ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಸುಬ್ಬಯ್ಯ ಸಂಶೋಧನಾ ಸಂಸ್ಥೆ `ಸುಬ್ಬಯ್ಯ ಟ್ರಾನ್ಸಲೇಶನಲ್ ರಿಸರ್ಚ್ ಇನ್ಷಿಯೇಟಿವ್ (Subbaiah Translational Research Initiative)‘ ಎಂಬ ಅತ್ಯಾಧುನಿಕ ಆರೋಗ್ಯ ರಕ್ಷಣೆಯ ಸಂಶೋಧನೆಯ ಹೆಜ್ಜೆಯಿಟ್ಟಿದ್ದು, ಈ ಮೂಲಕ ಮಹತ್ವದ ಮೈಲಿಗಲ್ಲನ್ನು ರೂಪಿಸಿದೆ.
ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಮಹತ್ವದ ಸಂಶೋಧನಾತ್ಮಕ ಪೂರಕ ಸಭೆಯಲ್ಲಿ ಸುಬ್ಬಯ್ಯ ಟ್ರಾನ್ಸಲೇಶನಲ್ ರಿಸರ್ಚ್ ಇನ್ಷಿಯೇಟಿವ್ ಆರಂಭಗೊಂಡಿದೆ. ಇದರ ಅಡಿಯ ಗುರಿಯಲ್ಲಿ ಪ್ರಯೋಗಾಲಯ ಸಂಶೋಧನೆಗಳು ಹಾಗೂ ಕ್ಲಿನಿಕಲ್ ಅಭ್ಯಾಸಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಒಟ್ಟಾಗಿ ಸಾಗುವ ಚಿಂತನೆಯಿದೆ. ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಈ ಕ್ರಮ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಆರೋಗ್ಯ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್’ಆರ್’ಐ ಅಧ್ಯಕ್ಷರಾದ ಡಾ.ಲತಾ ಆರ್. ತೆಲಂಗ್, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ತಡಿಕೆಲ ಸುಬ್ಬಯ್ಯ ಟ್ರಸ್ಟ್ ನೀಡಿದ ಎರಡು ದಶಕಗಳ ಕೊಡುಗೆಗಳ ಕುರಿತಾಗಿ ತಿಳಿಸಿದರು.
ಸುಮಾರು ಎರಡೂವರೆ ದಶಕಗಳಲ್ಲಿ ತಡಿಕೆಲ ಸುಬ್ಬಯ್ಯ ಟ್ರಸ್ಟ್ ವತಿಯಿಂದ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಸಾಲು ಸಾಲು ಕೊಡುಗೆಗಳ ಕುರಿತಾಗಿ ವಿವರವಾದ ಮಾಹಿತಿ ತಿಳಿಸಿದರು.
ಎಸ್’ಆರ್’ಐಯನ್ನು ಪ್ರಭಾವಶಾಲಿ ಸಂಶೋಧನೆ ಮತ್ತು ನಾವೀನ್ಯತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದರು.
ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ ಮಾತನಾಡಿ, ಕಲಿಕೆ ಮೂಲಭೂತ ಅಡಿಪಾಯವಾಗಿದ್ದು, ಇದಕ್ಕೆ ಪೂರಕವಾಗಿ ಸಂಶೋಧನೆ ಮೂಲಭೂತವಾದ ಅಂಶವಾಗಿದೆ. ಇದಕ್ಕೆ ಅನ್ವಯವಾಗುವಂತೆ ಸಾಗುವುದು ಈ ರಿಸರ್ಚ್ ಇನ್ಷಿಯೇಟಿವ್ ಗುರಿಯಾಗಿದೆ ಎಂದರು.
ಆರೋಗ್ಯ ಸೇವೆಯಲ್ಲಿನ ಅತ್ಯುತ್ತಮ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೀಡುವಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದಿದೆ. ಸಾಮಾನ್ಯವಾಗಿ ತಂತ್ರಜ್ಞಾನ ಆಧಾರಿತವಾದ ಚಿಕಿತ್ಸೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಫಲಿತಾಂಶ ನೀಡುತ್ತದೆ. ಅಲ್ಲದೇ, ನಿಖರ ಪ್ರಯೋಗಾಲಯದ ವರದಿ ಹಾಗೂ ಆರೋಗ್ಯ ಪರೀಕ್ಷಾ ಅಂಕಿಅಂಶಗಳು ಆಧಾರಿತ ಪರಿಹಾರಗಳು ನಿಖರತೆಯನ್ನು ಹೊಂದಿರುತ್ತದೆ. ಹೀಗಾಗಿ, ಆರೋಗ್ಯ ಕ್ಷೇತ್ರದಲ್ಲಿನ ಅತ್ಯಾಧುನಿಕ ನಿರಂತರ ಸಂಶೋಧನೆಗಳು ಮಹತ್ವ ಪಡೆದಿವೆ ಎಂದರು.
ಬೆಂಗಳೂರಿನ ಎನ್’ಸಿಬಿಎಸ್ ನಿರ್ದೇಶಕರಾದ ಪ್ರೊ.ಎಲ್.ಎಸ್. ಶಶಿಧರ ಮಾತನಾಡಿ, ಇಂತಹ ಅತ್ಯಾಧುನಿಕ ಸಂಶೋಧನೆಗಳಿಗೆ ತನ್ನನ್ನು ತಾನು ತೆರೆದುಕೊಂಡಿರುವ ರಾಜ್ಯದ ಮೊದಲ ಸಂಸ್ಥೆ ಸುಬ್ಬಯ್ಯ ವೈದ್ಯಕೀಯ ಕಾಲೇಜು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಸಿಸಿದರು.
ಪ್ರತಿ ರೋಗಿಗೂ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಪೂರಕವಾಗಿ ದೃಢವಾದ ಸಂಶೋಧನಾ ಪರಿಸರ ಜೈವಿಕ ವ್ಯವಸ್ಥೆ ಹಾಗೂ ಅತ್ಯಾಧುನಿಕ ರೋಗ ನಿರ್ಣಯ ತಂತ್ರಜ್ಞಾನಗಳು ಇಂದಿನ ಕಾಲದಲ್ಲಿ ಅವಶ್ಯತವಾಗಿವೆ ಎಂದರು.
ಆರೋಗ್ಯ ರಕ್ಷಣೆ ಎಂದಿಗೂ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಆಗುವ ಕಾರ್ಯವಲ್ಲ. ಇದು ವೈದ್ಯರಿಂದ ಮೊದಲ್ಗೊಂಡು ಸಮುದಾಯ ಆರೋಗ್ಯ ಕಾರ್ಯಕರ್ತರವರೆಗೆ ಎಲ್ಲರೂ ಶ್ರಮಿಸಿ, ಮಾಡಬೇಕಾದ ಪ್ರಯೋಗಾತ್ಮಕ ಕಾರ್ಯವಾಗಿದೆ ಎಂದರು.
ಕುವೆಂಪು ವಿವಿ ಕುಲಪತಿಗಳಾದ ಡಾ.ಶರತ್ ಅನಂತಮೂರ್ತಿ, ಬೆಂಗಳೂರು ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಹಾಗೂ ಸೊಸೈಟಿ ನಿರ್ದೇಶಕರಾದ ಪ್ರೊ. ರಾಕೇಶ್ ಮಿಶ್ರಾ, ಹೈದರಾಬಾದ್ ಟಿಐಎಫ್’ಆರ್ ನಿರ್ದೇಶಕರಾದ ಪ್ರೊ. ಉಲ್ಲಾಸ್ ಕೊಲ್ತೂರ್ ಸೀತಾರಾಮ್, ಹೈದರಾಬಾದ್’ನ ಸೆಂಟರ್ ಫಾರ್ ಸೆಲ್ಯುಲಾರ್ ಹಿರಿಯ ವಿಜ್ಞಾನ ಪ್ರೊ. ಕುಮಾರಸ್ವಾಮಿ ತಂಗರಾಜ್, ದೆಹಲಿ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಪಲ್ಲವಿ ಕ್ಷೇತ್ರಪಾಲ್, ನೆದರ್’ಲ್ಯಾಂಡ್ ಕೆಎನ್’ಸಿವಿ ಟಿಡಿ ಫೌಂಡೇಶನ್ ಟೀಂ ಲೀಡರ್ ಡಾ.ವಿಜಯಶ್ರೀ ಯಲ್ಲಪ್ಪ, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್, ಮೆಡಿಕಲ್ ಕಾಲೇಜಿನ ಡೀನ್ ಡಾ.ವಿನಾಯಕ, ಪ್ರಾಂಶುಪಾಲ ಡಾ.ಸಿ.ಎಂ. ಸಿದ್ದಲಿಂಗಪ್ಪ ಸೇರಿದಂತೆ ಹಲವರು ಇದ್ದರು.
ಇನ್ನು, ಎಸ್’ಟಿಆರ್’ಐ ಮೂಲಕ, ಸುಬ್ಬಯ್ಯ ಸಂಶೋಧನಾ ಸಂಸ್ಥೆಯು ಒಡಂಬಡಿಕೆಗಳ ಮೂಲಕ ಅತ್ಯಾಧುನಿಕ ಸಂಶೋಧನೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಂತಿಮವಾಗಿ ಸಂಶೋಧನಾ ಫಲಿತಾಂಶಗಳನ್ನು ರೋಗಿಗಳ ಉತ್ತಮ ಆರೋಗ್ಯಕ್ಕಾಗಿ ಆರೈಕೆ ಹಾಗೂ ಗುಣಮಟ್ಟದ ಆರೋಗ್ಯ ಸಂಬಂಧಿತ ಚಿಕಿತ್ಸೆಗಳನ್ನು ನೀಡುವುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಎಸ್’ಟಿಆರ್’ಐ ಗುರಿಗಳೇನು?
- ಕ್ಲಿನಿಕಲ್ ಹಾಗೂ ಸಾಮಾಜಿಕವಾಗಿ ಆಗಬಹುದಾದ ಪರಿಣಾಮಗಳ ಆಧಾರದಲ್ಲಿ ಸಂಶೋಧನೆ ಕೈಗೊಳ್ಳುವುದು
- ಶಿಸ್ತುಬದ್ದವಾಗಿ ಹಾಗೂ ಗುಣಮಟ್ಟದ ಆದ್ಯತೆಯೊಂದಿಗೆ ಕ್ರಮಬದ್ದವಾಗಿ ಸಂಶೋಧನೆಗಳನ್ನು ಕೈಗೊಳ್ಳುವುದು
- ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳಲು ವ್ಯವಸ್ಥೆ ರೂಪಿಸಿವುದು
- ಶೈಕ್ಷಣಿಕ ಸಂಶೋಧನೆಯನ್ನು ಬಲಗೊಳಿಸಿ, ಅತ್ಯಾಧುನಿಕ ತಂತ್ರಜ್ಞಾನ ವಿನಿಮಯಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















