ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಡಿಯೂರಪ್ಪನವರಿಗೆ ಸುಳ್ಳು ಹೇಳಿ ಅಭ್ಯಾಸವಿದೆ. ಬೇಕಾದರೆ ಅವರೇ ಘಂಟೆ ಬಾರಿಸಬಹುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಅವರು ಮಾಜಿ ಸಿಎಂ ಯಡಿಯೂರಪ್ಪ #Yadiyurappa ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ದಮ್ಕಿ ಹಾಕಿದ್ದಾರೆ ಎನ್ನುವ ವಿಚಾರಕ್ಕೆ ಈಶ್ವರಪ್ಪ ಅವರು ದೇವಸ್ಥಾನದಲ್ಲಿ ಘಂಟೆ ಬಾರಿಸಲಿ ಎಂದು ರಾಘವೇಂದ್ರ #B Y Raghavendra ಅವರು ಹೇಳಿದಾಗ ನಾನು ನೀನು ಬೇಡ, ನಿಮ್ಮಪ್ಪನನ್ನು ಕಳುಹಿಸು, ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿಲ್ಲ ಎಂದು ಹೇಳಿ ಪ್ರಮಾಣ ಮಾಡಲಿ ಎಂದಿದ್ದೆ. ನಾನು ಮನೆಯಲ್ಲಿ ದೇವರ ಪೂಜೆ ಮಾಡುವಾಗ ಘಂಟೆ ಬಾರಿಸಿದ್ದೇನೆ ಹೊರೆತು ಸುಳ್ಳು ಹೇಳಿ ದೇವಸ್ಥಾನದಲ್ಲಿ ಘಂಟೆ ಭಾರಿಸುವ ಅಭ್ಯಾಸ ನನಗಿಲ್ಲ. ಯಡಿಯೂರಪ್ಪ ಬೇಕಾದರೆ ಘಂಟೆ ಬಾರಿಸಬಹುದು. ಅವರಿಗೆ ಸುಳ್ಳು ಹೇಳಿ ಅಭ್ಯಾಸ ಇದೆ ಎಂದು ಕುಟುಕಿದರು.
ರಾಜ್ಯದಲ್ಲಿ ಇಡೀ ಬಿಜೆಪಿ ಪಕ್ಷ ಒಂದು ಕುಟುಂಬ ಕೈಯಲ್ಲಿದೆ. ಕಾಂಗ್ರೆಸ್’ನ ಕುಟುಂಬ ರಾಜಕಾರಣ ಸಂಸ್ಕೃತಿ ಈಗ ಬಿಜೆಪಿಗೂ ಬಂದಿದೆ. ಇದರಿಂದ ಅನೇಕ ಕಾರ್ಯಕರ್ತರು ನಲುಗಿ ಹೋಗಿದ್ದಾರೆ. ಹಿಂದು ಪರ ನಾಯಕರು ಸೇರಿದಂತೆ ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಇದರ ವಿರುದ್ಧವಾಗಿ ನನ್ನ ಸ್ಪರ್ಧೆ ಎಂದರು.
ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಹಿಂದುಳಿದ ವರ್ಗದವರು ಇಷ್ಟೊಂದು ಸಂಖ್ಯೆಯಲ್ಲಿ ಪಕ್ಷಕ್ಕೆ ಬರುತ್ತಿರುವುದನ್ನು ಯಡಿಯೂರಪ್ಪ ಅವರು ಸ್ವಾಗತ ಮಾಡಬೇಕಿತ್ತು. ಆದರೆ, ಯಡಿಯೂರಪ್ಪ ಅವರು ಅದನ್ನು ನಿಲ್ಲಿಸುವಂತೆ ವರಿಷ್ಠರಿಗೆ ದೂರು ಕೊಟ್ಟಿದ್ದರು. ವರಿಷ್ಠರ ಸೂಚನೆಯಂತೆ ಅದನ್ನು ನಿಲ್ಲಿಸಿದ್ದೆ. ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಬೇಡಿ ಎಂದಾಗಲೂ ಅವರ ಸೂಚನೆಯನ್ನು ಪಾಲನೆ ಮಾಡಿದೆ. ಆದರೆ, ಈಗ ಸ್ಪರ್ಧೆ ಯಾಕೆ ಎಂಬುದುನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ತಿಳಿಸಿ ಅವರನ್ನು ಅಪ್ಪಿಸುವ ಶಕ್ತಿ ಈಗ ನನಗೆ ಬಂದಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಕುಟುಂಬದವರು ಚೆನ್ನಾಗಿ ಇರಲಿ. ಆದರೆ, ಚುನಾವಣೆಯಲ್ಲಿ ಸೋಲಲಿ. ಒಂದು ಕುಟುಂಬದಿಂದ ಬಿಜೆಪಿ ಮುಕ್ತವಾಗಲಿ. ಹಿಂದೆಲ್ಲ ಸಂಘಟನೆ ಪ್ರಮುಖರು ಕೂತು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರಕ್ಕೆ ಪಟ್ಟಿ ಕಳುಹಿಸುತ್ತಿದ್ದರು. ಈಗ ಎಲ್ಲವೂ ಯಡಿಯೂರಪ್ಪ ಕುಟುಂಬದವರೇ ಮಾಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಶಿಕಾರಿಪುರದಲ್ಲಿ ಲಿಂಗಾಯಿತ, ಹಿಂದುಳಿದ ನಾಯಕರುನ್ನು ತೆಗೆದಿದ್ದಾರೆ. ಎಷ್ಟೇ ಹಣ ಸುರಿದರು 11 ಸಾವಿರ ಅಂತರದಲ್ಲಿ ತಿಣುಕಾಡಿ ಗೆದ್ದಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬ ಬಿಟ್ಟರೆ ಬೇರೆ ಯಾರು ಇಲ್ಲ ಎನ್ನುವ ಭ್ರಮೆ ವರಿಷ್ಠರು ಇದ್ದಾರೆ. ಹೀಗಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಅಂತವರಿಗೆ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ ಎಂದು ತಿಳಿಸಿದರು.
Also read: ಮಂಡ್ಯ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ ಅಂಬರೀಶ್ | ಬಿಜೆಪಿಗೆ ಬೆಂಬಲ ಘೋಷಣೆ
ನಾನು ಸ್ಪರ್ಧೆ ಘೋಷಣೆ ಮಾಡಿದ ಬಳಿಕ ಬಿಜೆಪಿಯ ಕಾರ್ಯಕರ್ತರ ಗೌರವ ಹೆಚ್ಚಾಗಿದೆ. ನನ್ನ ಜೊತೆ ಅಮಿತ್ ಶಾ ನನಗೆ ಕರೆ ಮಾಡಿ ಮಾತನಾಡಿದ್ದಾರೆ. 10 ವರ್ಷದಲ್ಲಿ ಒಮ್ಮೆಯೂ ನನ್ನ ಮನೆಗೆ ಬಾರದ ಯಡಿಯೂರಪ್ಪ ಅವರು ಈಶ್ವರಪ್ಪ ಮನೆಗೆ ಹೋಗುತ್ತೇನೆ ಎನ್ನುತ್ತಿದ್ದಾರೆ. ಇನ್ನು ರಾಘವೇಂದ್ರ ಅವರು ಪ್ರತಿ ಕಾರ್ಯಕರ್ತರ ಮನೆಗೆ ಹೋಗುತ್ತಿದ್ದಾರೆ. ಇದೆಲ್ಲವೂ ನನ್ನ ಸ್ಪರ್ಧೆಯ ಪರಿಣಾಮ ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಇ. ವಿಶ್ವಾಸ್, ಏಳುಮಲೈ, ಲತಾ ಗಣೇಶ್, ಶಂಕರ್ ಗನ್ನಿ, ಆರ್.ಕೆ. ಪ್ರಕಾಶ್, ಲಕ್ಷ್ಮಿ ನಾಯಕ್, ರಮೇಶ್, ರಾಜು, ಶಂಕರ್ ನಾಯ್ಕ್ , ಭೂಪಾಲ್ ಕುಮಾರ್, ಶ್ರೀಕಾಂತ್, ಜಾಧವ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post