ಕಲ್ಪ ಮೀಡಿಯಾ ಹೌಸ್ | ಉಡುಪಿ |
ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ದೇಶದ ಜನರ ಆಶಾಕಿರಣ. ಕಳೆದ 8 ವರ್ಷದಲ್ಲಿ ನರೇಂದ್ರ ಮೋದಿಯವರು ಸಮರ್ಥ, ಭರವಸೆಯ ನಾಯಕರಾಗಿ ಭಾರತದ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ತಿಳಿಸಿದರು.
ಅವರು ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ 8ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ದೇಶದ ಪ್ರಗತಿಗೆ ರಾಜಕೀಯ ಸ್ಥಿರತೆಯನ್ನು ತಂದ ಮುತ್ಸದ್ದಿ ನಾಯಕ. ರಾಜಕೀಯ ಸ್ಥಿರತೆಯ ಜೊತೆಗೆ ಭಾರತ ದೇಶದ ಸಮಗ್ರ ಅಭಿವೃದ್ಧಿಯ ಯಶೋಗಾಥೆಯ ನೇತೃತ್ವವನ್ನು ಮೋದಿಯವರು ಅತ್ಯಂತ ಸಮರ್ಥವಾಗಿ ವಹಿಸಿದ್ದಾರೆ. ದಿಟ್ಟ ನಿರ್ಧಾರಗಳ ದೂರದೃಷ್ಟಿಯ ಪ್ರತೀಕವಾದ ಪ್ರಧಾನಿ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಬನೆಯ ಸ್ವಾಭಿಮಾನದ ಬದುಕು ನಡೆಸಲು ದಾರಿ ತೋರಿದ ಧೀಮಂತ ಜನನಾಯಕರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಿ ಮೋದಿಯವರಿಂದ ಹೊಸ ಮನ್ವಂತರದ ಸೃಷ್ಠಿ:
ಜನರಿಗೆ ಮೂಲಭೂತಸೌಕರ್ಯ, ಉತ್ತಮ ಶಿಕ್ಷಣ, ಆತ್ಮನಿರ್ಭರತೆ ಮೂಲಕ ಹೊಸ ಮನ್ವಂತರವನ್ನು ನರೇಂದ್ರ ಮೋದಿಯವರು ಸೃಷ್ಟಿಮಾಡಿದ್ದಾರೆ. ದೇಶಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದ್ದಾರೆ. ಅವರನಾಯಕತ್ವ ನಿಸ್ವಾರ್ಥ, ಜನರನ್ನು ಸಶಕ್ತ ಮಾಡುವ ಮೂಲಕ ದೇಶವನ್ನು ಸಶಕ್ತ ಮಾಡುತ್ತಿದ್ದಾರೆ. ಮೋದಿಯವರ ಮೇಲೆ, ಅವರ ಕಾರ್ಯಕ್ರಮಗಳ ಮೇಲೆ ಜನರಿಗೆ ಅಚಲವಾದ ವಿಶ್ವಾಸವಿರಿಸಿದ್ದಾರೆ ಎಂದರು.
Also read: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದೇನು? ಇಲ್ಲಿದೆ ಮಾಹಿತಿ
ಜನರನ್ನು ಫಲಾನುಭವಿಗಳಾಗದೇ ಪಾಲುದಾರರನ್ನಾಗಿ ಮಾಡುವ ಗುರಿ:
ಕೋವಿಡ್ ಲಸಿಕೆ, ದುಡಿಯುವ ವರ್ಗದ ಜೀವನಕ್ಕೆ ಆರ್ಥಿಕ ಭದ್ರತೆ, ಆಹಾರ ಭದ್ರತೆ ಸೇರಿದಂತೆ ಅನೇಕ ಗರೀಬ್ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ಸಬ್ ಕಾಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎನ್ನುವ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಜನರೂ ಭಾಗಿದಾರರಾಗಬೇಕು. ಜನರನ್ನು ಫಲಾನುಭವಿಗಳಾಗದೇ ಪಾಲುದಾರರನ್ನಾಗಿ ಮಾಡಬೇಕೆನ್ನುವ ಗುರಿ ಹೊಂದಿದ್ದಾರೆ. ಜನರ ಏಳಿಗೆಯಿಂದಲೇ ದೇಶದ ಏಳಿಗೆ ಎಂಬುದನ್ನು ಆಡಳಿತ ವರ್ಗಕ್ಕೆ ಮನದಟ್ಟು ಮಾಡಿಸಿದರು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಾರತದ ನವನಿರ್ಮಾಣ ಕಾರ್ಯವನ್ನು ಸಾಧಿಸಲಾಗುತ್ತಿದೆ ಎಂದರು.
ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಒತ್ತು :
ಪ್ರಧಾನಿ ಮೋದಿಯವರು ಭಾರತದಲ್ಲಿ ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ದೇಶದಲ್ಲಿಯೇ ಮೊದಲ ಸೆಮಿಕಂಡಕ್ಟರ್ ಉತ್ಪಾದನೆ ಕೈಗೊಳ್ಳಲು ಒಪ್ಪಂದ ಸಹಿ ಮಾಡಿರುವುದು ಕರ್ನಾಟಕ ರಾಜ್ಯ .ಹೊಸ ಇಂಧನ ಬಳಿಸಿ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು, ಸೌರಶಕ್ತಿ ಮತ್ತು ಪವನ ವಿದ್ಯುತ್ ನ ಸಂಗ್ರಹಣೆ ಯೋಜನೆ.ಎಥನಾಲ್ ಬಳಕೆ ಮಾಡುವುದು ನರೇಂದ್ರ ಮೋದಿಯವರ ಚಿಂತನೆಯಾಗಿದೆ. ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಎಥನಾಲ್ ನ್ನು ಉತ್ಪಾದಿಸುವ ರಾಜ್ಯ ಗಿದೆ.ನವೀಕರೀಸಬಹುದಾದ ಇಂಧನ, ಹಸಿರು ಇಂಧನ ಅತಿ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕಲ್ಲಿಯೂ ಸೌರಶಕ್ತಿ ಸಂಗ್ರಹಣಾ ಯೋಜನೆಗಳನ್ನು ಶರಾವತಿಯಲ್ಲಿ 5000 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಹೈಡ್ರೋಜನ್ ಇಂಧನ ನೀತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮಿತಿಗೊಳಿಸಿ ಹಸಿರು ಇಂಧನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಮೋನಿಯಂ ಉತ್ಪಾದನೆಗೆ ಪರಿಶೀಲನೆ ನಡೆಯುತ್ತಿದ್ದು, ಇದು ಸಫಲವಾದರೆ ಭಾರತದ ಕರಾವಳಿ ಭಾಗದಲ್ಲಿ ಹಸಿರು ಇಂಧನವನ್ನುಬಳಸುವ ಚಿಂತನೆ ಕೇಂದ್ರಸರ್ಕಾರಕ್ಕಿದೆ ಎಂದರು.
2014 ರಿಂದ ಅಭಿವೃದ್ಧಿಯನ್ನೇ ಕೇಂದ್ರಬಿಂದುವಾಗಿಸಿದ ಪ್ರಧಾನಿ ಮೋದಿ :
31 ನೇ ಮೇ ಗೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ 8 ವರ್ಷ ಪೂರ್ಣವಾಗಿದೆ. 8 ವರ್ಷದಲ್ಲಿ ಮೋದಿಯವರು ಕೊಟ್ಟಿರುವ ಕಾರ್ಯಕ್ರಮಗಳಿಂದ ಕೋಟ್ಯಾಂತ ಜನರಿಗೆ ಆಗಿರುವ ಲಾಭ, ಕರ್ನಾಟಕಕ್ಕೆ ಆಗಿರುವ ಲಾಭದ ವರದಿಯನ್ನು ಜನ ಮುಂದಿಡುವ ಅವಕಾಶ. 75 ನೇ ಸ್ವಾತಂತ್ರ್ಯೋತ್ಸವದ ‘ಆಜಾದಿ ಕಾ ಅಮೃತ ಮಹೋತ್ಸವ’ ಸಂದರ್ಭ. ಇದು ಆತ್ಮಾವಲೋಕನ ಮತ್ತು ಸಿಂಹಾವಲೋಕನ ಮಾಡುವ ಕಾಲ. ಮುಂದಿನ 25 ವರ್ಷದಲ್ಲಿ ಭಾರತವನ್ನು ಬಲಿಷ್ಠವಾಗಿಸಿ ವಿಶ್ವಮಾನ್ಯ ರಾಷ್ಟ್ರವಾಗಿಸಲು ಸಂಕಲ್ಪ ಮಾಡುವ ಪ್ರಯತ್ನ. 2014ರಲ್ಲಿ ನರೇಂದ್ರಮೋದಿಯವರು ಪ್ರಧಾನಿಯಾದಾಗ ಅಭಿವೃದ್ಧಿಯನ್ನು ಕೇಂದ್ರಬಿಂದುವಾಗಿಸಿಕೊಂಡಿದ್ದು, ಅವರು ಅಧಿಕಾರಕ್ಕೆ ಬಂದಾಗ ದೇಶದ ಸ್ಥಿತಿ, ಇದ್ದ ಸವಾಲುಗಳು, ಅದನ್ನು ಎದುರಿಸಿದ ಬಗೆಗಳು, ಸದೃಢ ದೇಶ ಕಟ್ಟಲು ಸರ್ಮಥ ನಾಯಕತ್ವದ ಬಗ್ಗೆ ಚರ್ಚೆಯಾಗಬೇಕಿದೆ. ಸರ್ಕಾರದ ಕಾರ್ಯವರದಿಯನ್ನು ಜನರ ಮುಂದಿಡುವ ಪದ್ಧತಿಯನ್ನು ಮೋದಿಯವರು ಗುಜರಾತ್ಮುಖ್ಯಮಂತ್ರಿಯಾದಾಗಿನಿಂದ ಪ್ರಾರಂಭಿಸಿದ್ದು, ಈಗಲೂ ಈ ಪದ್ಧತಿಯನ್ನು ಮುಂದುವರೆಸಿದ್ದಾರೆ ಎಂದರು.
ಆತ್ಮನಿರ್ಭರ ಭಾರತ :
ಕೋವಿಡ್ ನ ಸವಾಲನ್ನು ಎದುರಿಸುವ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಸ್ವಾವಲಂಬನೆಯ ಸ್ವಾಭಿಮಾನಿ ದೇಶ ನಿರ್ಮಾಣದ ಧ್ಯೇಯವನ್ನು ಮೋದಿಯವರು ಹೊಂದಿದ್ದರು. ಕೃಷಿ ಸ್ವಾವಲಂಬನೆ, ಮೇಕ್ ಇನ್ ಇಂಡಿಯಾ, ಮುದ್ರಾಯೋಜನೆಯ ಮೂಲಕ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ, ಸ್ಟಾರ್ಟ್ ಅಪ್, ರಕ್ಷಣಾ ಕ್ಷೇತ್ರದ ಸ್ವಾವಲಂಬನೆ ಸಾಧಿಸಲಾಗುತ್ತಿದೆ. ಉತ್ಪಾದನೆ ಮತ್ತು ಆದಾಯದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ.
ದೇಶದ ಪ್ರತಿ ಮನೆಗೆ ನೀರು ತಲುಪಿಸಿ ಯಶೋಗಾಥೆ :
ದೇಶದ ಪ್ರತಿ ಮನೆಗೆ ನೀರು ತಲುಪಿಸುವ ಸಾಹಸವನ್ನು ಈ ಹಿಂದೆ ಯಾವುದೇ ಪ್ರಧಾನಮಂತ್ರಿಗಳು ಮಾಡಿರಲಿಲ್ಲ. ಮನೆಮನೆಗೆ ಗಂಗೆಯಂತಹ ಕಷ್ಟಸಾಧ್ಯವಾದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಈ ದಿಟ್ಟ ನಿರ್ಧಾರ ಹಾಗೂ ಸಾಹಸದ ಯಶೋಗಾಥೆ ಈಗ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಜಲಜೀವನಮಿಷನ್ ಯೋಜನೆಯಡಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಕಾರ್ಯ ಮಾಡಲಾಗಿದೆ. ಈ ಯಶಸ್ಸಿಗೆ ಪ್ರೇರಣೆ ಮೋದಿಯವರು. 2024 ರಲ್ಲಿ ದೇಶದ ಪ್ರತಿಯೊಂದು ಮನೆಗೂ ನೀರು ತಲುಪಿಸುವ ಈ ಸವಾಲಿನ ಯೋಜನೆಯನ್ನು ಕೇವಲ ಘೋಷಣೆಯಾಗಿರಿಸದೇ, ಅನುದಾನ ನೀಡಿ, ಯಶಸ್ವಿಗೊಳಿಸಲಾಗಿದೆ ಎಂದರು.
ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವುದಕ್ಕೆ ಅವರ ಕಾರ್ಯಕ್ರಮಗಳೇ ಸಾಕ್ಷಿ. ಜನರು ಸಮಸ್ಯೆಯ ಜೊತೆಗೆ ಜೀವಿಸುತ್ತಾರೆ. ಜನರಿಗೆ ವಿದ್ಯುಚ್ಛಕ್ತಿ ಯೋಜನೆ, ಹೆಣ್ಣುಮಕ್ಕಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಮುಖಾಂತರ ಅವರಿಗೆ ಆರೋಗ್ಯ ಕರುಣಿಸಿದಂತಾಗಿದೆ. ಸ್ವಚ್ಛಭಾರತ ಅಭಿಯಾನದ ಮೂಲಕ ಬಯಲುಶೌಚಾಲಯ ನಿವಾರಣೆ, ಹೆಣ್ಣುಮಕ್ಕಳ ಆರೋಗ್ಯ, ನೈರ್ಮಲ್ಯೀಕರಣಕ್ಕೆ ಒತ್ತು ನೀಡಿಲಾಯಿತು. ಹೆಣ್ಣುಮಕ್ಕಳಿಗಾಗಿ ಶೌಚಾಲಯ ನಿರ್ಮಿಸುವ ಮೂಲಕ ಹೆಣ್ಣುಮಕ್ಕಳಿಗೆ ಗೌರವ ತಂದುಕೊಡಲಾಯಿತು.
ರೈತರ ಆತ್ಮಗೌರವ ಹೆಚ್ಚಿಸಿದ ಪ್ರಧಾನಿ ಮೋದಿ:
ಆರ್ಥಿಕತೆಗೆ ಪೂರಕವಾಗಿ ಕೃಷಿ , ಉತ್ಪಾದನಾ ಹಾಗೂ ಸೇವಾ ವಲಯ ಅಭಿವೃದ್ಧಿಯಾಗಬೇಕು. ಕೃಷಿ ವಲಯದಲ್ಲಿ 1 % ಅಭಿವೃದ್ಧಿಯಾದರೆ, ಉತ್ಪಾದನಾ ವಲಯದಲ್ಲಿ 4 % ಹಾಗೂ ಸೇವಾ ವಲಯದಲ್ಲಿ 10% ಅಭಿವೃದ್ಧಿಯಾಗುತ್ತದೆ. ಕೃಷಿ ಆರ್ಥಿಕತೆ ಭದ್ರಬುನಾದಿ. ರೈತ ಕಲ್ಯಾಣ ಹಾಗೂ ಕೃಷಿ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಟಲ್ ಭೂಜಲ ಯೋಜನೆ, ಬೇವುಲೇಪಿತ ಯೂರಿಯಾ ಪೂರೈಕೆ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಕೃಷಿ ಸಮ್ಮಾನ ಯೋಜನೆಯಡಿ ಕೇಂದ್ರದ 6 ಸಾವಿರದ ಜೊತೆಗೆ ರಾಜ್ಯದ 4 ಸಾವಿರ ರೂ. ಸೇರಿಸಿ ಕೃಷಿಕರಿಗೆ ನೆರವು ನೀಡಲಾಗುತ್ತಿದೆ. ಕೃಷಿ ಚಟುವಟಿಕೆಗಳಲ್ಲಿ, ಬೀಜ ಖರೀದಿಯಲ್ಲಿ ಬಳಕೆಯಾಗುವ ಸರ್ಕಾರದ ಈ ನೆರವು ರೈತನ ಆತ್ಮಗೌರವನ್ನು ಉಳಿಸಿದೆ ಎಂದು ಓರ್ವ ರೈತನ ಅನಿಸಿಕೆಯನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.
ಭಾರತದ ಅತಿ ಹೆಚ್ಚು ಸ್ಟಾರ್ಟ್ ಅಪ್ ಹೊಂದಿರುವ ರಾಜ್ಯಕರ್ನಾಟಕ:
ಉತ್ಪಾದನಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ,ಮುದ್ರಾ ಯೋಜನೆಯ ಮೂಲಕ ಪ್ರತಿ ಜಿಲ್ಲೆಯಲ್ಲಿ 60 ಸಾವಿರದಿಂದ 1 ಲಕ್ಷ ಜನರಿಗೆ ಇದರ ಲಾಭ ದೊರೆತಿದೆ. ವಿಶ್ವದ ಅತಿಹೆಚ್ಚು ಸ್ಟಾರ್ಟ್ ಅಪ್ ಗಳು ಭಾರತದಲ್ಲಿದ್ದು, ಭಾರತದ ಅತಿ ಹೆಚ್ಚು ಸ್ಟಾರ್ಟ್ ಅಪ್ ಗಳು ರಾಜ್ಯದಲ್ಲಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಫಾರ್ಮಾ, ಐಟಿಬಿಟಿ ಗಳಲ್ಲಿ ಸ್ಟಾರ್ಟ್ ಅಪ್ ಗಳು ಬಂದಿವೆ. ಅತಿ ಹೆಚ್ಚು ಯೂನಿಕಾರ್ನ್ ಗಳು ಕರ್ನಾಟಕದಲ್ಲಿವೆ. ಡೆಕಾಕಾರ್ನ್ ಗಳೂ ಕರ್ನಾಟಕದಲ್ಲಿವೆ. ಹೊಸ ಭಾರತದ ಚಿಂತನೆಯನ್ನು ಮೋದಿಯವರು ಹೊಂದಿದ್ದಾರೆ ಎಂದರು.
ಶಿಕ್ಷಣ ಕ್ರಾಂತಿ ತಂದ ರಾಷ್ಟ್ರೀಯ ಶಿಕ್ಷಣ ನೀತಿ:
ದುಡಿಯುವ ವರ್ಗದ ಸಬಲೀಕರಣಕ್ಕಾಗಿ, ರಸ್ತೆಬದಿ ವ್ಯಾಪಾರಿಗಳಿಗೆ ಸ್ವನಿಧಿ ಮೂಲಕ 50 ಸಾವಿರ ಆರ್ಥಿಕ ನೆರವು ಹಾಗೂ ಬಡಮಕ್ಕಳಿಗೆ ವಿದ್ಯಾನಿಧಿ ಯೋಜನೆಗಳ ಆರ್ಥಿಕ ನೆರವು ನೇರವಾಗಿ ಡಿಬಿಟಿ ಮೂಲಕ ಫಲಾನುಭವಿಗಳಿಗೆ ತಲುಪಿತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣವನ್ನು ತಳಹದಿಯಲ್ಲಿಯೇ ಅರ್ಥಪೂರ್ಣವಾಗಿಸುವ ಪ್ರಯತ್ನವಾಗಿದೆ. ಇದಕ್ಕೆ ಮೂಲಭೂತ ಸೌಕರ್ಯ, ಶಿಕ್ಷಕರ ತರಬೇತಿ. ಶಿಕ್ಷಣದ ಮುಖಾಂತರ ಹೊಸ ಶಿಕ್ಷಣ ಕ್ರಾಂತಿ ಕೈಗೊಳ್ಳಲಾಗಿದೆ ಎಂದರು.
ಅಮೃತ ಕಾಲದ ಅಭಿವೃದ್ದಿಗೆ ಹೊಸ ವೇಗ :
ಮುಂದಿನ ಜನಾಂಗದ ಏಳಿಗೆಯನ್ನು ಗುರಿಯಾಗಿಸಿಕೊಂಡಿರುವ ಮೋದಿಯವರು ಮುತ್ಸದ್ದಿ ನಾಯಕ. 2024ರಲ್ಲಿಯೂ ನರೇಂದ್ರ ಮೋದಿಯವರಿಗೆ ಸಂಪೂರ್ಣ ಜನಮನ್ನಣೆ ದೊರೆಯಲಿದೆ. ಮುಂದಿನ 25 ವರ್ಷಗಳ ಅಮೃತ ಕಾಲದ ಅಭಿವೃದ್ದಿಗೆ ಹೊಸ ವೇಗ , ಹೊಸ ಶಕ್ತಿ ಬರಲಿದೆ. ನರೇಂದ್ರ ಮೋದಿಯವರ ವಿಷನ್ ನಂತೆ ಕರ್ನಾಟಕ ಸರ್ಕಾರವೂ ಕೆಲಸ ಮಾಡುತ್ತಿದೆ. ನವಕರ್ನಾಟಕದಿಂದ ನವಭಾರತದ ನಿರ್ಮಾಣದ ಚಿಂತನೆಯನ್ನು ಕರ್ನಾಟಕ ಹೊಂದಿದ್ದು, ಮೋದಿಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post