಾರದೆಂಬ ಉದ್ದೇಶಕ್ಕಾಗಿಯೇ? ಬಹುತೇಕ ಬಡ ಕುಟುಂಬಗಳು ಕರೆಂಟ್ ಹೊರೆಯಿಂದ ತಪ್ಪಿಸಿಕೊಳ್ಳಲು ರೆಫ್ರಿಜೆರೇಟರ್, ಫ್ಯಾನ್, ಟಿವಿ, ಗೀಸರ್ ಮೊದಲಾದ ಗೃಹೋಪಯೋಗಿ ವಸ್ತುಗಳನ್ನು ಹೊಂದಿಲ್ಲ. ಆ ಬಡ ಕುಟುಂಬಗಳಿಗೆ ಅಂತಹಾ ವಸ್ತುಗಳ ಬಳಕೆ ಮುಂದೆಯೂ ಗಗನ ಕುಸುಮವೇ? ಎಂದು ಪ್ರಶ್ನಿಸಿದ್ದಾರೆ.

Also read: ರಾಜ್ಯಪಾಲರಿಂದ ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನ ಅನಾವರಣ
ಆಶ್ವಾಸನೆಯೇ ಬೇರೆ, ಆದೇಶವೇ ಬೇರೆ ಎಂದಿರುವ ‘ಸಿಟಿಜನ್ಸ್’, ಚುನಾವಣೆಗೆ ಮುನ್ನ ಕೈ ನಾಯಕರು ‘ಗೃಹ ಜ್ಯೋತಿ’ಯು ಎಲ್ಲರಿಗೂ ಉಚಿತ ಎಂದಿದ್ದರು. ಆದರೆ ಇದೀಗ ಫಲಾನುಭವಿಗಳಿಗೆ ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆ ‘ಉಳ್ಳವರಿಗೆ ವರದಾನವೇ ಹೊರತು, ಬಡವರಿಗಾಗಿ ಅಲ್ಲ’ ಎಂಬಂತಿದೆ, ಸರ್ಕಾರದ ನಡೆಗೆ ‘ಸಿಟಿಜನ್ಸ್’ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದಿನ ವರ್ಷದಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡಿರುವ ಶ್ರೀಮಂತರು ಇದೀಗ ಈ ‘ಸರಾಸರಿ ಸೂತ್ರ’ದಿಂದಾಗಿ ಸದರಿ ಯೋಜನೆಯ ಪರಿಪೂರ್ಣ ಫಲಾನುಭವಿಗಳಾಗುತ್ತಾರೆ. ಈವರೆಗೂ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದ ಬಡವರು ಯೋಜನೆಯ ಪರಿಪೂರ್ಣ ಪ್ರಯೋಜನದಿಂದ ವಂಚಿತರಾಗುತ್ತಾರೆ. ‘ಆರ್ಥಿಕ ಸಬಲೀಕರಣ’ ಸೂತ್ರಕ್ಕೆ ವಿರುದ್ಧವಾಗಿರುತ್ತದೆ. ಎಲ್ಲರಿಗೂ ಸಮಾನ ಸೂತ್ರದಡಿ ‘ಗೃಹ ಜ್ಯೋತಿ’ ಅನುಷ್ಠಾನಗೊಳಿಸಿ, ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್ಗಳವರೆಗಿನ ಬಳಕೆಯ ಮಿತಿ ನಿಗದಿಪಡಿಸಿ, ಹಿಂದೆ ನೀಡಿರುವ ಭರವಸೆಯಂತೆಯೇ ಬಡವರೆಲ್ಲರಿಗೂ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಸಿಟಿಜನ್ಸ್ ರೈಟ್ಸ್ ಫೌಂಡೇಷನ್ ಆಗ್ರಹಿಸಿದೆ.











Discussion about this post