ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಒಂದು ದಿನದ ಸ್ವಚ್ಛತಾ ಶಿಬಿರವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರಾಂತೀಯ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. 150ಕ್ಕೂ ಹೆಚ್ಚು ಎನ್ಎಸ್ಎಸ್ ಸ್ವಯಂ ಸೇವಕರು ಭಾಗವಹಿಸಿದ್ದ ಈ ಶಿಬಿರದಲ್ಲಿ ವಿದ್ಯಾನಗರದ ಬೀದಿಗಳಲ್ಲಿ ಸ್ವಚ್ಛತಾ ಜಾಗೃತಿ ಜಾಥಾ ಮತ್ತು ಕಾಲೇಜಿನ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಹಾಗೂ ಶಿಭಿರಾರ್ಥಿಗಳಿಗೆ ಉಚಿತ ಕೋವಿಡ್ ಪರೀಕ್ಷೆ ಮಾಡಿಸಲಾಯಿತು.
ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ, ಇವರು ಗಿಡಕ್ಕೆ ನೀರೆರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದಂತೆಯೇ ತಮ್ಮ ಮನೆ ಹಾಗೂ ಕಾಲೇಜಿನಲ್ಲಿ ದಿನನಿತ್ಯವೂ ಸ್ವಚ್ಚತೆ ಮತ್ತು ಪರಿಸರ ಸಂರಕ್ಷಣೆಯ ಕಾರ್ಯವನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಶಿಬಿರಗಳು ನಮಗೆ ಮನೋಸ್ಥೈರ್ಯವನ್ನು ಹೆಚ್ಚಿಸಿ, ಸೇವಾ ಮನೋಭಾವ, ಸಹೋದರತ್ವ ಭಾವನೆ, ಸಹಜವಾಗಿಯೇ ಮೈಗೂಡಿಸಿಕೊಳ್ಳುವಂತೆ ಪ್ರೇರೆಪಿಸುತ್ತವೆ ಎಂದು ತಿಳಿಸಿದರು.
ನಂತರ ಸ್ವಯಂ ಸೇವಕರನ್ನುದ್ದೇಶಿಸಿ ಉಪನ್ಯಾಸ ನೀಡಿದ ಎನ್ಎಸ್ಎಸ್ ಪೂರ್ವ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕುಂದನ್ ಬಸವರಾಜ್, ಯುವಜನತೆ ಮತ್ತು ಸೇವಾ ಮನೋಭಾವ ಎಂಬ ವಿಷಯದ ಬಗ್ಗೆ ಮಾತನಾಡಿಮ ಯುವಜನತೆಯು ಸೇವೆಯ ಮೂಲಕ ದೇಶಕ್ಕೆ, ಸಮಾಜಕ್ಕೆ ನಮ್ಮ ಋಣವನ್ನು ತೀರಿಸುವ ಸುಲಭ ಮಾರ್ಗವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಎಮ್. ವಾಗ್ದೇವಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಬಾಹ್ಯ ಸ್ವಚ್ಛತೆಯ ಜೊತೆಗೆ ಆಂತರಿಕ ಸ್ವಚ್ಛತೆಯ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post