ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜದ ಕಟ್ಟಕಡೆಯ ಬಡವರಿಗೆ ಕಾಂಗ್ರೆಸ್ ಸರ್ಕಾರ ಕಳೆದ 2ವರೆ ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್ಗಳನ್ನು #BPL Card ನೀಡದೆ ಅನ್ಯಾಯ ಮಾಡುತ್ತಿದ್ದು, ಬಿಪಿಎಲ್ ಕಾರ್ಡುಗಳಿಗೆ ವಾರ್ಷಿಕ ಆದಾಯ ರೂ. 1,20,000 ಗರಿಷ್ಟ ಮಿತಿಯಿಂದ ಕನಿಷ್ಟ 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಮಹಾವೀರ ವೃತ್ತದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಟಯರ್ಗೆ ಬೆಂಕಿಹಚ್ಚಿ ತೀವ್ರವಾಗಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಹೊಲಗದ್ದೆಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ, ಮನೆ ಕೆಲಸ ಮಾಡುವವರಿಗೆ, ಕಟ್ಟಡ ಕಾರ್ಮಿಕರಿಗೆ ಅವೈಜ್ಞಾನಿಕವಾಗಿ ವಾರ್ಷಿಕ ವರಮಾನ ಗರಿಷ್ಟ 1.2 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇದನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು. ಓಬಿರಾಯನ ಕಾಲದ ಈ ವಾರ್ಷಿಕ ವರಮಾನ ಮಿತಿಯನ್ನೇ ಅವಸ್ಥಾವಿಕವಾಗಿ ಬಿಪಿಎಲ್ ಪಡಿತರ ಚೀಟಿ ಕೊಡಲು ಸರ್ಕಾರ ಪಾಲಿಸಿಕೊಂಡು ಬರುತ್ತಿದ್ದು, ಬೆಳಗಾವಿ ಅಧಿವೇಶನದಲ್ಲಿ ಕೂಡ ಶಾಸಕರು ಇದರ ಬಗ್ಗೆ ಗಮನ ಸೆಳೆದಿದ್ದಾರೆ. ವಿಧವಾ ವೇತನ, ಅನ್ಯಭಾಗ್ಯ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯವೇತನ, ಮನಸ್ವಿನಿ ಯೋಜನೆ, ಆಯುಷ್ಮಾನ್ ಭಾರತ್, ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯಲು ಈ ವಾರ್ಷಿಕ ಆದಾಯದ ಅವೈಜ್ಞಾನಿಕ ಮಾನದಂಡದಿಂದಾಗಿ ಹಲವಾರು ವರ್ಷಗಳಿಂದ ಬಡ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ವಂಚಿತರಾಗಿದ್ದಾರೆ. ಆಹಾರ ಸಚಿವರು ಈ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಆ ಮಿತಿಯನ್ನು 5ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ತೀವ್ರ ಆರೋಗ್ಯ ಸಮಸ್ಯೆ ಇರುವವರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಘೋಷಣೆ ಮಾಡುತ್ತಾ ಬಂದಿದೆ. ಆದರೆ ಆನ್ಲೈನ್ನಲ್ಲಿ ಅರ್ಜಿ ಹಾಕಬೇಕೆಂದು ಅಧಿಕಾರಿಗಳು ತಿಳಿಸಿರುತ್ತಾರೆ. ಕರ್ನಾಟಕ-1, ಶಿವಮೊಗ್ಗ-1 ಹಾಗೂ ಯಾವುದೇ ಸೈಬರ್ ಸೆಂಟರ್ಗಳಲ್ಲಿ ತೀವ್ರ ಆರೋಗ್ಯ ಸಮಸ್ಯೆ ಇರುವವರ ಅರ್ಜಿಯನ್ನು ಪಡೆಯದೇ ವಂಚಿಸಲಾಗುತ್ತಿದ್ದು, ಸರ್ಕಾರ ಎಲ್ಲಾ ಸೈಬರ್ ಸೆಂಟರ್ಗಳಲ್ಲಿ ಇದಕ್ಕೆ ಅವಕಾಶ ನೀಡಬೇಕೆಂದು ಸಂಘಟನೆ ಒತ್ತಾಯಿಸಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಶಂಕ್ರಾನಾಯ್ಕ, ಟಿ.ಹೆಚ್. ಬಾಬು, ಹೆಚ್.ಎಂ. ಸಂಗಯ್ಯ, ಜನಮೇಜಿರಾವ್, ಮಂಜುನಾಥ್, ಚೇತನ್ನಾಯ್ಕ, ರಘುನಾಥ್ ಅರಸಾಳು, ಬಸವರಾಜ್, ಗೋಪಾಳರಾಮು, ವೇದಾಂತಗೌಡ, ಮೋಹನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















