ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯದ ಪಶ್ಚಿಮಘಟ್ಟ ಹಾಗೂ ಅದರ ತಪ್ಪಲಿನ ಕರಾವಳಿ ಭಾಗವು ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವಿಭಿನ್ನವಾದ ಪ್ರದೇಶವಾಗಿದೆ. ಇಲ್ಲಿನ ಸಮಗ್ರ ಅಭಿವೃದ್ಧಿಯು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಅವುಗಳ ಸಹನಶೀಲ ಬಳಕೆಯ ನೀತಿಯನ್ನು ಅಳವಡಿಸಿಕೊಳ್ಳುವುದರ ಮೇಲೆ ಅವಲಂಬಿಸಿದೆ. ಆದ್ದರಿಂದ ಈ ಪ್ರದೇಶದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ದೃಷ್ಠಿಯಿಂದ ಸೂಕ್ತ ನೀತಿ ಜಾರಿಗೆ ಬರುವುದು ಅವಶ್ಯವಿದೆ.
ಈ ಹಿನ್ನೆಲೆಯಲ್ಲಿ ಇದೇ ಸೆ.2ರಂದು ಸಾಗರದ ವರದಶ್ರೀ ಮಲೆನಾಡು ಸಭಾಂಗಣದಲ್ಲಿ ವೃಕ್ಷಲಕ್ಷ ಆಂದೋಲನ ಕರ್ನಾಟಕ ರಾಜ್ಯಮಟ್ಟದ ಕಾರ್ಯಾಗಾರ ಏರ್ಪಡಿಸಿದೆ ಎಂದು ಸಂಚಾಲಕ ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ ಮಾಹಿತಿ ನೀಡಿದ್ದಾರೆ.
ಮಲೆನಾಡು ಸುಸ್ಥಿರ ಅಭಿವೃದ್ಧಿ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಅರಣ್ಯ, ಜಲಸಂವರ್ಧನೆ ಹಾಗೂ ಇಂಧನ ಅಭಿವೃದ್ಧಿ ಕುರಿತ ವಿಶೇಷ ಕಾರ್ಯ ಯೋಜನೆ ನಡೆಯಲಿದೆ. ಮಲೆನಾಡು ಸುಸ್ಥಿರ ಅಭಿವೃದ್ಧಿ ಕುರಿತ ವಿಶೇಷ ಕಾರ್ಯ ಯೋಜನೆ ತಯಾರಿಸಿ ಸರ್ಕಾರದ ಮುಂದೆ ಮಂಡಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ.
Also read: ವೈಜ್ಞಾನಿಕ ಹಿನ್ನೆಲೆಯುಳ್ಳ ಸಂಸ್ಕೃತ ಭಾಷೆಯ ಅರಿವು ಅಗತ್ಯ: ಪ್ರೊ. ವಿಶ್ವನಾಥಯ್ಯ ಅಭಿಪ್ರಾಯ
ವೃಕ್ಷಲಕ್ಷ ಆಂದೋಲನದ ಜೊತೆ ಹಲವು ಸಂಸ್ಥೆಗಳು ಕಾರ್ಯಾಗಾರ ಸಂಘಟನೆಗೆ ಸಾಥ್ ನೀಡಿದ್ದಾರೆ. ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ಸಾಗರ, ಸಾಗರ ಪ್ರಾಂತ ಅಡಿಕೆ ಬೆಳೆಗಾರರ ಸಂಘ, ಸಹ್ಯಾದ್ರಿ ಕಾಫೀ ಸೊಸೈಟಿ, ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ, ಅಮೃತ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಸಾಗರ, ಗ್ರಾಮ ಅರಣ್ಯ ಸಮೀತಿ ಹಕ್ರೆ, ಮಲೆನಾಡು ದೇಶಿ ಗೋ ಸಂವರ್ಧನಾ ಸಂಘ, ಪರ್ಯಾವರಣ ಸಂರಕ್ಷಣಾ ಇವರೆಲ್ಲರ ಸಹಭಾಗಿತ್ವವಿದೆ.
ಕಾರ್ಯಾಗಾರದ ವಿವರ : ಕಾರ್ಯಾಗಾರಕ್ಕೆ ಜನಪ್ರತಿನಿಧಿಗಳು, ಕೃಷಿ ವಿಶ್ವವಿದ್ಯಾಲಯ, ವಿಜ್ಞಾನಿಗಳು, ಸಹಕಾರೀ ಧುರೀಣರು, ಸಾವಯವ, ಜೀವವೈವಿಧ್ಯ ತಜ್ಞರನ್ನು ಆಹ್ವಾನಿಸಲಾಗಿದೆ. ಮಾದರಿ ಸುಸ್ಥಿರ ಅಭಿವೃದ್ಧಿ ಪ್ರಸ್ತಾವನೆ (ಕರಡು) ಮಂಡನೆ, ಸಮಾಲೋಚನೆ ನಡೆಯಲಿದೆ. ಹಸಿರು ಹೆಜ್ಜೆ ವಾರ್ತಾಪತ್ರ ಬಿಡುಗಡೆ, ವೃಕ್ಷಮಿತ್ರ ಪುಸ್ತಕ ಪರಿಚಯ, ಕೊಲ್ಲಿಬಚ್ಚಲು ಕಣಿವೆ ಜೀವವೈವಿಧ್ಯ ವರದಿ ಬಿಡುಗಡೆ ಆಗಲಿದೆ. ರಾಜ್ಯ ಪ್ರಶಸ್ತಿ ಪಡೆದ ಸಾಗರ ತಾ| ಜೀವವೈವಿಧ್ಯ ಸಮಿತಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲಕೃಷ್ಣ ಬೇಳೂರು ಮಾನ್ಯ ಸಾಗರ ಶಾಸಕರು, ಸಾಗರ ಹಾಗೂ ಅಧ್ಯಕ್ಷರು ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ, ಡಾ| ಜಗದೀಶ ಮಾನ್ಯ ಉಪ ಕುಲಪತಿಗಳು, ಶಿವಪ್ಪನಾಯಕ ಕೃಷಿ, ತೋಟಗಾರಿಕೆ ಅರಣ್ಯ ವಿಶ್ವವಿದ್ಯಾಲಯ ಇರುವಕ್ಕಿ, ಶ್ರೀ ಬಿ. ಎ. ಇಂಧೂದರ ಅಧ್ಯಕ್ಷರು ಆಪ್ಸಕೋಸ್ ಸಾಗರ, ಶ್ರೀ ಸೂರ್ಯನಾರಾಯಣ ಖಂಡಿಕಾ ಹಿರಿಯ ಸಹಕಾರಿ ಧುರೀಣರು, ಡಾ| ಕೇಶವ ಹೆಚ್. ಕೊರ್ಸೆ ಸುಸ್ಥಿರ ಅಭಿವೃದ್ಧಿ ತಜ್ಞರು ಆಗಮಿಸಲಿದ್ದಾರೆ. ಶ್ರೀ ಅನಂತ ಹೆಗಡೆ ಅಶೀಸರ ಅಧ್ಯಕ್ಷರು ವೃಕ್ಷಲಕ್ಷ ಆಂದೋಲನ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ| ರೂಪಾ ಸಸ್ಯ ಶಾಸ್ತ್ರಜ್ಞರು, ಶ್ರೀ ವಿಶ್ವೇಶ್ವರ ಭಟ್ ಕೋಟೆಮನೆ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಸಲಹೆಗಾರರು ಶ್ರೀ ರಘುನಂದನ ಭಟ್ ಅ.ಭಾ. ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಇವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಸಾವಯವ, ರೈತರ ಒಕ್ಕೂಟ, ಪರಿಸರ ಸಂಸ್ಥೆಗಳ ಪ್ರಮುಖರು ಸಂವಾದದಲ್ಲಿ ಭಾಗವಹಿಸುತ್ತಾರೆ. ಕಾರ್ಯಾಗಾರ ಬೆಳಿಗ್ಗೆ 10:30ಕ್ಕೆ ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ 9844277772 ಸಂಪರ್ಕಿಸಬಹುದು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















