ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಡಿಸಿಎಂ ಈಶ್ವರಪ್ಪ, DCM Eshwarappa ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ದಿ ಬಂದಂತೆ ಕಾಣುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಕಳ್ಳತನದಿಂದ ಬಿಡದೇ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಳ್ಳತನದಿಂದ ನೀರು ಬಿಟ್ಟಿರುವುದೇ ದೊಡ್ಡ ತಪ್ಪು. ಆಗ ಇವರನ್ನು ಕಳ್ಳ ಎಂದು ಹೇಳಲಾಗಿತ್ತು. ಕಳ್ಳತನದಿಂದ ನೀರು ಬಿಟ್ಟಿದ್ದಕ್ಕೆ ಕಳ್ಳ ಎಂದರೆ ತಪ್ಪು ಇವರಿಗೆ. ಎಲ್ಲರ ಜೊತೆ ಮಾತುಕತೆ ನಡೆಸಿದ್ದರೆ ರಾಜ್ಯದ ಜನರು ಅವರ ಜೊತೆ ಇರುತ್ತಿದ್ದರು ಎಂದರು.
ಸ್ಟಾಲಿನ್ Stalin ಎಂಬ ಪುಣ್ಯಾತ್ಮನಿಗೆ ಒಪ್ಪಿಸಲು, ಇಂಡಿಯಾ ಸಂಸ್ಥೆ ಓಲೈಸಲು ಡಿ.ಕೆ. ಶಿವಕುಮಾರ್ DKShivakumar ನೀರು ಬಿಟ್ಟಿದ್ದಾರೆ. ಸಿದ್ಧರಾಮಯ್ಯ CMSiddaramaiah ಹಾಗೂ ಡಿ.ಕೆ. ಶಿವಕುಮಾರ್ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಈಗ ವಕೀಲರು, ತಜ್ಞರು ಹಾಗೂ ಹಲವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಮೊದಲು ಕಳ್ಳ ಎಂದೆ, ಈಗ ದಡ್ಡರು ಎನ್ನಬೇಕಾಗಿದೆ ಎಂದು ಲೇವಡಿ ಮಾಡಿದರು.
ನಾವು ಜನರ ಜೊತೆ ಇದ್ದೆವೆ ಎಂದು ಈಗ ಹೇಳುತ್ತಿದ್ದಾರೆ. ಇದಕ್ಕಿಂತ ಅನ್ಯಾಯ ಮತ್ತೇನಿದೆ. ರೈತರು, ವಕೀಲರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೆ ಮುಖ್ಯಮಂತ್ರಿಗಳು ನೀರು ಬಿಟ್ಟಿದ್ದ ಉದಾಹರಣೆ ಇದೆ. ಇವರಿಬ್ಬರು ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ನೀರೆಲ್ಲಾ ಬಿಟ್ಟಾದ ಮೇಲೆ ಈಗ ಸಭೆ ನಡೆಸಿ ಉಪಯೋಗವೇನು? ಎಲ್ಲವೂ ಸಂವಿಧಾನಬದ್ಧವಾಗಿ ಆಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಚರ್ಚೆ ನಡೆಸದೇ ನೀರು ಬಿಟ್ಟಿದ್ದೆ ತಪ್ಪು. ಎಲ್ಲ ಪಕ್ಷದವರ ಜೊತೆ ಚರ್ಚಿಸಿ ನೀರು ಬಿಡಬೇಕಿತ್ತು. ಎಲ್ಲದಕ್ಕೂ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂಬುದು ಕೂಡ ತಪ್ಪು. ರಾಜ್ಯದಲ್ಲಿ ಬರ ಕೂಡ ಇದ್ದು, ರಾಜ್ಯಕ್ಕೆ ಎಷ್ಟು ನೀರು ಬೇಕು ಎಂದು ಸರ್ವೆ ಮಾಡಿಲ್ಲ. ಇದು ನೂರಾರು ವರ್ಷಗಳ ಸಮಸ್ಯೆ ಎಂದರು.
Also read: ಅಲಂಕಾರ ತೆರವು ಸಂಬಂಧ ಗೊಂದಲ ನಿರ್ಮಾಣ: ಎಸ್ಪಿ ಮಧ್ಯಪ್ರವೇಶದಿಂದ ತಿಳಿಗೊಂಡ ವಾತಾವರಣ
ಚಲನಚಿತ್ರ ನಟರು ಬರಲಿಲ್ಲ ಎಂದು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ನೀವು ನೀರು ಬಿಟ್ಟು ಬೇರೆಯವರ ಮೇಲೆ ಬೊಟ್ಟು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಜನ ಆಯ್ಕೆ ಮಾಡಿದ ಸರ್ಕಾರ 5 ವರ್ಷ ಇರಬೇಕು ಎಂಬುದು ನಮ್ಮ ಆಸೆ. ಪ್ರಧಾನಮಂತ್ರಿ ಮೇಲೆ ಆರೋಪ ಮಾಡುವುದೇ ಇವರ ಕೆಲಸವಾಗಿದೆ. ಅಕ್ಕಿ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಈಗ ನೀರಿನ ಬಗ್ಗೆ ಆರೋಪಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬರ ಬಂದಿದೆ, ಎಷ್ಟು ದುಡ್ಡು ಬೇಕು ಅಂಕಿ ಅಂಶ ಕೇಂದ್ರಕ್ಕೆ ಕಳಿಸಿದ್ದಿರಾ ? ರಾಜ್ಯದ ಹಿತಾಸಕ್ತಿ ಕಾಪಾಡಬೇಕೆಂದರೆ ಎಲ್ಲರೂ ಒಟ್ಟಾಗಿರಬೇಕು. ಇಡೀ ಕರ್ನಾಟಕವನ್ನು ಒಟ್ಟಾಗಿ ಕರೆದು ಕಾನೂನು ತಜ್ಞರ ಬಳಿ ಚರ್ಚಿಸಬೇಕು. ಕೇವಲ ನಿಮ್ಮ ಉಪಮುಖ್ಯಮಂತ್ರಿಗಳ ಸ್ಥಾನಕ್ಕೆ ಬಡಿದಾಟವಾಗಿದೆ ಎಂದು ದೂರಿದರು.
ನುಡಿದಂತೆ ನಡೆದಿದೆ ಸರ್ಕಾರ ಎಂದು ಹೇಳುತ್ತಿದ್ದಾರೆ. ಇನ್ನಾರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಕುಮಾರಸ್ವಾಮಿ ಹೇಳಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೇ ದಿನಗಳಲ್ಲಿ ಡಿಸಿಎಂ ಶಿವಕುಮಾರ್ ಕೂಡ ಹೇಳಲಿದ್ದಾರೆ. ಇವರು 3 ಜನ ಉಪಮುಖ್ಯಮಂತ್ರಿಗಳ ಬಡಿದಾಟ ಮಾಡಿಕೊಂಡು ಕೂತಿದ್ದಾರೆ. ಈಗಲಾದರೂ ತಜ್ಞರು, ಸರ್ವಪಕ್ಷಗಳನ್ನು, ವಕೀಲರನ್ನು ಕರೆಸಿ ತೀರ್ಮಾನಿಸಲಿ ಎಂದು ಸಲಹೆ ನೀಡಿದರು.
ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಘೋಷಿಸಲಿ
ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯದ ಬಿಜೆಪಿಯ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು ಕೂಡ ಇದನ್ನೇ ಕೇಳುತ್ತಿದ್ದಾರೆ. ಕಾಂಗ್ರೆಸ್ ನವರು ಇದೇ ವಿಚಾರದಲ್ಲಿ ನಮ್ಮನ್ನು ಟೀಕಿಸುತ್ತಿದ್ದಾರೆ. ಸದನದಲ್ಲಿ ಲೇವಡಿ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರೂ ರಾಜ್ಯದ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವಿಚಾರದಲ್ಲಿ ನಮ್ಮ ತಪ್ಪೇನಾದರು ಇದ್ದರೆ ಕರೆದು ಬುದ್ದಿ ಹೇಳಲಿ. ನಮಗೆ ಗೊತ್ತಾಗದೆ ಯಾವುದಾದರೂ ತಪ್ಪಾಗಿರಬಹುದು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ 28 ಸ್ಥಾನ ಗೆಲ್ಲಬೇಕಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಘೋಷಿಸಲಿ ಎಂದು ಹೇಳಿದರು.
ಸಂಸತ್ ಚುನಾವಣೆ ಹತ್ತಿರ ಬರುತ್ತಿದೆ. ನಳೀನ್ ಕುಮಾರ್ ಕಟೀಲರನ್ನೇ ಮುಂದುವರೆಸುವುದಾದರೆ ಮುಂದುವರಿಸಲಿ. ಯಾವುದಾದರೂ ತೀರ್ಮಾನವನ್ನು ಆದಷ್ಟು ಬೇಗನೇ ತೆಗೆದುಕೊಳ್ಳಲಿ. ಈ ಬಗ್ಗೆ ಕೇಂದ್ರದ ನಾಯಕರಿಗೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿಯಾಗಿದೆ. ಆದರೆ ಕೆಲ ಅಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಹಿಂದುತ್ವ ಮರೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಗೂಂಡಾಗಳು ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿದೆ ಎಂದು ಭಾವಿಸಿದರೆ ತಪ್ಪು. ಹರ್ಷನ ಹತ್ಯೆ ಘಟನೆಯನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















