ಕಲ್ಪ ಮೀಡಿಯಾ ಹೌಸ್ | ಸೊರಬ |
ಕಾನೂನಿನ ದುರುಪಯೋಗವಾಗುತ್ತಿರುವುದು ಅಧಿಕಾರಿ, ಜನಪ್ರತಿನಿಧಿಗಳಿಂದ ಎಂಬುದಕ್ಕೆ ಈಚೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರಕರಣವೆ ಸಾಕ್ಷಿಯಾಗಿದೆ ಎಂದು ಸೊರಬ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಹಿರಿಯ ವಕೀಲ ಎಂ.ಆರ್.ಪಾಟೀಲ್ ಹೇಳಿದರು.
ಈಚೆಗೆ ಶೀವಮೊಗ್ಗ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸೊರಬ ತಾಲ್ಲೂಕು ನಿಟ್ಟಕ್ಕಿ ಗ್ರಾಮದ ಸನಂ 33ರ ಸುಮಾರು 80ಕ್ಕೂ ಹೆಚ್ಚು ಎಕರೆ ಬಗರ್ಹುಕುಂ ಮಂಜೂರಾತಿ ಅರ್ಜಿಯನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಸೊಪ್ಪಿನಬೆಟ್ಟ, ಗೋಮಾಳ ಮುಂತಾದ ಪರಿಸರ ಸಂರಕ್ಷಣೆಯಲ್ಲಿ ಕಾನೂನು ರೀತ್ಯ ಹೋರಾಡುತ್ತಿರುವ ವಕೀಲ ವೀರೇಂದ್ರ ಪಾಟೀಲ್ ಕಾರ್ಯ ಚಟುವಟಿಕೆ ಶ್ಲಾಘನೀಯ, ಅವರಿಗೆ ನಮ್ಮ ಪರಿಸರ ವೇದಿಕೆ ತುಂಬ ಹೃದಯದ ಧನ್ಯವಾದಗಳನ್ನು ಅರ್ಪಿಸಿದೆ.
ಎಂ.ಆರ್. ಪಾಟೀಲ್, ಹಿರಿಯ ವಕೀಲ, ಸೊರಬ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ
ಗ್ರಾಮದಲ್ಲಿ ಮಂಜೂರು ಮಾಡಲು ಕಾನೂನು ನೆರವಾಗುವುದಿಲ್ಲ ಎಂದು ತಿಳಿದಿದ್ದರೂ ಮುಗ್ಧ ಗ್ರಾಮಸ್ಥರಿಗೆ ಜಾಗ ಮಂಜೂರು ಮಾಡಿ ಇಕ್ಕಟ್ಟಿಗೆ ಸಿಕ್ಕಿಸಿದ್ದು ಅಧಿಕಾರಿಗಳು, ಇವರಿಗೆ ಕುಮ್ಮಕ್ಕು ನೀಡಿದ್ದು ಜನಪ್ರತಿನಿಧಿಗಳು. ಇಂತಹ ಹಲವಾರು ಪ್ರಕರಣಗಳು ಸೊರಬ ತಾಲ್ಲೂಕಿನಲ್ಲಿ ಪ್ರಚಲಿತದಲ್ಲಿದ್ದು, ಕಾನೂನಿನ ಮೂಲಕವೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತದ ಪರಿಸರದ ವೈಪರೀತ್ಯತೆ ಗಮನಿಸಿದರೂ ನಿರಂತರ ಇಲ್ಲಿನ ಸಂಪದ್ಭರಿತ ಅರಣ್ಯ ನಾಶವಾಗುತ್ತಿರುವುದು ಬೇಸರದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ:
ತಾಲ್ಲೂಕು ಕುಪ್ಪಗಡ್ಡೆ ಹೋಬಳಿ ನಿಟ್ಟಕ್ಕಿ ಗ್ರಾಮದ ಸನಂ 33ರಲ್ಲಿನ 145, ಎಕರೆ ಡೀಮ್ಡ್ ಅರಣ್ಯ ಜಾಗ ಕೇವಲ ೫ ವರ್ಷದಲ್ಲಿ ಸುಮಾರು 80ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಬರಿದಾಗಿದ್ದು, ತಹಶೀಲ್ದಾರ್ ಚಂದ್ರಶೇಖರ್ ಅವಧಿಯಲ್ಲಿ 29 ಬಗರ್ ಹುಕುಂ ಫಲಾನುಭವಿಗಳಿಗೆ ಮಂಜೂರು ಕೂಡ ಆಗಿತ್ತು. ಈ ಕುರಿತು ಜನಸಂಗ್ರಾಮ ಪರಿಷತ್ತು ಸದಸ್ಯ ಗಿರೀಶ್ ಆಚಾರ್ ಹಿಂದೆಯೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ತದನಂತರ ಸಾಗರ ಸಹಾಯಕ ಆಯುಕ್ತರು ಈ ಜಾಗೆ ಶಾಸನ ಬದ್ಧ ಅರಣ್ಯದ ವ್ಯಾಖ್ಯಾನದಡಿಯಲ್ಲಿ ಬರುತ್ತದೆ ಎಂದು ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದರು. ವಜಾನಂತರ ಅರಣ್ಯ ಇಲಾಖೆ ಕಾನೂನು ರೀತ್ಯ ತೆರವು ಪ್ರಕ್ರಿಯೆಗೆ ಮುಂದಾಗಿತ್ತು. ಈ ಎಲ್ಲ ಕಾರ್ಯಪ್ರಗತಿಯ ಹಿನ್ನೆಲೆಯಲ್ಲಿ ವಕೀಲ ವೀರೇಂದ್ರ ಆರ್.ಪಾಟೀಲ್ ಮತ್ತು ಕೆಲವರು ಅತಿಕ್ರಮಣಕಾರರ ವಿರುದ್ಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಕೂಲಂಕುಷ ಉಭಯತರ ದೂರು, ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಪ್ರಶ್ನಿತ ಜಮೀನು ಸೊಪ್ಪಿನಬೆಟ್ಟ ಜಮೀನಾಗಿರುವುದರಿಂದ ಅರಣ್ಯ ಇಲಾಖೆಯ ಅಧಿಸೂಚನೆ ಎಫ್ಇಇ 185ಎಫ್ಎಎಫ್ 2011 ದಿನಾಂಕ 15-05-2014ರ ಪ್ರಕಾರ ಪರಿಭಾವಿತ ಅರಣ್ಯ ಪ್ರದೇಶವಾಗಿದ್ದು, ಶಾಸನಬದ್ಧ ಅರಣ್ಯವಾಗಿರುತ್ತದೆ. ಹಾಗಾಗಿ ಅತಿಕ್ರಮಿಸಿದ ಮೇಲ್ಮನವಿಯನ್ನು ತಿರಸ್ಕರಿಸಿ ಸಾಗರ ಉಪವಿಭಾಗಾಧಿಕಾರಿಗಳ ಆದೇಶವನ್ನು ಸ್ಥಿರೀಕರಿಸಲಾಗಿದೆ ಎಂದು ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post