ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೂರ್ಯ ಇನ್ನೂ ಕಣ್ಣು ಬಿಟ್ಟಿರಲಿಲ್ಲ, ಅಷ್ಟೊತ್ತಿಗಾಗಲೇ ಕೈಯಲ್ಲಿ ಸಲಿಕೆ, ಗುದ್ದಲಿ, ಬುಟ್ಟಿ ಹಾಗೂ ಖಾಲಿ ಚೀಲಗಳೊಂದಿಗೆ 100ಕ್ಕೂ ಹೆಚ್ಚು ಸ್ವಚ್ಛತಾ ಸ್ವಯಂ ಸೇವಕರ ತಂಡ ಬೀಡು ಬಿಟ್ಟಿತ್ತು. ಗಿಡಗಂಟಿ, ಮದ್ಯದ ಖಾಲಿ ಬಾಟಲಿ ಹಾಗೂ ತ್ಯಾಜ್ಯದಿಂದಾಗಿ ಹಾಳು ಕೊಂಪೆಯಂತಿದ್ದ ಎಪಿಎಂಸಿ ಎದುರಿನ ಸರಕಾರಿ ವಿಕಲಚೇತನರ ಸಹಾಯವಾಣಿ ಕೇಂದ್ರದ ಆವರಣವನ್ನು ಭಾನುವಾರ ಎರಡೇ ತಾಸಿನಲ್ಲಿ ಕ್ಲೀನ್ ಮಾಡುವ ಮೂಲಕ ಹೊಸ ರೂಪವನ್ನು ನೀಡಿತು.
ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ನಗರದ ಬಿ.ಎಚ್. ರಸ್ತೆಯ ರೇಷ್ಮೆ ಇಲಾಖೆಗೆ ಕಟ್ಟಡದಲ್ಲಿ ಜಿಲ್ಲಾ ವಿಕಲಚೇತನರ -ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯ ವಿಕಲಚೇತನರ ಸಹಾಯವಾಣಿ ಕೇಂದ್ರದ ಆವರಣಕ್ಕೆ ಸ್ವಚ್ಛತೆಯ ಕಾಯಕಲ್ಪದ ಅಗತ್ಯವಿದೆ ಎಂದು ಪರಿಸರಾಸಕ್ತ ಸಂಘಟನೆಗಳಿಗೆ ವಿಕಲಚೇತನರು ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸದಾ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಬರುತ್ತಿರುವ ಸರ್ಜಿ ಫೌಂಡೇಷನ್, ಪರೋಪಕಾರಂ ಸಂಘ, ಶಿವಮೊಗ್ಗ ರೌಂಡ್ ಟೇಬಲ್ ಹಾಗೂ ಸಕ್ಷಮ ಸಂಘಟನೆಗಳ ಸದಸ್ಯರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯ ಕೈಗೊಂಡರು.
Also read: ಚಿಟ್ ಫಂಡ್ ಸೇವೆಗಳ ಮೇಲೆ ಜಿಎಸ್ಟಿ ವಿನಾಯಿತಿ ಕೋರಿ ಕೇಂದ್ರಕ್ಕೆ ಮನವಿ
ಆವರಣದಲ್ಲಿ ರಾಶಿ ರಾಶಿ ಮದ್ಯದ ಬಾಟೆಲ್ಗಳು, ಆಟೋವರ್ಕ್್ಸ ಶಾಪ್ಗಳ ಘನ ತ್ಯಾಜ್ಯ, ಸುತ್ತಮುತ್ತಲ ಜನರು ತಂದು ಸುರಿಯುತ್ತಿದ್ದ ಪ್ಲಾಸ್ಟಿಕ್ನಿಂದಾಗಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇತ್ತು. ಅಲ್ಲದೇ ಕಟ್ಟಡದ ಮೇಲ್ಚಾವಣಿಯಲ್ಲಿ ಕಸ, ಗಿಡ ಗಂಟಿಗಳು ಬೆಳೆದು ಇದು ಕಚೇರಿಯೋ, ಭೂತ ಬಂಗಲೆಯೋ ಎಂಬಂತಿತ್ತು. ಶೌಚಾಲಯಕ್ಕೆ ಹೋಗುವ ದಾರಿ ಗಿಡ ಗಂಟಿ ಬೆಳೆದು ತ್ಯಾಜ್ಯದಿಂದ ಮುಚ್ಚಿ ಹೋಗಿತ್ತು.ಇದನ್ನು ಸ್ವಚ್ಛಗೊಳಿಸುವ ಮೂಲಕ ಕಚೇರಿಯನ್ನು ಕಳೆಗಟ್ಟುವಂತೆ ಮಾಡಲಾಯಿತು.
ಶ್ರಮಾಧಾನದ ಬಳಿಕ ಮಾತನಾಡಿದ ಡಾ.ಧನಂಜಯ ಸರ್ಜಿ, ಸ್ಮಾರ್ಟ್ಸಿಟಿ ಹಿನ್ನೆಲೆ ನಗರದಲ್ಲಿ ಒಂದಷ್ಟು ಕಾಮಗಾರಿಗಳು ಭರದಿಂದ ಸಾಗಿದೆ. ಇದಕ್ಕೆ ಪೂರಕವಾಗಿ ನಾವು ಪರಿಸರ ಸ್ವಚ್ಛತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಸುರಿಯದೆ ಅಳವಡಿಸಿರುವ ಮೆಶ್ಗಳಲ್ಲಿ ಹಾಕುವಂತೆ ಮನವಿ ಮಾಡಿದರು.
ಪರೋಪಕಾರಂನ ತ್ಯಾಗರಾಜ್ ಮಿತ್ಯಾಂತ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ನಮ್ಮ ತಂಡ 587 ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಎಲ್ಲರ ಸಹಕಾರ ಹೀಗೆ ಇರಲಿ ಎಂದು ಹೇಳಿದರು. ಪರೋಪಕಾರಂ ಶ್ರೀಧರ್, ಸಕ್ಷಮ ಸಂಸ್ಥೆಯ ಶಿವಕುಮಾರ್, ಪಾಲಿಕೆಯ ಸಿಬ್ಬಂದಿ, ಆಯನೂರಿನ ವಿಶೇಷಚೇತನರು, ಸ್ವಯಂ ಸ್ವೇವಕರು ಭಾಗವಹಿಸಿದ್ದರು. ತ್ಯಾಜ್ಯವನ್ನು ಹಾಕಲು ಎರಡು ಮೆಶ್ ಅಳವಡಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















