ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
23 ಮಾರ್ಚ್ ಭಾರತೀಯರಿಗೆ ಅಚ್ಚಳಿಯದೇ ಮನದಲ್ಲುಳಿಯುವ ದಿನ. ಬಲಿದಾನವೆಂದರೇನೆಂದು ಅರಿಯದ ಇಂದಿನ ಯುವ ಪೀಳಿಗೆ ಆ ಮೈನವಿರೇಳಿಸುವ ರೋಚಕ ಘಟನೆಗಳನ್ನೊಮ್ಮೆ ಅವಲೋಕಿಸಿದರೆ ರೋಮ ರೋಮಗಳು ಸೆಟೆದು ನಿಲ್ಲುತ್ತವೆ. 90 ವರ್ಷಗಳ ಹಿಂದೆ ನಡೆದ ಘಟನೆಯಾದರೂ ಇಂದಿಗೂ ಪ್ರತಿ ಭಾರತೀಯನ ರಕ್ತ ಕುದಿಯುವಂತೆ ಮಾಡುವ ಆ ಮೂವರ ಗಲ್ಲು ಶಿಕ್ಷೆ ಲಕ್ಷಾಂತರ ಯುವ ಯೋಧರಿಗೆ ಸ್ವಾತಂತ್ರ್ಯ ದೀಕ್ಷೆ ನೀಡಿ ’ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯ ಮೂಲಕ ಕಿಚ್ಚು ಹಚ್ಚಿ ಬ್ರಿಟಿಷರಿಗೆ ಹುಚ್ಚೆಬ್ಬಿಸುವಂತೆ ಮಾಡಿದ ಸ್ಮರಣೀಯ ದಿನ ಈ ಬಲಿದಾನದ ದಿನ.
ಬ್ರಿಟೀಷರನ್ನು ಬಡಿದೋಡಿಸಲು, ಭತ್ತ ಬೆಳೆಯುವ ಬದಲು ಬಂದೂಕು ಬೆಳೆಯೋಣ ಎಂದು ಬಾಲ್ಯದಲ್ಲೇ ಅಬ್ಬರಿಸಿದ್ದ ಭಗತ್ ಸಿಂಗ್, ಆರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಬಾಲಗಂಗಾಧರ ತಿಲಕರ ಪ್ರಭಾವಕ್ಕೊಳಗಾಗಿ ದೇಶ ಮೆಚ್ಚಿದ ಧೀರನಾದ ಶಿವರಾಮ್ ರಾಜಗುರು, ಯೌವನದ ಪರ್ವ ಕಾಲದಲ್ಲಿ ಹದಿಹರೆಯದ ಯುವಕರು ಕಾಣುವ ಕನಸಿನ ಬದಲಾಗಿ ದೇಶದ ದಾಸ್ಯ ಮುಕ್ತಿಯ ಕನಸು ಕಂಡ ಸುಖದೇವ್ ಥಾರ್ಪ, ಈ ಮೂವರೂ ಬಂಧ ಮುಕ್ತ ಭಾರತಾಂಬೆಗಾಗಿ ’ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳ ಮಳೆ ಸುರಿಸುತ್ತ ಒಬ್ಬರನೊಬ್ಬರು ತಬ್ಬಿಕೊಂಡು ನಗುನಗುತ್ತ ಗಲ್ಲು ಗಂಬವೇರಿದ ಬಲಿದಾನ ದಿನವಿದು.
ಕ್ಷಣ ಕ್ಷಣಕ್ಕೂ ಸ್ವಾತಂತ್ರ್ಯ ಸೇನಾನಿಗಳಲ್ಲಿ ಕಿಚ್ಚು ಹಚ್ಚುತ್ತ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರಿಗೆ ಚಳ್ಳೇಹಣ್ಣು ತಿನ್ನಿಸುತ್ತ, ಯಾವ ಕ್ಷಣದಲ್ಲಿ ಏನು ಮಾಡಿಯಾರೋ ಎಂಬ ಭಯ ಬಿತ್ತಿದ್ದ ಈ ಮೂವರು ಬದುಕಿದ್ದಷ್ಟೂ ತಮಗೆ ತಲೆ ನೋವು ತಪ್ಪಿದ್ದಲ್ಲ ಎಂದರಿತ ಬ್ರಿಟಿಷರು 24 ಮಾರ್ಚ್1931ಕ್ಕೆ ನಿಗಧಿಯಾಗಿದ್ದ ಭಗತ್ ಸಿಂಗ್, ಶಿವರಾಮ್ ರಾಜಗುರು ಹಾಗೂ ಸುಖದೇವ್ ಥಾಪರ್ ಇವರ ಗಲ್ಲು ಶಿಕ್ಷೆಯನ್ನು ಹನ್ನೊಂದು ತಾಸು ಮೊದಲೇ ಹಿಂದೂಡಿಕೆ ಮಾಡಿ ಮಾರ್ಚ್ 23ರ ಸಂಜೆ 07:33 ಕ್ಕೆ ನೇಣುಗಂಬಕ್ಕೇರಿಸಿ ದರ್ಪದ ದಾರ್ಷ್ಟ್ಯ ಮೆರೆದರು ಆ ಬ್ರಿಟಿಷರು. ಚಳುವಳಿಗಾರರಿಗೆ ಚಳಿ ಹುಟ್ಟಿಸಲು ಕೈಗೊಂಡ ಬ್ರಿಟಿಷರ ಈ ನಿರ್ಣಯ ನೀರಿನಲ್ಲಿ ತೇಲಿಬಿಟ್ಟಂತಾಯಿತು. ಗಲ್ಲು ಶಿಕ್ಷೆಯಿಂದ ಸ್ವಾತಂತ್ರ್ಯ ಕಹಳೆ ಕುಂದಬಹುದೆಂದುಕೊಂಡಿದ್ದ ಕುಟಿಲ ಬ್ರಿಟಿಷರ ಊಹೆ ಸುಳ್ಳಾಯಿತು. ಹುತಾತ್ಮರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಹಚ್ಚಿದ್ದ ಸ್ವಾತಂತ್ರ್ಯದ ಕಿಡಿ ಮಿಂಚಿನಂತೆ ಸಂಚರಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಹುಚ್ಚೆಬ್ಬಿಸಿ ಹೋರಾಟದ ವೇಗ ಹೆಚ್ಚಿಸಿದ್ದು ಮಾತ್ರ ಹೋರಾಟದಲ್ಲಿ ಹರಿದ ನೆತ್ತರಿನಷ್ಟೇ ಸತ್ಯ ಎಂಬುದಕ್ಕೆ ಪುರಾವೆ ಒದಗಿಸಿತು.
ವ್ಯಕ್ತಿಯನ್ನು ಸಾಯಿಸಬಹುದು, ಆದರೆ ವಿಚಾರಗಳನ್ನಲ್ಲ ಎಂದು ಪ್ರತಿಪಾದಿಸುತ್ತಿದ್ದ ಭಗತ್ ತನ್ನ ವಿಚಾರಧಾರೆಗಳಿಂದಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದು ಗಲ್ಲಿಗೇರುವ ಹಿಂದಿನ ದಿನ ತನ್ನ ವಕೀಲ ಪ್ರಾಣನಾಥ ಮೆಹ್ತಾರ ಕೊನೆಯ ಭೇಟಿಯಲ್ಲಿ ತಾನು ತರಲು ಹೇಳಿದ್ದ The revolutionary Lenin ಪುಸ್ತಕವನ್ನು ಪಡೆದು ಕ್ಷಣವೂ ತಡಮಾಡದೇ ಓದಲಾರಂಭಿಸಿದ ಆ ಕ್ಷಣಗಳನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಕಟ್ಟಕಡೆಯ ಭೇಟಿಗೆಂದು ಆಗಮಿಸಿದ ತಾಯಿಗೆ ಹೇ ಮಾತೆಯೇ, ನೂರು ಜನ್ಮ ಹೊತ್ತು ಬರುವೆ, ಆದರೆ ಭಾರತಾಂಬೆಯ ದಾಸ್ಯಮುಕ್ತಿಗಾಗಿ ಇಂತಹ ಒಂದು ಸಾವಿಗೆ ಹೆದರಲಾರೆ ಎಂಬ ಕಂಚಿನ ಕಂಠದ ಆ ಮಾತುಗಳು ಹೆತ್ತ ತಾಯಿಯ ಹೆಮ್ಮೆ ಹಾಗೂ ಜನ್ಮ ನೀಡಿದ ಸಾರ್ಥಕತೆಯನ್ನು ಇಮ್ಮಡಿಗೊಳಿಸಿದ್ದವು. ನಮಗೆ ದೊರೆತ ಸ್ವಾತಂತ್ರ್ಯದ ಹಿಂದಿನ ಇಂತಹ ಸುಪುತ್ರರ ತ್ಯಾಗ ಮತ್ತು ಬಲಿದಾನವನ್ನು ಕನಿಷ್ಠ ವರ್ಷಕ್ಕೊಮ್ಮೆಯೂ ನೆನೆಯದೇ ಹೋದರೆ ಅದು ನಮಗೆ ನಾವೇ ಮಾಡಿಕೊಳ್ಳುವ ದ್ರೋಹವೇ ಸರಿ.
ಫೇಸ್ ಬುಕ್, ವಾಟ್ಸ್ಯಾಪ್ ಇನ್ಸ್ಟಾಗ್ರಾಂಗಳಲ್ಲಿ ಫೋಟೊವೊಂದನ್ನು ಪೋಸ್ಟ್ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎನ್ನುವ ಯುವಜನತೆ ಎಚ್ಚೆತ್ತುಕೊಳ್ಳುವ ಸಮಯವಿದು. ಮುಂದಿನ ಪೀಳಿಗೆಗೆ ಈ ಬಲಿದಾನದ ಮಹತ್ವವನ್ನು ಕೊಂಡೊಯ್ಯುವ ಸಾರಥಿಗಳಾಗಬೇಕು ಈ ಯುವ ಜನತೆ.
ಹೌದು, ಯುವಜನಾಂಗಕ್ಕೆ ಬಲಿದಾನದ ಮಹತ್ವ ಸಾರುವ ಪ್ರತೀಕವಾಗಿ ಮಾರ್ಚ್ 23ರ ನಾಳೆ ರಾಷ್ಟ್ರದಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಭಾರತಾಂಬೆಯ ಮುಕ್ತಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ಪ್ರಾಣವನ್ನೇ ತ್ಯಾಗ ಮಾಡಿದವರ ನೆನಪಿನಲ್ಲಿ ದೇಶದಾದ್ಯಂತ ನಡೆಸಲುದ್ದೇಶಿಸಿರುವ ರಕ್ತದಾನ ಶಿಬಿರಗಳು ಯುವಜನಾಂಗಕ್ಕೆ ಪ್ರೇರಣೆ ನೀಡಲೆಂದೇ ಆಯೋಜಿತವಾಗಿವೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಎನ್ಯಎಫ್’ಎಎ ಸಾಮಾಜಿಕ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 23 ಮಾರ್ಚ್ 2021 ರಂದು ದೇಶಾದ್ಯಂತ ರಕ್ತದಾನ ಶಿಬಿರಗಳ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ದಾಖಲೆ ಬರೆಯುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿರುವ ಈ ಸತ್ಕಾರ್ಯದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ರೆಡ್ ಕ್ರಾಸ್ ವಿನಂತಿಸಿದೆ.
ಅಂದು ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ನೀಡಿದ್ದ ’ಏಳಿ ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ’ ಎಂಬ ಕರೆ ಸರ್ವಕಾಲಕ್ಕೂ ಪ್ರಸ್ತುತ. ಯಾವುದೇ ಸ್ವಾತಂತ್ರ್ಯ ಹೋರಾಟಕ್ಕಲ್ಲ ಈ ಕರೆ. ಯಾವುದೇ ಬಲಿದಾನಕ್ಕಲ್ಲ ಈ ಕರೆ. ಬಲಿದಾನದ ನೆನಪಿಗಾಗಿ ಕರೆದಿರುವ ಈ ಕರೆ. ಭಾರತೀಯರ ಕೆಚ್ಚೆದೆಗೆ ಕಿಚ್ಚು ಹಚ್ಚಿ ಹೋರಾಟದ ಹಾದಿ ಬದಲಿಸಿ ನಮ್ಮೆಲ್ಲರ ಮನೆ ಮನೆಗಳಲ್ಲಿ ಅಚ್ಚಳಿಯದೇ ಉಳಿದ ಹೆಮ್ಮೆಯ ಸುಪುತ್ರರ ತ್ಯಾಗವನ್ನು ನೆನೆಯಲು ಈ ಕರೆ. ಭಗತ್ ಸಿಂಗ್, ಶಿವರಾಮ್, ರಾಜಗುರು ಮತ್ತು ಸುಖದೇವ್ ಥಾಪರ್ ಈ ಮೂವರ ಬಲಿದಾನವನ್ನು ರಕ್ತದಾನದ ಮೂಲಕ ಆಚರಿಸೋಣ ಬನ್ನಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post