ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತದಲ್ಲಿ, ನಾವು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹವಾಮಾನ ಸಂಬಂಧಿತ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಸರ್ವರಿಗೂ ಸುಸ್ಥಿರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಶಕ್ತಿಶಾಲಿ ಹೂಡಿಕೆಯಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಸಂಶೋಧನಾ ವಿಭಾಗದ ಅಧ್ಯಕ್ಷ ಹಾಗು ಮತ್ತು ಕರ್ನಾಟಕ ಯೋಜನಾ ಆಯೋಗದ ಮಾಜಿ ಅಧ್ಯಕ್ಷ ಡಾ. ರಾಜೀವ್ ಗೌಡ ಅಭಿಪ್ರಾಯಪಟ್ಟರು.
ಅವರು ಇಂದು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ನಡೆದ ಭಾರತದ ಹವಾಮಾನ ಶಿಕ್ಷಣ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ವೀಡಿಯೊ ಮೂಲಕ ತಮ್ಮ ಸಂದೇಶವನ್ನು ರವಾನಿಸಿದರು.
ಹವಾಮಾನ ಶಿಕ್ಷಕರ ಜಾಲ (CEN), ಸ್ಕೂಲ್ ಆಫ್ ಪಾಲಿಸಿ ಆಂಡ್ ಗವರ್ನೆನ್ಸ್, ಟಿಆರ್ಒಪಿ ಐಸಿಎಸ್ಯು/TROP ICSU (ಹವಾಮಾನ ಬದಲಾವಣೆಯ ಬಗ್ಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ಪ್ರಾಜೆಕ್ಟ್)ಮತ್ತು ಸಾಮಾಜಿಕ ಪರಿಣಾಮ ಸಲಹೆಗಾರ ಸಂಸ್ಥೆ ಅಸರ್ ವತಿಯಿಂದ ಆಯೋಜಿಸಲಾದ ಈ ಎರಡು ದಿನಗಳ ಕಾರ್ಯಕ್ರಮವು ಶಿಕ್ಷಣದ ಮೂಲಕ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಅಳವಡಿಸಿಕೊಳ್ಳಬಹುದಾದ ಒಳನೋಟಗಳು ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ನೀಡಬಹುದಾದ ಶಿಫಾರಸ್ಸುಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ.
ಹವಾಮಾನ ಬದಲಾವಣೆ ಕುರಿತ ಪಠ್ಯವನ್ನು ಮುಖ್ಯವಾಹಿನಿಯ ಶಾಲಾಶಿಕ್ಷಣದೊಂದಿಗೆ ಸಂಯೋಜಿಸುವತ್ತ ಕೇಂದ್ರೀಕರಿಸಿದ ಎರಡು ದಿನಗಳ ಈ ಶೃಂಗಸಭೆಯು ದೇಶಾದ್ಯಂತ 100 ಕ್ಕೂ ಹೆಚ್ಚು ಪ್ರಮುಖ ಶಿಕ್ಷಣತಜ್ಞರು, ನೀತಿ ನಿರೂಪಕರು, ಯುವ ನಾಯಕರು ಮತ್ತು ಆಸಕ್ತರನ್ನು ಒಳಗೊಂಡಿತ್ತು.
“ಹವಾಮಾನ ಶಿಕ್ಷಣವನ್ನು ಪಠ್ಯದಲ್ಲಿ ಸಂಯೋಜಿಸಲು ಇರುವ ಮಾರ್ಗವೆಂದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಿದಂತೆ ವಿವಿಧ ಅಧ್ಯಯನ ಕ್ಷೇತ್ರಗಳನ್ನು ಒಳಗೊಳ್ಳುವ ಅಂತರಶಿಸ್ತೀಯ ಪಠ್ಯಕ್ರಮವನ್ನು ರಚಿಸುವುದು. ಉದಾಹರಣೆಗೆ, ಹವಾಮಾನ ಬದಲಾವಣೆಯು ವಿವಿಧ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಅದು ವಿಶ್ವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರದರ್ಶಿಸುವುದು ಮತ್ತು ಇದರಿಂದ ನೈತಿಕ ಮೌಲ್ಯಗಳ ಮೇಲಾಗುವ ಪರಿಣಾಮಗಳ ಕುರಿತ ಚರ್ಚೆಗಳು ಇವುಗಳನ್ನು ಈ ಪಠ್ಯಕ್ರಮದ ಚೌಕಟ್ಟಿನಲ್ಲಿ ಸೇರಿಸಿಕೊಳ್ಳಬಹುದು. ಈ ವಿಧಾನವು ವಿದ್ಯಾರ್ಥಿಗಳು ತಮ್ಮ ತರಗತಿಯ ಕಲಿಕೆಯನ್ನು ಪ್ರಪಂಚದ ನೈಜ ಸಮಸ್ಯೆಗಳೊಂದಿಗೆ ಹೋಲಿಸಿ ಅಭ್ಯಸಿಸಲು ಸಹಾಯ ಮಾಡುತ್ತದೆ, ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸುತ್ತದೆ, ”ಎಂದು ರಾಜೀವ್ ಗೌಡ ಹೇಳಿದರು.
ಈ ಶೃಂಗ ಸಭೆಯಲ್ಲಿ ತಮಿಳುನಾಡು ಗ್ರೀನ್ ಮಿಷನ್ನ ನಿರ್ದೇಶಕಿ ಮಾಧವಿ ಯಾದವ್, ಐಎಫ್ಎಸ್; ಎನ್ಸಿಇಆರ್ಟಿಯ ವಿಜ್ಞಾನ ಮತ್ತು ಗಣಿತ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚೊಂಗ್ ಶಿಮ್ರೇ; ಶಿಕ್ಷಣತಜ್ಞ, ಲೇಖಕ ಮತ್ತು ಹವಾಮಾನ ಬದಲಾವಣೆ ಚಿಂತನೆಯ ನೇತಾರ ಮ್ಯಾಥ್ಯೂ ಪೈ; ಅಸರ್ ಸಾಮಾಜಿಕ ಪರಿಣಾಮ ಸಲಹೆಗಾರ ಸಂಸ್ಥೆಯಸಂವಹನ ಮುಖ್ಯಸ್ಥ ಬ್ರಿಕೇಶ್ ಸಿಂಗ್; ಮತ್ತು ಹಿರಿಯ ಪರಿಸರ ಪತ್ರಕರ್ತೆ ಜಯಶ್ರೀ ನಂದಿ ಮುಂತಾದ ತಜ್ಷರು ಭಾಗವಹಿಸಿದ್ದರು.
“ನಾಳೆಗಾಗಿ ಕಲಿಕೆ: ಹವಾಮಾನ ಕುರಿತ ಯೋಜನೆಗಳನ್ನು ಕಾರ್ಯರೂಪಕ್ಕೆ ಪರಿವರ್ತಿಸುವಲ್ಲಿ ಶಿಕ್ಷಣದ ಪಾತ್ರ ” ಎಂಬ ವರದಿಯನ್ನು ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ವರದಿಯು ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC) ಮತ್ತು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ದೆಹಲಿಯ ಹವಾಮಾನ ಬದಲಾವಣೆಗಾಗಿ ರಾಜ್ಯ ಕ್ರಿಯಾ ಯೋಜನೆಗಳು (SAPCCs), ಹವಾಮಾನ ಶಿಕ್ಷಣವನ್ನು ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಲು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ವಿಶ್ಲೇಷಿಸುತ್ತದೆ.
ಈ ವರದಿಯು, ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC)ಯು ಹವಾಮಾನ ಬದಲಾವಣೆ ಕುರಿತಾಗಿ ಸಾರ್ವಜನಿಕ ಜಾಗೃತಿ ಮತ್ತು ಸಾರ್ವಜನಿಕರ ಸಾಮರ್ಥ್ಯ ವೃದ್ಧಿಯನ್ನು ಉಲ್ಲೇಖಿಸುತ್ತದೆಯಾದರೂ, ಹವಾಮಾನ ಶಿಕ್ಷಣವನ್ನು ನೀಡಲು ಅಗತ್ಯವಿರುವ ಸಮಗ್ರ ಕಾರ್ಯತಂತ್ರವನ್ನು ರೂಪಿಸುವಲ್ಲಿ ರಾಷ್ಟ್ರೀಯ ಕ್ರಿಯಾ ಯೋಜನೆ ವಿಫಲಗೊಂಡಿದೆ ಎಂಬ ಅಂಶವನ್ನು ಉಲ್ಲೇಖಿಸುತ್ತದೆ. ಜೊತೆಗೆ ರಾಷ್ಟ್ರೀಯ ಕ್ರಿಯಾ ಯೋಜನೆಯು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಶಾಲೆಗಳ ಪಾತ್ರ, ಶಿಕ್ಷಕರ ತರಬೇತಿ ಮತ್ತು ಹವಾಮಾನ ಶಿಕ್ಷಣದ ಏಕೀಕರಣವನ್ನು ಹವಾಮಾನ ಶಿಕ್ಷಣದ ತಂತ್ರಗಳ ಪ್ರಮುಖ ಅಂಶವಾಗಿ ಪರಿಗಣಿಸುವುದನ್ನು ಕಡೆಗಣಿಸಿದೆ ಎಂಬುದನ್ನು ವರದಿಯಲ್ಲಿ ಗಮನಿಸಲಾಗಿದೆ. ಅದೇ ರೀತಿ, ರಾಜ್ಯಕ್ರಿಯಾ ಯೋಜನೆಗಳು, ಜಾಗೃತಿಯ ಮಹತ್ವವನ್ನು ಒಪ್ಪಿಕೊಳ್ಳುವಾಗ, ಮರ ನೆಡುವಂತಹ ಪಠ್ಯೇತರ ಚಟುವಟಿಕೆಗಳಿಗೆ ತಮ್ಮ ವಿಧಾನವನ್ನು ಸೀಮಿತಗೊಳಿಸಿವೆ ಎಂಬುದನ್ನು ವರದಿಯು ಉಲ್ಲೇಖಿಸುತ್ತದೆ.
ವರದಿಯು ಹವಾಮಾನ ಶಿಕ್ಷಣವನ್ನು ಬಲಪಡಿಸಲು ಹವಾಮಾನ ಶಿಕ್ಷಣಕ್ಕಾಗಿ ರಾಷ್ಟ್ರೀಯ ಚೌಕಟ್ಟು, ಬಜೆಟ್ ಹಂಚಿಕೆ, ಇತರೆ ಪಠ್ಯೇತರ ಚಟುವಟಿಕೆಗಳ ಅಳವಡಿಕೆ, ಶಿಕ್ಷಕರ ತರಬೇತಿ, ಉನ್ನತ ಶಿಕ್ಷಣದ ಏಕೀಕರಣ ಇವೇ ಮೊದಲಾದ ಇತರ ಕ್ರಮಗಳನ್ನು ಶಿಫಾರಸ್ಸು ಮಾಡುತ್ತದೆ.
“ಹವಾಮಾನ ಶಿಕ್ಷಕರ ಜಾಲ (CEN)ವನ್ನು ಹವಾಮಾನ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ರಚಿಸಲಾಗಿದೆ. ಶಿಕ್ಷಣ ಎಂದರೆ ಕೇವಲ ಜ್ಞಾನಗಳಿಕೆ ಅಲ್ಲ – ಇದು ಸಮುದಾಯಗಳನ್ನು ನಿರ್ಮಿಸುವುದು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಈ ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸಲು ನಮಗೆ ಅಗತ್ಯವಿರುವ ಸಾಮರ್ಥ್ಯಗಳನ್ನು ಬೆಳೆಸುವುದು ಎಂಬ ಕಲ್ಪನೆಯ ಮೇಲೆ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಶೃಂಗಸಭೆಯು ಪ್ರಮುಖ ಚರ್ಚೆಗಳಿಗೆ ಮತ್ತು ಸಮುದಾಯಗಳು ಪರಿವರ್ತನೆಯ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಲು ವೇದಿಕೆಯನ್ನು ಒದಗಿಸುವ ನಮ್ಮ ಪ್ರಯತ್ನವಾಗಿದೆ, ”ಎಂದು ಹವಾಮಾನ ಶಿಕ್ಷಣ ಜಾಲದ ಸಹ-ಸಂಸ್ಥಾಪಕಿ ಸುನಯನ ಗಂಗೂಲಿ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post