Read - 2 minutes
ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳಲ್ಲಿನ ಅಭಿರುಚಿಯನ್ನು ಚಿಕ್ಕವರಿದ್ದಾಗಲೆ ಗಮನಿಸಿ ಅವರ ಅಭಿರುಚಿಗೆ ಅನುಗುಣವಾಗಿ ಪ್ರೋತ್ಸಾಹಿಸಬೇಕು ಎಂದು ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಪಟ್ಟಣದ ಸಮರ್ಪಣ ಎಜುಕೇಶನಲ್ ಟ್ರಸ್ಟ್ ನ ಸ್ಮಾರ್ಟ್ ಕಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಅವಧಿಯಲ್ಲಿ ಪೋಷಕರು ತಮ್ಮ ಹಲವಾರು ಅನಗತ್ಯ ವಿಚಾರಗಳನ್ನು ತ್ಯಾಗ ಮಾಡಬೇಕು. ಟಿವಿ, ಮೊಬೈಲ್ ಬಳಕೆ ಕಡಿಮೆ ಆಗಲಿ, ಇನ್ನೊಂದು ಮಗುವನ್ನು ಹೋಲಿಸಿ ನಿಮ್ಮ ಮಕ್ಕಳನ್ನು ತೆಗಳಬೇಡಿ. ಸಾಧ್ಯವಾದರೆ ನೈತಿಕ ತಳಹದಿಯ ಮಾದರಿ ವಿಷಯವನ್ನು ತಿಳಿಸಿಕೊಡಿ. ಸಮರ್ಪಣ ಸಂಸ್ಥೆ ಆರಂಭದಿಂದಲು ಈ ನೆಲೆಯ ಸಂಸ್ಕೃತಿಯ ಜೊತೆಗೆ ಮಾನವಿಕ ಮೌಲ್ಯ ವೃದ್ಧಿಗೆ ಒತ್ತು ನೀಡಿದೆ. ಮೌಲ್ಯಾಧಾರಿತ ಶಿಕ್ಷಣದ ಮೂಲಕ ಜನ ಮನ್ನಣೆ ಪಡೆದಿದೆ, ಸಂಸ್ಥೆಯ ಕಾರ್ಯ ಚಟುವಟಿಕೆ ಜೊತೆ ಸ್ಪಂದಿಸಿ ನಿಮ್ಮ ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಿ ಎಂದರು.
ಪೂರ್ವ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಶಿಕ್ಷಕರ ತಾಳ್ಮೆ, ಕಾರ್ಯ ತತ್ಪರತೆ, ಸಹನಶೀಲತೆ ಅಗತ್ಯವಿದ್ದು ಶೈಕ್ಷಣಿಕ ತಳಹದಿಯ ಮೆಟ್ಟಿಲಾಗಿ ಅವರು ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಮುಖ್ಯ ಅತಿಥಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಹೇಳಿದರು.
ಮಾಜಿ ತಾಪಂ ಅಧ್ಯಕ್ಷ ಹೆಚ್. ಗಣಪತಿ, ಗ್ರಾಮಾಂತರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪೂರ್ವ ಪ್ರಾಥಮಿಕ ಶಾಲೆ ಯ ಅಗತ್ಯತೆ ಅವಶ್ಯವಿದ್ದು, ಸಮರ್ಪಣ ಸಂಸ್ಥೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
Also read: ಸಚಿವ ಮಧು ಬಂಗಾರಪ್ಪ ಕಾರು ಅಪಘಾತ | ಅಪಾಯದಿಂದ ಪಾರಾದ ಮಂತ್ರಿಗಳು
ವೀರಶೈವ ಸಮಾಜದ ಟೌನ್ ಅಧ್ಯಕ್ಷ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಜೆ.ಪ್ರಕಾಶ್, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯಶೇಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಸಂಸ್ಥೆಯ ಅಧ್ಯಕ್ಷ ಕೆ.ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಮಮತಾ ರಾಜೇಶ್, ಶಿಕ್ಷಕ ವೃಂದದವರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ, ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಭಿಕರಿಗೆ ಸಾಮಾನ್ಯ ಜ್ಞಾನದ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post