ಶರಾವತಿ ನೀರನ್ನು ರಾಜಧಾನಿ ಬೆಂಗಳೂರಿಗೆ ಕೊಂಡೊಯ್ಯುವ ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಲೆನಾಡಿನಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಯಾವುದೇ ಕಾರಣಕ್ಕೂ ಮಲೆನಾಡಿನಿಂದ ಶರಾವತಿ ನದಿ ನೀರನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಮಲೆನಾಡಿಗರು ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಈ ಕುರಿತಂತೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿದೆ. ಆ ಪತ್ರದ ಯಥಾವತ್ ಈ ಕೆಳಗಿನಂತಿದೆ.
ಬೆಂಗಳೂರಿಗೆ ಶರಾವತಿ ಬೇಡ…
ಬೆಂಗಳೂರು ಬೆಳವಣಿಗೆಗೆ ಕಡಿವಾಣ ಹಾಕಿ, ಸಾಗರ, ಶಿರಸಿ ಶಿವಮೊಗ್ಗ ಅಭಿವೃದ್ಧಿ ಪಡಿಸಿ.
ಸಮುದ್ರಮಟ್ಟದಿಂದ ಲಿಂಗನಮಕ್ಕಿ ಎತ್ತರ ಪೂರ್ಣ ತುಂಬಿದಾಗ 1819 ಅಡಿ. ಹಾಗಾಗಿ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಠ 1650 ಅಡಿಗಳ ಮಟ್ಟದಿಂದ ಅಥವಾ ಕಾರ್ಗಲ್ ಡ್ಯಾಮಿನಿಂದ ಪೈಪ್ ಲೈನ್ ಅಳವಡಿಸಬೇಕು. ಸಮುದ್ರಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 3000 ಅಡಿಯಾದರೆ, ಬೆಂಗಳೂರಿನ ಅತ್ಯಂತ ಎತ್ತರದ ದೊಡ್ಡಬೆಟ್ಟಹಳ್ಳಿ ಇರುವುದು 3150 ಅಡಿಯಷ್ಟು ಎತ್ತರದಲ್ಲಿ. ಅಂದರೆ ಬೆಂಗಳೂರಿಗೆ ನೀರೊಯ್ಯಲು ಶರಾವತಿಯಿಂದ ಹೆಚ್ಚುಕಡಿಮೆ ಅದನ್ನು 1500 ಅಡಿ ಎತ್ತಬೇಕು. ಕೇವಲ ಅಷ್ಟು ಎತ್ತರಕ್ಕೆ ಎತ್ತುವುದಷ್ಟೇ ಅಲ್ಲ ಅದನ್ನು 400 ಕಿಲೋಮೀಟರ್ ದೂರಕ್ಕೆ ತಳ್ಳಬೇಕು.
ಈಗ ಶರಾವತಿಯ ಟರ್ಬೈನುಗಳು ಡಿಸೈನ್ ಆಗಿರುವ ಗ್ರಾಸ್ ಹೆಡ್ (ಎತ್ತರದ ಅಂತರ) ಸುಮಾರು 1525 ಅಡಿ. ಈ ಹೆಡ್ ಬಳಸಿಕೊಂಡು ಅಲ್ಲಿ ಒಂದು ಮೆಗಾವಾಟ್ ಉತ್ಪಾದಿಸಲು ಸರಿಸುಮಾರು 10 ಕ್ಯೂಸೆಕ್ಸ್ ನೀರು ಬೇಕು.
ಅಂದರೆ ಬೆಂಗಳೂರಿಗೆ ಒಯ್ಯಲು ಕೇವಲ ನೀರೆತ್ತುವುದಕ್ಕೇ ಶರಾವತಿಯಲ್ಲಿ ಉತ್ಪಾದನೆಯಾಗುವಷ್ಟೇ ಪ್ರಮಾಣದ ವಿದ್ಯುಚ್ಛಕ್ತಿ ಬೇಕು. ಇನ್ನು ಅದನ್ನು 400 ಕಿಲೋಮೀಟರ್ ತಳ್ಳಲು?
ಜೊತೆಗೆ ಎಂತಹ ಗುಣಮಟ್ಟದ ಯಾವುದೇ ಪಂಪ್ ನೂರಕ್ಕೆ ನೂರರಷ್ಟು ಕಾರ್ಯಕ್ಷಮತೆ ಹೊಂದಿರುವುದು ಸಾಧ್ಯವಿಲ್ಲ. ಹಾಗಾಗಿ ಅದರಲ್ಲಿ ವ್ಯರ್ಥವಾಗುವ ವಿದ್ಯುತ್ ಪ್ರಮಾಣವನ್ನೂ ಲೆಕ್ಕಹಾಕಬೇಕು.
ಈ ಲೆಕ್ಕಾಚಾರದಲ್ಲಿ ಶರಾವತಿಯಿಂದ ಬೆಂಗಳೂರಿಗೆ ಪ್ರತಿ ಕ್ಯೂಸೆಕ್ಸ್ ನೀರೊಯ್ಯಲು ಅದೇ ನೀರಿನಿಂದ ಶರಾವತಿಯಲ್ಲಿ ಉತ್ಪಾದನೆಯಾಗುವ ಪ್ರಮಾಣದ ಒಂದೂವರೆ ಪಟ್ಟು ವಿದ್ಯುತ್ ( ಕನಿಷ್ಠ ಅಂದಾಜು) ಬೇಕಾಗುತ್ತದೆ.
ಇನ್ನು ಇದರಲ್ಲಿ ನೀರು ಮತ್ತು ವಿದ್ಯುತ್ ಸೋರಿಕೆಯ ಲೆಕ್ಕ ಸೇರಿಸಿಲ್ಲ. ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮದ ಮೂಲಕ ಬೆಂಗಳೂರಿಗೆ ನೀರೊಯ್ಯುವ ಬದಲು ಬೆಂಗಳೂರನ್ನೇ ಯಾಕೆ ಸಾಗರ, ಶಿರಸಿ, ಶಿವಮೊಗ್ಗಗಳಿಗೆ ತರಬಾರದು?
ಏನು ಬೆಂಗಳೂರನ್ನೇ ಸ್ಥಳಾಂತರಿಸುವುದೇ? ಇದೆಂತಹ ಹುಚ್ಚು ಪ್ರಶ್ನೆ ಎನ್ನಬಹುದು. ಆದರೆ ಇದು ಹುಚ್ಚೂ ಅಲ್ಲ, ಮಳ್ಳೂ ಅಲ್ಲ. ಇಡೀ ಕರ್ನಾಟಕದಲ್ಲಿ , ತಮಿಳು ಮತ್ತು ತೆಲುಗರಿಗೆ ಹತ್ತಿರವಾದ ಬೆಂಗಳೂರೊಂದನ್ನೇ ಬೆಳೆಸುವ ಬದಲು ಕನ್ನಡ ನಾಡಿನ ಒಡಲೊಳಗೆ ಹುದುಗಿರುವ ಶಿವಮೊಗ್ಗ ಸಾಗರ ಶಿರಸಿಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೆ ಯಾಕೆ ಒಳಪಡಿಸಬಾರದು. ಶಿವಮೊಗ್ಗೆ ಮತ್ತು ಕಾರವಾರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿ ಬೆಂಗಳೂರಿನ ಐ ಟಿ ಇಂಡಸ್ಟ್ರಿಗಳನ್ನು ಶಿವಮೊಗ್ಗ ಶಿರಸಿ ಸಾಗರಗಳಿಗೆ ಶಿಫ್ಟ್ ಮಾಡಿಸಬಾರದು?
ಇದರಿಂದ ಇನ್ನೊಂದು ಅನುಕೂಲವೂ ಉಂಟು. ಹೇಗೂ ಬೆಂಗಳೂರಿನಲ್ಲಿ ಮಲೆನಾಡಿನ ಈ ಪ್ರಾಂತ್ಯಗಳಿಂದ ಮನೆಗೊಬ್ಬರು, ಇಬ್ಬರು ದುಡಿಮೆಯಲ್ಲಿ ಇದ್ದೇ ಇದ್ದಾರೆ. ಅವರು ಮಲೆನಾಡಿನ ತೋಟ ಗದ್ದೆಗಳ ಅಂಚಿನಲ್ಲಿರುವ ಒಂಟಿ ಹಳ್ಳಿಗಳಲ್ಲಿ ವೃದ್ಧ ತಂದೆತಾಯಿಗಳನ್ನು ಬಿಟ್ಟು ಬೆಂಗಳೂರಿನಲ್ಲಿ ಪರಿತಪಿಸುವ ಬದಲು ತಮ್ಮೂರಿನಲ್ಲೇ ಇದ್ದು, ನೌಕರಿಗಳನ್ನೂ ಮಾಡಿಕೊಂಡು, ತಂದೆತಾಯಿಯರನ್ನೂ ನೋಡಿಕೊಂಡು , ತೋಟ ಗದ್ದೆಗಳನ್ನೂ ಅಭಿವೃದ್ಧಿ ಪಡಿಸಿಕೊಂಡು ನೆಮ್ಮದಿಯ ಬದುಕನ್ನು ಬಾಳುವಂತಾಗುತ್ತದೆ. ಬೆಂಗಳೂರಿನ ಜನಸಂಖ್ಯೆಯೂ ತಗ್ಗಿ, ಟ್ರಾಫಿಕ್ ಜಾಮ್, ನೀರಡಿಕೆ, ಕಸದ ಸಮಸ್ಯೆ, ಪರಿಸರ ಮಾಲಿನ್ಯಗಳೂ ನಿಯಂತ್ರಣಕ್ಕೆ ಸಿಕ್ಕೀತಲ್ಲವೇ? ಪ್ರತಿವಾರ ಬೆಂಗಳೂರಿನಿಂದ ಸಾಗರ, ಶಿವಮೊಗ್ಗ ಶಿರಸಿಗಳಿಗೆ ಪ್ರಯಾಣಮಾಡುವವರ ಸಂಖ್ಯೆಯೂ ತಗ್ಗಿ ಉಳಿದವರಿಗೂ ಸುಖವಾಗುವುದಲ್ಲವೇ?
ಈಗ ಎಲ್ಲೆಡೆಯೂ ಇಂಟರ್ನೆಟ್ ಸೌಲಭ್ಯ ಇರುವುದರಿಂದ ಮಲೆನಾಡಿನ ಮಕ್ಕಳು ಮನೆಯಿಂದಲೇ ( ವರ್ಕ್ ಫ್ರಮ್ ಹೋಮ್) ಸೌಲಭ್ಯದಿಂದ ಹಳ್ಳಿಗಳಿಂದಲೇ ಕೆಲಸ ಮಾಡಬಹುದಲ್ಲವೇ? ಇದಾಗಬೇಕೆಂದರೆ ಎಲ್ಲ ಮೂಲಸೌಕರ್ಯಗಳನ್ನೂ ತಾನೊಂದೇ ನುಂಗುವ ಬೆಂಗಳೂರಿನ ಬೆಳವಣಿಗೆಗೆ ತಡೆಯೊಡ್ಡಬೇಕು. ಅಲ್ಲಿಂದ ಕೈಗಾರಿಕೆಗಳನ್ನು ವಿಕೇಂದ್ರೀಕರಣಕ್ಕೊಳಪಡಿಸಿ, ಅದನ್ನು ಕೇವಲ ಸಾಗರ ಶಿವಮೊಗ್ಗವಷ್ಟೇ ಅಲ್ಲ ಶಿರಸಿ, ಕಾರವಾರ, ಚಿಕ್ಕಮಗಳೂರಿಗೆ ವರ್ಗಾಯಿಸಿ. ಆ ಊರುಗಳ ಮೂಲಸೌಕರ್ಯಗಳಿಗೆ ಒತ್ತು ಕೊಡಿ. ಇದರಿಂದ ಎನರ್ಜಿ ಉಳಿಯುತ್ತದೆ. ಪರಿಸರ ಉಳಿಯುತ್ತದೆ. ಎಷ್ಟೋ ವೃದ್ಧರ ಬದುಕು ಉಳಿಯುತ್ತದೆ.
Discussion about this post