ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗುವ ಮೂಲಸೌಕರ್ಯಗಳು ಜನಸಾಮಾನ್ಯರಿಗೇ ಕಿರುಕುಳ ನೀಡುವಂತಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆಯಲ್ಲಿನ ಇಂತಹ ಬೇಜವಾಬ್ದಾರಿತನಕ್ಕೆ ತಕ್ಷಣವೇ ಬ್ರೇಕ್ ಬೀಳಬೇಕು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರಮುಖ ಕೇಂದ್ರವಾಗಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ, ಸ್ವಚ್ಛತೆಯ ವೈಫಲ್ಯ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ತೀವ್ರ ತೊಂದರೆಗಳ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ, ಇಂದು ಶಾಸಕರು ಮಹಾನಗರ ಪಾಲಿಕೆಯ ಉನ್ನತಾಧಿಕಾರಿಗಳು ಹಾಗೂ ರಕ್ಷಣಾ ಇಲಾಖೆಯ (ಪೊಲೀಸ್) ಅಧಿಕಾರಿಗಳೊಂದಿಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯ ಸಾರ್ವಜನಿಕರನ್ನು ನೇರವಾಗಿ ಭೇಟಿಯಾಗಿ ಅಹವಾಲು ಆಲಿಸಿದ ಶಾಸಕರು, ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಹತ್ತಾರು ಜ್ವಲಂತ ಲೋಪಗಳ ಕುರಿತು ಸ್ಥಳದಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾದಚಾರಿ ಮಾರ್ಗಗಳ ಅನಧಿಕೃತ ಅತಿಕ್ರಮಣ, ವಿಶ್ರಾಂತಿ ಗೃಹಗಳ ಕಳಪೆ ನಿರ್ವಹಣೆ, ಗಲೀಜಾದ ಆಸನಗಳು, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದೆ ಬೀಗ ಹಾಕಲಾಗಿರುವ ಶೌಚಾಲಯಗಳು ಹಾಗೂ ಶುದ್ಧ ಕುಡಿಯುವ ನೀರಿನ ಸರಬರಾಜಿನಲ್ಲಿ ಕಂಡುಬಂದಿರುವ ವ್ಯತ್ಯಯಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ ಅವರು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿ, ಸ್ಥಳದಲ್ಲೇ ಕಠಿಣ ಗಡುವು ವಿಧಿಸಿದರು.
Also read: ದೇಹ – ಮನಸ್ಸನ್ನು ಸದೃಢಗೊಳಿಸಲು ಯೋಗ ಸಹಕಾರಿ | ಸಂಸದ ರಾಘವೇಂದ್ರ ಅಭಿಮತ
ಶಾಸಕರ ಪ್ರಮುಖ ನಿರ್ದೇಶನಗಳು ಹಾಗೂ ಗಡುವು : ಮೂಲಸೌಕರ್ಯ ವೃದ್ಧಿ: ನಿಲ್ದಾಣದ ಎಲ್ಲಾ ಶೌಚಾಲಯಗಳನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕು ಹಾಗೂ ನಿರ್ವಹಣಾ ಸಿಬ್ಬಂದಿಗಳಿಗೆ ಪ್ರತ್ಯೇಕ ಕೌಂಟರ್ ನಿರ್ಮಿಸಬೇಕು. ನಾಗರಿಕ ಸೌಲಭ್ಯ: ಕುಡಿಯುವ ನೀರಿನ ಫಿಲ್ಟರ್ಗಳನ್ನು ತಕ್ಷಣ ಪುನಶ್ಚೇತನಗೊಳಿಸಬೇಕು ಮತ್ತು ಅಲ್ಲಿನ `ಕರ್ನಾಟಕ ಒನ್’ ಕೇಂದ್ರಕ್ಕೆ ಅಗತ್ಯವಿರುವ ಸುಸಜ್ಜಿತ ಪೀಠೋಪಕರಣಗಳನ್ನು ಪೂರೈಸಬೇಕು. ಸುರಕ್ಷತೆ ಮತ್ತು ಸಿಸಿಟಿವಿ: ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣದ ಆವರಣದಲ್ಲಿ ತಕ್ಷಣವೇ ಸುಧಾರಿತ ಸಿಸಿಟಿವಿ, ಕ್ಯಾಮೆರಾಗಳನ್ನು ಅಳವಡಿಸಬೇಕು. ಯಾವುದೇ ಕಾರಣಕ್ಕೂ ದ್ವಿಚಕ್ರವಾಹನಗಳು ಮತ್ತು ಇತರ ವಾಹನಗಳು ಖಾಸಗಿ ನಿಲ್ದಾಣದ ಒಳಗೆ ಪ್ರವೇಶಿಸಬಾರದು. ತಿಂಡಿಗಾಡಿಗಳಿಗೆ ಪಕ್ಕದಲ್ಲೇ ಸ್ಥಳ ಗುರುತಿಸಲಾಗಿದ್ದು, ನಿಗಧಿತ ಕಾಂಪ್ಲೆಕ್ಸ್ನಲ್ಲೇ ಅವರನ್ನು ಸ್ಥಳಾಂತರಿಸಬೇಕು. ಮತ್ತು ತಾತ್ಕಾಲಿಕವಾಗಿ ನೀಡಿದ ಹೂವಿನ ಮಳಿಗೆಗಳನ್ನು ಕೂಡ ಸ್ಥಳಾಂತರಿಸಿ ಅಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಒಂದು ವಾರದೊಳಗೆ ಶೌಚಾಲಯದೊಳಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ಮಳೆಗಾಲದ ಮುನ್ನೆಚ್ಚರಿಕೆ : ಮುಂಬರುವ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿಗಳ ಸಮರ್ಪಕ ಹೂಳೆತ್ತುವಿಕೆ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಈ ಕೂಡಲೇ ಕೈಗೊಳ್ಳಬೇಕು. ಟೆಂಡರ್ ಪ್ರಕ್ರಿಯೆ ತ್ವರಿತಗೊಳಿಸುವುದು: ನೂತನವಾಗಿ ನಿರ್ಮಾಣವಾಗಿರುವ ಸಾರ್ವಜನಿಕ ಶೌಚಾಲಯಗಳ ಟೆಂಡರ್ ಪ್ರಕ್ರಿಯೆಯನ್ನು ಪ್ರಸಕ್ತ ತಿಂಗಳೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಿ, ಜನ ಸೇವೆಗೆ ಮುಕ್ತಗೊಳಿಸಬೇಕು. ಮಹಿಳಾ ಸುರಕ್ಷತೆ: ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಪೆÇಲೀಸ್ ಸಿಬ್ಬಂದಿ ಹಾಗೂ ಗಸ್ತು ವಾಹನಗಳನ್ನು ನಿಯೋಜಿಸಬೇಕು. ಮುಂದಿನ ಬಾರಿ ನಾನು ನಿಲ್ದಾಣಕ್ಕೆ ಮರು ಭೇಟಿ ನೀಡುವ ವೇಳೆಗೆ ಈ ಎಲ್ಲಾ ನಿಗದಿತ ಅಭಿವೃದ್ಧಿ ಕೆಲಸಗಳು ಕಡ್ಡಾಯವಾಗಿ ಪೂರ್ಣಗೊಂಡಿರಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಅಧಿಕಾರಿಗಳಿಗೆ ಶಾಸಕರು ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.
ಈ ಪರಿಶೀಲನಾ ಭೇಟಿಯ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ನಗರ ಉಪಾಧ್ಯಕ್ಷ ಪ್ರಭಾಕರ್ ಪಿ., ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ್, ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವಸಂತ್ಕುಮಾರ್, ಸೀತಾರಾಮ್, ಸೇರಿದಂತೆ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ರಕ್ಷಣಾ ಇಲಾಖೆಯ ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ಸತ್ಯನಾರಾಯಣ್, ಸಂಚಾರಿ ಠಾಣಾ ಇನ್ಸ್ಪೆಕ್ಟರ್ ದೇವರಾಜ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















