ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾನ್ಯ ಮುಖ್ಯಮಂತ್ರಿಗಳೇ ಚಾಮರಾಜನಗರ ಜಿಲ್ಲೆಯೂ ಸಹ ನಿಮ್ಮ ಆಡಳಿತ ವ್ಯಾಪ್ತಿಗೆ ಒಳಪಡುತ್ತದೆ.
ಬಹಳ ಶ್ರಮಪಟ್ಟು ಮುಖ್ಯಮಂತ್ರಿಯಾದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರ ಮೇಲೆ ಜನರ ನಿರೀಕ್ಷೆ ಬಹಳಷ್ಟಿತ್ತು. ನೀವು ಮಂಡಿಸಿದ ಆಯವ್ಯಯ ಹಲವಾರು ವಿಚಾರಗಳನ್ನು ಒಳಗೊಂಡಿರುವುದು ಸಂತೋಷದ ವಿಷಯ, ಆದರೆ ತಮ್ಮ ದೂರದೃಷ್ಠಿಯಲ್ಲಿ ಚಾಮರಾಜನಗರ ಎಂಬ ಜಿಲ್ಲೆಯೇ ಕಣ್ಮರೆಯಾಗಿರುವುದು ವಿಷಾದನೀಯ.
ಚಾಮರಾಜನಗರ ಜಿಲ್ಲೆಯು ತನ್ನದೇ ವಿಶೇಷತೆಗಳನ್ನು ಭೌಗೋಳಿಕವಾಗಿ, ಐತಿಹಾಸಿಕವಾಗಿ, ಪ್ರಾಕೃತಿಕವಾಗಿ ಹೊಂದಿದೆ. ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ, ಮಲೇ ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಒಳಗೊಂಡಂತೆ ತನ್ನ ಒಡಲಿನಲ್ಲಿ ಹಲವಾರು ಬೆಟ್ಟಗಳನ್ನು ಒಳಗೊಂಡಿದ್ದು ನೈಸರ್ಗಿಕವಾಗಿ ಸಂಮೃದ್ದವಾಗಿದೆ, ಇದೆಲ್ಲದರ ಜೊತೆಗೆ ತನ್ನೊಳಗೆ ಅರಣ್ಯವನ್ನು ಪೋಷಿಸಿದೆ. ರಾಜ್ಯದಲ್ಲಿರುವ ಅತಿಹೆಚ್ಚು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿರುವುದು ಸಹ ಚಾಮರಾಜನಗರ ಜಿಲ್ಲೆ ಎಂಬುದು ವಿಶೇಷ. ಅರಣ್ಯದೊಂದಿಗೆ ಹೊಗೆನಕಲ್, ಗಗನಚುಕ್ಕಿ, ಬರಚುಕ್ಕಿಯಂತಹ ಅದ್ಭುತ ಜಲಪಾತಗಳಿಂದ ಕೂಡಿರುವ ಜಿಲ್ಲೆ ಪ್ರವಾಸೋದ್ಯಮವನ್ನು ಕೈಬೀಸಿ ಕರೆಯುತ್ತಿದೆ. ಅರಣ್ಯ, ಜಲ, ಬೆಟ್ಟ ಗುಡ್ಡಗಳಿಂದ ಕೂಡಿರುವ ಈ ಸುಂದರವಾದ ಜಿಲ್ಲೆಗೆ ತಮ್ಮ ಆಯವ್ಯಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾಣದಿರುವುದು ಆಶ್ಚರ್ಯ ಮೂಡಿಸಿದೆ.
ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ ಸೇರಿದಂತೆ ಚಾಮರಾಜನಗರದ ಯಾವ ಯಾತ್ರಾ ಸ್ಥಳದಲ್ಲಿಯೂ ಪ್ರವಾಸಿಗರಿಗೆ ಅವಶ್ಯವಿರುವ ಮೂಲಭೂತ ಸೌಕರ್ಯವಿಲ್ಲ, ಕುಡಿಯುವ ನೀರು, ಸುಸಜ್ಜಿತ ವಸತಿ, ಶೌಚಾಲಯ, ಭೋಜನಾ ಮಂದಿರ ಸೇರಿದಂತೆ ಯಾವ ಸೌಲಭ್ಯವು ಈ ಪ್ರದೇಶಗಳಲ್ಲಿ ಇಲ್ಲ, ಇಂತಹ ಧಾರ್ಮಿಕ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ನೀವು ಆದ್ಯತೆ ನೀಡಬೇಕಿತ್ತು. ಚಾಮರಾಜನಗರದಲ್ಲಿನ ಸೂಕ್ಷ್ಮ ಅರಣ್ಯಪ್ರದೇಶ ಹೊಂದಿರದ ಕೆಲವು ಬೆಟ್ಟ ಗುಡ್ಡಗಳಲ್ಲಿ ಚಾರಣ ಪ್ರದೇಶವೆಂದು ಘೋಷಿಸಿ ಅಲ್ಲಿ ಚಾರಣ ಪ್ರಿಯರಿಗೆ ಹಾಗೂ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಬಹುದಿತ್ತು. ಪ್ರವಾಸಿಕೇಂದ್ರಗಳಿಗೆ ತೆರಳಲು ಉತ್ತಮ ಬಸ್ ಸೌಕರ್ಯಗಳನ್ನು ಒದಗಿಸಬಹುದಿತ್ತು. ಚಾಮರಾಜನಗರವು ತಮಿಳುನಾಡು ಮತ್ತು ಕೇರಳರಾಜ್ಯಗಳನ್ನು ಸಂಪರ್ಕಿಸುತ್ತದೆ. ಇದು ಮೂರು ರಾಜ್ಯಗಳನ್ನು ಸೇರಿಸುವ ಕೇಂದ್ರವಾಗಿದೆ. ಇಲ್ಲಿ ಪ್ರವಾಸೋದ್ಯಮ ಬೆಳೆಸುವುದು ಲಾಭದಾಯಕವೂ ಹೌದು ಹಾಗೂ ಅವಶ್ಯವೂ ಹೌದು. ಇದರಿಂದ ಸ್ಥಳಿಯರ ಜೀವನ ಮಾರ್ಗವೂ ಸುಧಾರಿಸುತ್ತಿತ್ತು. ಬಿಳಿಗಿರಿ ರಂಗನಾಥ ಸ್ವಾಮಿ ಅರಣ್ಯವಲಯದ ಸಫಾರಿಯನ್ನು ಉನ್ನತೀಕರಣಗೊಳಿಸಿ ನಾಗರಹೊಳೆಯ ದಮ್ಮನಕಟ್ಟೆ, ವೀರನಹೊಸಹಳ್ಳಿಯ ಸಫಾರಿ ಕೇಂದ್ರದಂತೆ ಆಕರ್ಷಿಸಬಹುದಿತ್ತು. ನಿಮ್ಮ ಆಯವ್ಯಯದಲ್ಲಿ ಈ ನಿಟ್ಟಿನಲ್ಲಿ ಚಾಮರಾಜನಗರದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬಹುದಿತ್ತು. ಆದರೆ ನೀವು ಇದ್ಯಾವುದನ್ನು ಪರಿಗಣಿಸಲೇ ಇಲ್ಲ.
ರೈತರ ಪರ ಎಂದು ಹೇಳುವ ನೀವು ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯವ್ಯಾಪಿ ಅರಣ್ಯದಂಚಿನಲ್ಲಿರುವ ರೈತರನ್ನು ವಿಶೇಷ ರೈತರೆಂದು ಘೋಷಿಸಿ ಅವರಿಗೆ ಅನುದಾನ ನೀಡಬಹುದಿತ್ತು. ಇತರೆ ರೈತರಿಗಿಂತ ಅರಣ್ಯದಂಚಿನ ರೈತರ ಸವಾಲುಗಳು ಬೇರೆ ತರಹದ್ದು. ಅವರು ಬೆಳೆಯುವ ಬೆಳೆಗಳನ್ನು ಅವರು ಕಾಪಾಡುವುದೇ ದೊಡ್ಡ ಸವಾಲು. ಕೇವಲ ಆನೆ ಮಾತ್ರವಲ್ಲ ಜಿಂಕೆ, ಹಂದಿ, ಮೊಲ ಸೇರಿದಂತೆ ಹಲವು ಸಣ್ಣ ಪ್ರಾಣಿಗಳು ಅವರು ಬೆಳೆದ ಬೆಳೆಯನ್ನು ರಾತ್ರೋ ರಾತ್ರಿ ತಿಂದು ಮುಗಿಸುತ್ತವೆ. ರಾತ್ರಿ ಬೆಳೆ ಕಾಯಲು ಆನೆ, ಹುಲಿ, ಚಿರತೆ ಮುಂತಾದ ಪ್ರಾಣಿಗಳ ಭಯ, ಹಲವು ಬಾರಿ ತಮ್ಮ ಜೀವವನ್ನು ಒತ್ತೆ ಇಟ್ಟು ಅವರು ಅವರ ಫಸಲನ್ನು ಕಾಪಾಡಬೇಕಿದೆ. ಒಂದು ಆನೆ ಬಂದು ಹೋದರೆ ಅರ್ಧ ಜಮೀನೇ ಹೋದಂತೆ. ಇಂತಹ ನಷ್ಟ ಅನುಭವಿಸಿದ ರೈತರಿಗೆ ಅರಣ್ಯ ಇಲಾಖೆ ಕೊಡುವ ಪರಿಹಾರ ಮಜ್ಜಿಗೆಗೂ ಸಾಲುವುದಿಲ್ಲ.
ಇತರೆ ಭಾಗದ ರೈತರಿಗೆ ಅರಣ್ಯದಂಚಿನ ರೈತರಷ್ಟು ಸಮಸ್ಯೆ ಇಲ್ಲ. ಅವರಿಗೆ ಮಳೆ, ಬೆಳೆ, ವಿದ್ಯುತ್, ಗೊಬ್ಬರ, ನೀರು ಹಾಗೂ ಬೆಲೆಯದೇ ಹೆಚ್ಚು ಸಮಸ್ಯೆ ಆದರೆ ಅರಣ್ಯದಂಚಿನ ರೈತರಿಗೆ ಇದೆಲ್ಲದರ ಜೊತೆಗೆ ಪ್ರಾಣದ ಸಮಸ್ಯೆಯೂ ಇದೆ. ಆದ್ದರಿಂದ ಅರಣ್ಯದಂಚಿನ ರೈತರ ಸಮಸ್ಯೆ ಬಗೆಹರಿಸಲು ಸರ್ಕಾರದ ವತಿಯಿಂದ ಅವರ ಜಮೀನು ಅಥವಾ ಗದ್ದೆಗಳಿಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಪ್ರೋತ್ಸಾಹಧನ, ಸಬ್ಸಿಡಿ ಅಥವಾ ಬಡ್ಡಿರಹಿತ ಸಾಲ ನೀಡ ಬಹುದಿತ್ತು, ಇದರೊಂದಿಗೆ ಅರಣ್ಯ ಪ್ರದೇಶದ ವಿಸ್ತೀರ್ಣ ಹಾಗೂ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿ ಅಥವಾ ಸೋಲಾರ್ ತೂಗು ತಂತಿಗಳನ್ನು ಹೆಚ್ಚಿಸಬೇಕಿತ್ತು. ಇದು ಮಾನವ ಮತ್ತು ವನ್ಯಜೀವಿಗಳ ಸಂಘರ್ಷವನ್ನು ಕಡಿಮೆ ಮಾಡುತ್ತಿತ್ತು. ಇದ್ಯಾವುದನ್ನು ನಮ್ಮ ಘನ ಸರ್ಕಾರ ಯೋಚಿಸದಿರುವುದು ವಿಷಾದನೀಯ.
ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ಜನರಿಗೆ ಕೊರೋನ ಅಲ್ಲ. ಸಣ್ಣ ಪುಟ್ಟ ರೋಗ ಬಂದರೂ ಅವರು ಚಿಕಿತ್ಸೆಗೆ ಅವಲಂಬಿತವಾಗಿರುವುದು ಪಕ್ಕದ ಮೈಸೂರು ಅನ್ನುವುದು ವಿಪರ್ಯಾಸ. ಇಲ್ಲಿನ ಜನರಿಗೆ ಮೂತ್ರಪಿಂಡ, ಹೃದಯ, ಜಠರ ಇನ್ನಿತರ ಸಮಸ್ಯೆ ಬಂದರೆ ಅಲ್ಲಿಗೆ ಗೋವಿಂದ!!
ಚಾಮರಾಜನಗರದಲ್ಲಿ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಜಿಲ್ಲೆಯಾಗಿ ದಶಕ ಕಳೆದರೂ ಚಿಕಿತ್ಸೆಗೆ ಮತ್ತೊಂದು ಜಿಲ್ಲೆಯ ಮೇಲೆ ಅವಲಂಬಿತವಾಗಿರುವುದು ಆಡಳಿತಕ್ಕೆ ಅವಮಾನದ ಸಂಗತಿ. ಈ ಆಯವ್ಯಯದಲ್ಲಿ ಚಾಮರಾಜನಗರ ಜಿಲ್ಲೆಗೆ ಒಂದು ದೊಡ್ಡ ಆಸ್ಪತ್ರೆಯನ್ನೋ, ಡಯಾಲಿಸಿಸ್ ಕೇಂದ್ರವನ್ನೋ, ಜಯದೇವ ಆಸ್ಪತ್ರೆಯನ್ನೋ, ಇಎಸ್’ಐ ಆಸ್ಪತ್ರೆ, ಇಎನ್’ಟಿ ಆಸ್ಪತ್ರೆಯನ್ನು ನೀಡಬಹುದಿತ್ತು. ಆದರೆ ಇದ್ಯಾವುದು ಮಂತ್ರಿಮಂಡಲಕ್ಕೆ ಕಾಣಲೇ ಇಲ್ಲ. ಗಡಿ ಜಿಲ್ಲೆಯ ಜನರ ಜೀವಗಳಿಗೆ ನಿಮ್ಮ ಆಯವ್ಯಯದಲ್ಲಿ ಜಾಗವೇ ಇಲ್ಲವೇ ಎಂಬುದು ನಮಗೆ ಕಾಡುತ್ತಿರುವ ಅನುಮಾನ. ಗಡಿಜಿಲ್ಲೆಯ ಜನರ ಆರೋಗ್ಯವನ್ನು ಕಾಪಾಡುವುದು ನಿಮ್ಮ ಜವಾಬ್ದಾರಿಯೆಂಬುದು ಮರೆಯಬಾರದಿತ್ತು.
ಗಡಿ ಜಿಲ್ಲೆಯೂ ಶೈಕ್ಷಣಿಕವಾಗಿ ಬಹಳ ಹಿಂದಿದೆ. ಇಲ್ಲಿ ಅವಕಾಶಗಳು ಹಾಗೂ ಅವಶ್ಯಕತೆಗಳ ಸರಮಾಲೆಯೇ ಇದೆ. ಶಿಕ್ಷಣ ಸಚಿವರೇ ಉಸ್ತುವಾರಿ ಸಚಿವರಾದ್ದರಿಂದ ಶೈಕ್ಷಣಿಕವಾಗಿ ಬಜೆಟ್’ನಲ್ಲಿ ನಮಗೆ ಏನಾದರೂ ಸಿಗಬಹುದೆಂದು ಜನರ ನಿರೀಕ್ಷೆ ಇತ್ತು. ಆದರೆ ಶೂನ್ಯ ಸಂಪಾದನೆಯಾಗಿದೆ. ಜಿಲ್ಲೆಗೆ ಇನ್ನು ಹಲವು ಶೈಕ್ಷಣಿಕ ವಿಭಾಗಗಳನ್ನು ಕಾಲೇಜುಗಳಿಗೆ ನೀಡಬಹುದಿತ್ತು, ಹೊಸ ಕಾಲೇಜುಗಳ ಸ್ಥಾಪನೆಗೆ ಪ್ರಾಮುಖ್ಯತೆ ನೀಡಬಹುದಿತ್ತು. ಕಾನೂನು, ದಂತ ವೈದ್ಯ, ಎಂಸಿಎ ಹಾಗೂ ಇನ್ನಿತರ ಸ್ನಾತಕೋತ್ತರ ವಿಭಾಗಗಳು, ಇಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಶಿಕ್ಷಣ, ಬಿಎಡ್ ಹೀಗೆ ಹತ್ತು ಹಲವು ವಿಷಯಗಳ ಶಿಕ್ಷಣ ಪ್ರಾರಂಭಿಸಬಹುದಿತ್ತು. ಆದರೆ ಇದ್ಯಾವುದನ್ನು ಶಿಕ್ಷಣ ಸಚಿವರಾಗಲಿ ಅಥವಾ ಸರ್ಕಾರವಾಗಲಿ ಪರಿಗಣಿಸಲೇ ಇಲ್ಲ. ಗಡಿ ಜಿಲ್ಲೆಯ ವಿದ್ಯಾರ್ಥಿಗಳ ಮೇಲೆ ನಿಮಗ್ಯಾಕೆ ಈ ತಾತ್ಸಾರ? ಗ್ರಾಮೀಣ ಭಾಗದಿಂದಲೇ ಆವರಿಸಿರುವ ಚಾಮರಾಜನಗರ ಜಿಲ್ಲೆಗೆ ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಅವರಿಗೆ ತರಬೇತಿ ನೀಡಿದ್ದರೆ ಉದ್ಯೋಗ ಪಡೆಯಲು ಅವರಿಗೆ ಅನುಕೂಲವಾಗುತ್ತಿತ್ತು. ಚಾಮರಾಜನಗರದ ಸಮೀಪವಿರುವ ಬದನಗುಪ್ಪೆ ಕೈಗಾರಿಕಾ ಪ್ರದೇಶ ಈಗ ಅನುಪಯುಕ್ತ ಜಾಗವಾಗಿ ಪರಿಣಮಿಸಿದೆ. ಆ ಪ್ರದೇಶದಲ್ಲಿ ಉದ್ಯಮ ಸೃಷ್ಠಿಸಲು ವಿಶೇಷ ಪ್ಯಾಕೇಜ್ ನೀಡಬೇಕಿತ್ತು. ಇದರಿಂದ ಜಿಲ್ಲೆಯ ಯುವಕರ ಉದ್ಯೋಗ ಸಮಸ್ಯೆಯು ಸ್ವಲ್ಪ ಮಟ್ಟಿಗೆ ಬಗೆಹರಿಯುತ್ತಿತ್ತು. ಆದರೆ ಸರ್ಕಾರ ಬಜೆಟ್ನಲ್ಲಿ ಇಡೀ ಚಾಮರಾಜನಗರವನ್ನೇ ಗಣನೆಗೆ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ.
ಚಾಮರಾಜನಗರ ಜಿಲ್ಲೆಯಲ್ಲಿ ಇನ್ನು ಹಲವು ಹಳ್ಳಿಗಳಲ್ಲಿ ಬಯಲು ಶೌಚಾಲಯ ಚಾಲ್ತಿಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷ ಕಳೆದರೂ ಇನ್ನು ಹಲವು ಹಳ್ಳಿಗಳಿಗೆ ಇನ್ನು ಸಂಪರ್ಕ ಕಲ್ಪಿಸಲು ಸರಿಯಾದ ರಸ್ತೆ ಇಲ್ಲ. ದೂರದ ಹಳ್ಳಿಗಳಿಗೆ ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಿಂದ ತೆರಳಲು ಬಸ್ ಸೌಕರ್ಯವಿಲ್ಲ. ಸ್ವಚ್ಛ ಭಾರತ ಎಂದು ಹೇಳಿಕೊಳ್ಳುವ ನಾವು ಗ್ರಾಮೀಣ ಅಥವಾ ಗಡಿ ಜಿಲ್ಲೆಯಲ್ಲಿ ಅದರ ಪ್ರಾಮುಖ್ಯತೆಯನ್ನು ಅರಿತಿದ್ದೀರಾ? ಈ ವಿಚಾರವಾಗಿ ನಮ್ಮ ಗಡಿ ಜಿಲ್ಲೆಗೆ ನೀವು ಕೊಟ್ಟಿದ್ದಾದರು ಏನು? ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಮಾಡಿ ಹೆಚ್ಚಿನ ಅನುದಾನ ನೀಡಿ ಜಿಲ್ಲೆಯ ಅಭಿವೃದ್ದಿಗೆ ಅಥವಾ ಜಿಲ್ಲಾ ಕೇಂದ್ರದ ಅಭಿವೃದ್ದಿಗೆ ನಾಂದಿ ಹಾಡಬಹುದಿತ್ತು. ಮೈಸೂರಿನಿಂದ ಮತ್ತಷ್ಟು ರೈಲನ್ನು ಚಾಮರಾಜನಗರಕ್ಕೆ ಓಡಿಸಬಹುದಿತ್ತು. ನಗರ ಸಾರಿಗೆಯನ್ನು ಜಾರಿಗೆ ತಂದು ಚಾಮರಾಜನಗರದ ಸುತ್ತ ಮುತ್ತಲ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸಬಹುದಿತ್ತು.
ವಿಪರ್ಯಾಸ ಇಡೀ ಬಜೆಟ್’ನಲ್ಲಿ ಚಾಮರಾಜನಗರದ ಹೆಸರೇ ಪ್ರಸ್ತಾಪವಾಗಲಿಲ್ಲ. ಇದು ಕೇವಲ ಚಾಮರಾಜನಗರದ ಸಮಸ್ಯೆಯಲ್ಲ ಹಲವು ಜಿಲ್ಲೆಗಳ ಸಮಸ್ಯೆ. ಬೆಂಗಳೂರು ಈಗಾಗಲೇ ಒತ್ತಡದಿಂದ ಬಳಲುತ್ತಿದೆ, ಇತರ ಜಿಲ್ಲೆಗಳಿಗೂ ಕೈಗಾರಿಕೆ, ಸಂಶೋಧನಾ ಕೇಂದ್ರ, ವಿದ್ಯಾಕೇಂದ್ರ ವಿಸ್ತರಿಸಿದರೆ ಈ ಪ್ರದೇಶಗಳು ಅಭಿವೃದ್ಧಿ ಹೊಂದುತ್ತದೆ ಹಾಗೂ ರಾಜಧಾನಿಯ ಮೇಲಿನ ಒತ್ತಡವು ಕಡಿತಗೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಹಲವಾರು ಜನರ ಕುಲಕಸುಬುಗಳು ಬಹಳಷ್ಟಿದೆ. ಅದನ್ನು ಪೋಷಿಸುವುದು, ಪ್ರೋತ್ಸಾಹಿಸುವುದು ಸರ್ಕಾರದ ಜವಾಬ್ಧಾರಿ. ರೇಷ್ಮೆ ಉತ್ಪಾದನೆ ಚಾಮರಾಜನಗರ ಜಿಲ್ಲೆಯ ಮುಖ್ಯ ಕಸುಬಾಗಿತ್ತು. ಸರ್ಕಾರದ ನಿರ್ಲಕ್ಷದಿಂದ ಜಿಲ್ಲೆಯಲ್ಲಿ ಈಗ ಆ ಕಸುಬು ನಶಿಸಿಹೋಗಿದೆ. ಇನ್ನು ಮುಂದಾದರು ಸ್ಥಳೀಯರ ಉದ್ಯಮ, ಕೃಷಿಗಳಿಗೆ ಸರ್ಕಾರದ ಗಮನ, ಪ್ರೋತ್ಸಾಹ ಬೇಕು.
ನಮ್ಮ ಜನರ ಆಕ್ರಂದನ ಅಳಲು, ನೋವು ಅವಶ್ಯಕತೆಗಳು ವಿಧಾನಸೌಧವನ್ನು ತಲುಪದಿರಬಹುದು. ಆದರೆ ಈ ನೊಂದ ಮನಸ್ಸು ಮತ್ತು ಕೈಗಳು ಚುನಾವಣೆಯ ಮತಯಂತ್ರವನ್ನಂತೂ ತಲುಪುತ್ತದೆ ಅನ್ನುವುದನ್ನು ಆಡಳಿತ ಸರ್ಕಾರಗಳು ಮರೆಯಬಾರದು. ಈ ಭಾಗದ ಶಾಸಕರುಗಳು ಹಾಗೂ ಸಂಸದರು ಆಯವ್ಯಯದಲ್ಲಿ ಚಾಮರಾಜನಗರದ ನಿರ್ಲಕ್ಷಕ್ಕೆ ನೇರ ಹೊಣೆಗಾರರು. ಭಾಜಪದ ಶಾಸಕರಾದ ಮಾನ್ಯ ನಿರಂಜನ್’ರವರಾಗಲಿ, ಹಿರಿಯ ರಾಜಕೀಯ ಮುತ್ಸದ್ದಿಯಾದ ಸಂಸದರೂ ಆದ ಮಾನ್ಯ ಶ್ರೀನಿವಾಸ ಪ್ರಸಾದ್ ರವರೂ ಸಹ ತಮ್ಮ ಜಿಲ್ಲೆಗೆ ಏನೇನು ಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ವಿವರಿಸಲು ವಿಫಲರಾದರೆ? ಮಾಜಿ ಸಚಿವರಾದ ಶ್ರೀಯುತ ಪುಟ್ಟರಂಗಶೆಟ್ಟಿಯವರಾಗಲಿ, ಮಾಜಿ ಸಚಿವರೂ ಉತ್ಸಾಹಿಗಳೂ ಆದ ಮಾನ್ಯ ಎನ್. ಮಹೇಶ್ರಾಗಲಿ ಬಜೆಟ್ ಮೊದಲು ಸರ್ಕಾರಕ್ಕೆ ಜಿಲ್ಲೆಯ ಅವಶ್ಯಕತೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸಲಿಲ್ಲವೇ ಅನ್ನುವುದು ಸಾರ್ವಜನಿಕರಲ್ಲಿ ಮೂಡಿರುವ ಪ್ರಶ್ನೆ. ಇದಕ್ಕೆ ಜಿಲ್ಲೆಯ ಸಂಸದರೂ ಸೇರಿದಂತೆ ನಾಲ್ಕೂ ಸಚಿವರೂ ಜನರಿಗೆ ಉತ್ತರಿಸಲೇಬೇಕು. ಅಭಿವೃದ್ಧಿ ಜಪ ಜಪಿಸುವ ಯಾವುದೇ ಸರ್ಕಾರವಾಗಲಿ ಚಾಮರಾಜನಗರ ಅವರಿಗೆ ಒಂದು ಪ್ರಯೋಗಾಲಯವಿದ್ದಂತೆ. ಅಭಿವೃದ್ಧಿ ವಿಚಾರಗಳಲ್ಲಿ ಅದು ಅಷ್ಟು ಅವಕಾಶ ಕಲ್ಪಿಸುತ್ತದೆ. ಅಂತಹ ಚಾಮರಾಜನಗರವನ್ನೇ ಬಜೆಟ್’ನಲ್ಲಿ ಮುಖ್ಯಮಂತ್ರಿಗಳು ಮರೆತಿದ್ದು ಮಾತ್ರ ಅತ್ಯಂತ ಕಹಿಯ ವಿಚಾರ.
ಈಗಲಾದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಂದು ವಿಶೇಷ ಪ್ಯಾಕೆಜ್ ನೀಡಿ ಏಕೆಂದರೆ ಚಾಮರಾಜನಗರವೂ ಸಹ ತಮ್ಮ ಆಡಳಿತ ವ್ಯಾಪ್ತಿಗೆ ಬರುತ್ತದೆ. ನಮ್ಮ ಚಾಮರಾಜನಗರವನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಅದರ ಸರ್ವತೋಮುಖ ಅಭಿವೃದ್ಧಿಗೆ ನೀವು ಸಹಕಾರ ನೀಡುತ್ತೀರಿ ಎನ್ನುವದಷ್ಟೆ ನಮ್ಮ ಭಾವನೆ.
Get in Touch With Us info@kalpa.news Whatsapp: 9481252093
Discussion about this post