ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ಯೋಗ ಒಕ್ಕೂಟ, ವತಿಯಿಂದ ನಗರದ ಮೈಸೂರು ವಿಶ್ವ ವಿದ್ಯಾಲಯದ ಯೋಗ ಭವನದಲ್ಲಿ ಭಾನುವಾರ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಹಮ್ಮಿಕೊಂಡಿತ್ತು.
ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಸ್ಪರ್ಧೆಯು 8 ವರ್ಷಕ್ಕಿಂತ ಒಳಗಿನವರು, 8 ರಿಂದ 10 ವರ್ಷ, 11 ರಿಂದ 14 ವರ್ಷ, 15 ರಿಂದ 20 ವರ್ಷ, 21 ರಿಂದ 30 ವರ್ಷ, 31 ರಿಂದ 40 ವರ್ಷ, 41 ರಿಂದ 50 ವರ್ಷ ಹಾಗೂ 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ವಿಭಾಗದಲ್ಲೂ ಬಾಲಕ, ಬಾಲಕಿ, ಯುವಕ, ಯುವತಿ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಸೋಲೋ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಭಾವನಾತ್ಮಕ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ
ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಸುಸ್ಥಿರತೆಗೆ ಯೋಗ ಅಡಿಪಾಯವಾಗಿದೆ. ಯೋಗದ ಮೊರೆ ಹೋದವರು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ ಎಂದರು.
ಮೈಸೂರು ಅರಸರ ಕೊಡುಗೆ ದೊಡ್ಡದು:
ಯೋಗಗುರು ಡಾ.ಗಣೇಶ್ ಕುಮಾರ್ ಮಾತನಾಡಿ, ಮೈಸೂರು ಅರಸರು ಯೋಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆ ಪರಂಪರೆಯನ್ನು ನಾವು ಮತ್ತಷ್ಟು ಹೆಚ್ಚಿಸಬೇಕಿದೆ. ಒಲಿಂಪಿಕ್ಸ್ನಲ್ಲಿ ಯೋಗವನ್ನು ಒಂದು ಕ್ರೀಡೆಯಾಗಿ ಸೇರ್ಪಡೆ ಮಾಡಲಾಗಿದೆ. ಇದರ ಜತೆಗೆ 2036ಕ್ಕೆ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಇದರಲ್ಲಿ ನಮ್ಮ ಯೋಗ ಪಟುಗಳು ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಬಲಿಷ್ಠ ಭಾರತಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.
ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ಕೋಪ ತಾಪದಿಂದ ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೈದಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. ನಮ್ಮಲ್ಲಿ ಅಂಥವರಿಗೆ ನಿತ್ಯ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಇದರಿಂದ ಅವರಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.
ಗಣೇಶ್ ಕುಮಾರ್, ಶಶಿರೇಖಾಗೆ ಗುರುವಂದನೆ
ಯೋಗಗುರು ಡಾ.ಗಣೇಶ್ ಕುಮಾರ್ ಹಾಗೂ ಡಾ.ಎಚ್.ಎ.ಶಶಿರೇಖಾ ಅವರಿಗೆ ಶಿಷ್ಯರಿಂದ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ವೆಂಕಟೇಶ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಚಂದ್ರಶೇಖರ್, ಅಧ್ಯಕ್ಷ ಟಿ.ಜಲೇಂದ್ರ ಕುಮಾರ್, ಯೋಗ ಫೆಡರೇಷನ್ ಆಫ್ ಮೈಸೂರಿನ ಕಾರ್ಯದರ್ಶಿ ಶಶಿಕುಮಾರ್, ಯೋಗ ಸ್ಪೋರ್ಟ್ಸ್ ಫೌಂಡೇಷನ್ ಖಜಾಂಚಿ ಎಂ.ಎನ್.ಮೋಹನ್, ರಾಜ್ಯ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎ.ನಟರಾಜು, ಬಸವಮಾರ್ಗ ಸಂಸ್ಥೆಯ ಎಸ್.ರಾಜು, ಯೋಗ ಗುರುಗಳಾದ ಗೀತಾ ಕುಮಾರ್, ಪ್ರೇಮ್ ಕುಮಾರ್ ಇತರರು ಇದ್ದರು.
ಶಿವಮೊಗ್ಗಕ್ಕೆ ಹಲವು ಬಹುಮಾನ, ಯೋಗ ಸ್ಪರ್ಧೆ ವಿಜೇತರ ವಿವರ
8 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ನಗರದ ಎಸ್ಜಿಎಸ್ ಯೋಗ ಕೇಂದ್ರದ ರುಚಿತ್ (ಪ್ರಥಮ), ಅದೇ ಕೇಂದ್ರದ ನಿತಿನ್ (ದ್ವಿತೀಯ), ನಗರದ ಚಿರಂತ್ (ತೃತೀಯ), ನಗರದ ಸಹನಾಯೋಗ ಕೇಂದ್ರದ ಪುಣ್ಯವರ್ಧನ್ ಎಸ್. ರಾಜ್, ನಗರದ ಶ್ರೀಕಾರ್ ಬಿ.ದೀಪಕ್, ರಾಘವ್ ಸಮಾಧಾನಕರ ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗದ ಶ್ರೀ ಗುರುಕುಲ ಯೋಗ ಕೇಂದ್ರದ ಹರ್ಷಾ (ಪ್ರ), ಅದೇ ಕೇಂದ್ರದ ಸನ್ನಿಧಿ (ದ್ವಿ), ಸಮೃದ್ಧಿ (ತೃ), ಮಾರುತಿ ಯೋಗ ಸಾಧನ ಕೇಂದ್ರ ಶರದಿ ಎಸ್.ರಾವ್, ಗಾನವಿ, ಶಿವಯೋಗ ತಂಡದ ಅರುಷಿ ಸಮಾಧಾನಕರ ಬಹುಮಾನ ತಮ್ಮದಾಗಿಸಿಕೊಂಡರು.
15 ವರ್ಷ 20 ವರ್ಷ ಯುವಕರ ವಿಭಾಗದಲ್ಲಿ ನಗರದ ಎಂ.ವಿ.ಯೋಗದ ಕವೀಶ್ (ಪ್ರ), ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ವಿನಯ್ ಕುಮಾರ್ (ದ್ವಿ), ಬೆಂಗಳೂರಿನ ಕೆಎಂವೈ ಕೇಂದ್ರದ ಅಭಿಷೇಕ್ ಹೆಗ್ಗಡೆ (ತೃ), ಚಿಕ್ಕಬಳ್ಳಾಪುರದ ನಾಗಶ್ರೀ ಶೈಲ್, ಧಾರವಾಡದ ಶಿವಾನಂದ್, ನಗರದ ದುರ್ಗಾಲಯದ ನಂದೀಶ್ ಸಮಾಧಾನಕರ ಬಹುಮಾನ, ಯುವತಿಯರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ (ಪ್ರ), ಯೋಗಾ ಕೇಂದ್ರದ ಮಧುಶಾಲಿನಿ (ದ್ವಿ), ಶಿವಮೊಗ್ಗದ ಶ್ರೀ ಗುರುಕುಲದ ಕಾವ್ಯಾ (ತೃ),ನಗರದ ಎಂ.ವಿ.ಯೋಗಾ ಶಾಲೆಯ ಅಂಕಿತಾ, ದೊಡ್ಡಬಳ್ಳಾಪುರದ ನಿಸರ್ಗಾ ಯೋಗಾ ಕೇಂದ್ರದ ಜಾಹ್ನವಿ, ಬೆಂಗಳೂರಿನ ಸೌಂದರ್ಯ ಯೋಗಾ ಕೇಂದ್ರದ ಮೋನಿಷಾ, ನಂಜನಗೂಡಿನ ದೀಕ್ಷಾ ಸಮಾಧಾನಕರ ಬಹುಮಾನ ಪಡೆದರು.
21 ರಿಂದ 30 ವರ್ಷದ ಯುವಕರ ವಿಭಾಗದಲ್ಲಿ ಬೆಂಗಳೂರಿನ ಭರತ್ ಗೌಡ (ಪ್ರ), ನಂಜನಗೂಡಿನ ಶರತ್(ದ್ವಿ), ಸಂದೇಶ (ತೃ), ಬೆಂಗಳೂರಿನ ಅರುಣ್, ಆದಿತ್ಯಾ, ನಗರದ ಯೋಗೇಶ್ ಸಮಾಧಾನಕರ ಬಹುಮಾನ, ಯುವತಿಯರ ವಿಭಾಗದಲ್ಲಿ ಶಿವಮೊಗ್ಗದ ಗಾನಶ್ರೀ (ಪ್ರ), ಶಿವಮೊಗ್ಗದ ದೀಪಾ(ದ್ವಿ), ನಂಜನಗೂಡಿನ ಸ್ಪಂದನಾ(ತೃ), ಬೆಂಗಳೂರಿನ ಸುಚಿತ್ರಾ, ನಗರದ ಭರತ್, ಲಕ್ಷ್ಮೀ ಯಾದವ್ ಸಮಾಧಾನಕರ ಬಹುಮಾನ ಪಡೆದುಕೊಂಡರು.
31 ರಿಂದ 40 ಪುರುಷರ ವಿಭಾಗದಲ್ಲಿ ನಗರದ ವಿನೋದ್ರಾಜ್ (ಪ್ರ), ಸನೀಶ್ (ದ್ವಿ), ಫರಾನ್ (ತೃ), ಶಿವಮೊಗ್ಗದ ಆದಶ್ ಸಮಾಧಾನಕರ ಬಹುಮಾನ, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ವೀಣಾ (ಪ್ರ), ನಗರದ ಸ್ಮಿತಾ (ದ್ವಿ), ಸ್ಪಂದನಾ (ತೃ), ಚೈತ್ರಾ, ರಶ್ಮಿ, ಪ್ರಿಯಾ ಸಮಾಧಾನಕರ ಬಹುಮಾನ ಗಳಿಸಿದರು.
50 ವರ್ಷ ಪುರುಷ ಮೇಲ್ಪಟ್ಟವರ ವಿಭಾಗದಲ್ಲಿ ಬೆಂಗಳೂರಿನ ಅಶ್ವತ್ಥ ನಾರಾಯಣ (ಪ್ರ), ರವಿ ಪ್ರಕಾಶ್ (ದ್ವಿ), ಹುಬ್ಬಳಿಯ ವಿಜಯ್ ರಘುನಾಥ್ (ತೃ), ಕೆ.ಆರ್.ನಗರದ ರಾಮಸ್ವಾಮಿ, ಮಹದೇವ ನಾಯಕ್, ನಗರದ ಗೋಪಾಲ್, ಜಗದೀಶ್ ಸಮಾಧಾನಕರ ಬಹುಮಾನ, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಸರೋಜಾ (ಪ್ರ), ನಗರದ ಶಶಿಬಾಲ (ದ್ವಿ), ಸುಬ್ಬಲಕ್ಷ್ಮೀ (ತೃ), ಸರೋಜಾ, ರೂಪಾ ಎನ್.ರಾವ್, ಮಂಡ್ಯದ ಲಲಿತಾ ಸಮಾಧಾನಕರ ಬಹುಮಾನ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















