ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಸಂತ ಋತುವಿನ ಈ ಹೊತ್ತಿನಲ್ಲಿ ವಸಂತೋತ್ಸವದ ರಂಗೇರುವಂತೆ ಮಾಡಿದ್ದು ಕುವೆಂಪುರಂಗಮಂದಿರದಲ್ಲಿ ಪ್ರದರ್ಶಿತಗೊಂಡ ವಸಂತ ಸೇನೆ ಎಂಬ ನಾಟಕ. ಹೊರಗೆ ಮಿಂಚು, ಗುಡುಗು ಸಹಿತವಾಗಿ ಧೋ ಎಂದು ಮಳೆ ಸುರಿದು ಇಳೆ ತಂಪಾದರೆ ರಂಗಮಂದಿರದ ಒಳಗೆ ಮನಸ್ಸು ತಂಪಾಗುವಂತೆ ಮಾಡಿದ್ದು ಈ ನಾಟಕ.
ಸಂಸ್ಕೃತದಲ್ಲಿ ನಾವು ಓದಿದ ನಾಟಕ ಅದು 10 ಅಂಕಗಳದ್ದಾದರೂ ಅದನ್ನು ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಅನುವಾದ ಆಧರಿಸಿ ರಂಗ ರೂಪಕ್ಕೆ ಇಳಿಸುವುದೆಂದರೆ ಅದು ಸಾಹಸದ ಕೆಲಸ. ಆ ಸಾಹಸ ಮಾಡಿರುವುದು ನಾಟಕದ ನಿರ್ದೇಶಕರಾದ ಶ್ರೀ ವೈದ್ಯ ಅವರು.
“ನಾಟ್ಯಂ ಭಿನ್ನ ರುಚೇರ್ ಜನಸ್ಯ ಬಹುದಾಪ್ಯೇಕಮ್” ಸಮಾರಾಧನಮ್ ಎನ್ನುವ ಮಾತನ್ನು ನೆನಪಿಸಿದ್ದು ಈ ವಸಂತಸೇನೆ. ಹಾಗೆಯೇ ‘ಕಾವ್ಯೇಷು ನಾಟಕಂ ರಮ್ಯಮ್ ಎಂದು ಹೇಳಿರುವುದು ಸಹ ಇಂಥವುಗಳಿಂದಲೇ ಎನ್ನುವುದು ಮತ್ತೆ ಪ್ರಮಾಣಿತವಾಯಿತು. ನಾಟಕದ ಆರಂಭದಲ್ಲಿಯೇ ಸೂತ್ರದಾರ ಹಾಗೂ ನಟಿಯರು ಬಂದು ಇಡೀ ನಾಟಕದ ಪಾತ್ರಗಳ ಪರಿಚಯ ಮಾಡುವ ರೀತಿಯೇ ಸಂಪೂರ್ಣ ನಾಟಕವನ್ನು ಸೆಳೆಯುವಂತಾಯ್ತು. ಹಾಗೆ ನಾಟಕದ ಆ್ಯಂಥಮ್ ಆದಂತಹ ಗಜವದನ ಹೇರಂಬ… ಪ್ರಸ್ತುತಿಯಂತೂ ಬಹು ಸೊಗಸಾದ ಆರಂಭವನ್ನು ನಾಟಕಕ್ಕೆ ನೀಡಿತು.
ಪ್ರಸ್ತುತ ಈ ನಾಟಕ ಶೂದ್ರಕನು ಸಂಸ್ಕೃತ ನಾಟಕಗಳ ಸಾಂಪ್ರದಾಯಿಕ ಕಥೆಗಳಿಂದ ಹೊರಬಂದು ವಾಸ್ತವಿಕ ಸಾಮಾಜಿಕ ನಾಟಕವನ್ನು ರಚಿಸಿದನೆಂದು ಸಾಬೀತುಪಡಿಸುತ್ತದೆ. ಸಾಮಾನ್ಯ ಜನರ ಜೀವನ ಮತ್ತು ಸಮಾಜದ ವಾಸ್ತವತೆ ಚಿತ್ರಿಸುವಲ್ಲಿ ಅವನ ಕೈಚಳಕ ಅಪ್ರತಿಮವಾಗಿದೆ. ಸಮಕಾಲೀನ ಸಮಾಜದ ಆರ್ಥಿಕ ಸ್ಥಿತಿಯನ್ನು ಇದರಲ್ಲಿ ಪ್ರಾಮಾಣಿಕವಾಗಿ ಚಿತ್ರಿಸಲಾಗಿದೆ. ಆ ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ವರ್ಗ ವಿಭಜನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಧಿಕಾರದಲ್ಲಿರುವ ಪುರುಷರು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಕ್ರೂರ ರಾಜನ ವಿರುದ್ಧದ ದಂಗೆ ಮತ್ತು ಅಂತಿಮವಾಗಿ ಆರ್ಯಕನನ್ನು ಸಾಮಾನ್ಯ ಜನರ ಪ್ರತಿನಿಧಿಯಾಗಿ ನೇಮಿಸುವುದನ್ನು ನೀತಿವಂತ ಜನರು ಪ್ರಾಮಾಣಿಕ ಮತ್ತು ಧೈರ್ಯಶಾಲಿ ರಾಜಕಾರಣಿಯನ್ನು ಅಧಿಕಾರಕ್ಕೆ ಸ್ಥಾಪಿಸುವ ಮೂಲಕ ಭ್ರಷ್ಟ ರಾಜ್ಯಾಧಿಕಾರವನ್ನು ಉರುಳಿಸಲು ಮಾಡಿದ ಕ್ರಾಂತಿಯ ಕ್ರಿಯೆಯಾಗಿ ಇದನ್ನು ಕಾಣಬಹುದು. ಸಮಕಾಲಿನ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಇಂದಿನ ದಿನಗಳಂತೆಯೇ ಇರುವುದನ್ನು ಈ ನಾಟಕದಲ್ಲಿ ಕಾಣುತ್ತೇವೆ.
ಶೂದ್ರಕನು ತಿಳಿಹಾಸ್ಯದ ಶೈಲಿಯಲ್ಲಿ ಶಕಾರನ ಪಾತ್ರ ಸೃಷ್ಟಿ ಮಾಡಿದ್ದಾನೆ. ಅದಕ್ಕೆ ನಾಗಭೂಷಣ್ ಅವರು ನ್ಯಾಯ ಒದಗಿಸಿದ್ದಾರೆ. ನಾಟಕದ ಸಂವಾದಗಳಂತು ನಾಟಕವನ್ನು ಜೀವಂತಗೊಳಿಸುತ್ತವೆ. ಈ ನಾಟಕ ರಾಜಕೀಯ, ಪ್ರೇಮ, ವಂಚನೆ, ಧರ್ಮ, ತ್ಯಾಗ ಮತ್ತು ನ್ಯಾಯದ ದರ್ಶನ ವಿಷಯಗಳನ್ನು ಒಳಗೊಂಡ ನಾಟಕವಾಗಿದೆ. ಜನಸಾಮಾನ್ಯರ ಬದುಕನ್ನು ನಾಟಕದ ಕೇಂದ್ರೀಕೃತವಾಗಿಸಿರುವುದು ಶೂದ್ರಕನ ವೈಶಿಷ್ಟ್ಯ. ಅದನ್ನು ಸಮರ್ಥವಾಗಿ ಈ ನಾಟಕದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ನಾಟಕದಲ್ಲಿನ ಪ್ರತಿಯೊಂದು ದೃಶ್ಯ ಪ್ರೇಕ್ಷಕರ ಮನತಣಿಸುವಂತೆಯೇ ಮಾಡಿತು.
ರಂಗ ವಿನ್ಯಾಸದ ಕಲ್ಪನೆಯಂತೂ ಬಹು ಸೊಗಸಾಗಿತ್ತು. ಅದಕ್ಕೆ ಪೂರಕವಾಗಿ ವಸ್ತ್ರ ವಿನ್ಯಾಸವು ಕೂಡ ಸೇರಿಕೊಂಡಿತು. ನಾಟಕದ ಇನ್ನೊಂದು ಅಂಶ ಹಿನ್ನೆಲೆ ಸಂಗೀತ. ಗಜಾನನ ಶರ್ಮಾ ಅವರು ಇದಕ್ಕಾಗಿ ಸಾಹಿತ್ಯವನ್ನು ಬರೆದು ಕೊಟ್ಟ ಹಾಡಿದ ಹಾಡುಗಳಂತೂ ನಾಟಕದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು ಎಂದರೆ ತಪ್ಪಾಗಲಾರದು. ವಸಂತೋತ್ಸವವೇ ಮೊದಲಾದ ಸಂದರ್ಭಗಳಲ್ಲಿ ಮಾಡಿದ ನೃತ್ಯ ಸಂಯೋಜನೆಯು ಕೂಡ ತುಂಬಾ ಚೆನ್ನಾಗಿತ್ತು. ನಾಟಕದ ಎಲ್ಲಾ ಪಾತ್ರಧಾರಿಗಳ ಮನಮುಟ್ಟುವ ಸಂವಹನ, ಆಂಗಿಕ ಅಭಿನಯ ಮತ್ತು ಭಾವಾಭಿವ್ಯಕ್ತಿ ಪ್ರೇಕ್ಷಕರ ಮನಗೆಲ್ಲುತ್ತದೆ. ಉತ್ತಮ ನಿರ್ದೇಶನ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ ಇಡೀ ಕಥಾ ಹಂದರಕ್ಕೆ ಪೂರಕವಾಗಿದ್ದು ಎಲ್ಲ ನಟರ ಅಭಿನಯ ಮನಮುಟ್ಟುವಂತಿತ್ತು.
ಶಕಾರನ ಪಾತ್ರದ ಮುಖ್ಯ ಗುಣಲಕ್ಷಣಗಳು ಅವನ ಅಸಂಗತ ಮಾತು, ಅತಿಯಾದ ಅಸಹ್ಯಕರ ಕಾಮ ಮತ್ತು ತುಂಟತನ ಇದನ್ನು ನಾಗಭೂಷಣ್ ಅವರು ಅದ್ಭುತವಾಗಿ ನಿರ್ವಹಿಸಿದರೆ, ಅವರ ಜೊತೆಗಾರನದೂ ಸಹ ಒಳ್ಳೆಯ ಅಭಿನಯವೇ. ವಸಂತಸೇನೆಯ ಪಾತ್ರಕ್ಕೆ ತಮ್ಮ ನೃತ್ಯ ನಟನೆಯ ಮೂಲಕ ಲಕ್ಷ್ಮಿ ಜೀವ ತುಂಬಿದರೆ, ನಾಗರಾಜ್ ನೀಲ್ ಅವರದ್ದು ಸಹ ಚಾರುದತ್ತನಾಗಿ ಅಷ್ಟೇ ಸೊಗಸಾದ ಅಭಿನಯ. ಹಾಗೆಯೇ ಮೈತ್ರೇಯ, ರದನಿಕೆ, ಶರ್ಮಿಲಕ, ರಾಣಿಯ ಸಖಿ, ಜೂಜುಕೋರರು ಎಲ್ಲರದ್ದೂ ಒಳ್ಳೆಯ ಅಭಿನಯವೇ ಆಗಿತ್ತು.
ಈ ಪ್ರಾಚೀನ ನಾಟಕವು ಸಂಪೂರ್ಣವಾಗಿ ಸಮಕಾಲೀನ ವಾಸ್ತವಿಕ ಛಾಯೆಯನ್ನು ಹೊಂದಿದೆ. ಆದ್ದರಿಂದ ಅದರ ಆಧುನಿಕ ಪ್ರಾತಿನಿಧ್ಯವನ್ನು ನಿಸ್ಸಂದೇಹವಾಗಿ ಪ್ರಸ್ತುತವಾಗಿಸುತ್ತದೆ. ನಾಟಕದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷ ಚಿತ್ರಿಸಲಾಗಿದೆ. ಕೊನೆಯಲ್ಲಿ ಒಳ್ಳೆಯದು ಕೆಟ್ಟದ್ದನ್ನು ಮೀರಿ ಬೆಳೆಯುತ್ತದೆ. ಸತ್ಯ ಮತ್ತು ನ್ಯಾಯವನ್ನು ಸ್ಥಾಪಿಸುತ್ತದೆ ಎನ್ನುವುದನ್ನು ಬಹಳ ಚೆನ್ನಾಗಿ ಚಿತ್ರಿಸಲಾಗಿದೆ.
ಆರಂಭದಲ್ಲಿ ಚತುಷಷ್ಟಿ ಕಲೆಗಳ ಕುರಿತಾದ ಕೊಂಚ ವಿವರಣೆ ನಾಟಕದಲ್ಲಿನ ಟ್ರೈಲರ್ ತರ ಅನಿಸಿದರೆ, ಗಣಿಕಾ ಸ್ತ್ರೀಯಾದ ವಸಂತ ಸೇವೆ ಚಾರುದತ್ತ ನಿರ್ವ್ಯಾಜ ಪ್ರೇಮ, ಶರ್ವಿಲಕ ಕಳ್ಳತನ ಮಾಡುವುದು ಸಹ ಸದುದ್ದೇಶಕ್ಕಾಗಿಯೇ ಹಾಗಾಗಿ ಅದರಿಂದ ಮುಂದೆ ಒಳ್ಳೆಯದೇ ಆಗುತ್ತದೆ. ಚಾರುದತ್ತನ ಸಜ್ಜನಿಕೆಯ ಗುಣವು ಸಹ ಅವನಿಗೆ ವರ ವಾಗುವುದು. ಜೂಜುಕೋರನಾಗಿದ್ದ ವ್ಯಕ್ತಿ ಮನಃಪರಿವರ್ತನೆಗೊಂಡು ಬೌದ್ಧ ಬಿಕ್ಷುವಾಗಿ ತನ್ನ ಋಣದ ಕಾರಣಕ್ಕಾಗಿ ವಸಂತಸೇನೆಯನ್ನು ಕಾಪಾಡುವುದು ಎಂಬೆಲ್ಲ ಅಂಶಗಳು ಸಹ ಮೌಲ್ಯಗಳನ್ನು ಹೇಳುವಂತೆ ಕವಿ ಚಿತ್ರಿಸಿದ್ದನ್ನು ಕಲಾವಿದರು ಅಭಿನಯಿಸಿದ್ದು ಸಹೃದಯ ಪ್ರೇಕ್ಷಕರಿಗೆ ಸಂತಸ ತಂದಿತು.
ಬಹು ಮುಖ್ಯವಾಗಿ ಹೇಳಬೇಕೆಂದರೆ ಚಾರುದತ್ತನ ಮನೆಗೆ ವಸಂತ ಸೇನೆ ಬಂದಾಗಿನ ದೃಶ್ಯ, ಕಳ್ಳ ಕದಿಯುವ ಸಲುವಾಗಿ ಕನ್ನ ಹಾಕುವ ದೃಶ್ಯ, ವಸಂತೋತ್ಸವದ ನೃತ್ಯದ ಸನ್ನಿವೇಶ, ಎತ್ತಿನ ಗಾಡಿಗಳನ್ನು ರಂಗಕ್ಕೆ ಅಳವಡಿಸಿದ ದೃಶ್ಯಾವಳಿಗಳು ಪ್ರೇಕ್ಷಕನ ಮನದಲ್ಲಿ ಹಾಗೆ ಅಚ್ಚಳಿಯದೆ ಉಳಿಯುವಂತಾಯ್ತು.
ಪ್ರತಿ ಅಂಕ ಮುಗಿದ ಮೇಲೆ ಬೀಳುತ್ತಿದ್ದ ಚಪ್ಪಾಳೆಗಳು ಒಟ್ಟಾರೆ ನಾಟಕದ ಯಶಸ್ಸನ್ನು ಸಾರುತ್ತಿದ್ದವು. ಈ ರೀತಿಯ ಕಲ್ಪನೆ ಕಣ್ಣಲ್ಲಿ ಮೂಡಿಸಿಕೊಂಡು ಅದನ್ನು ಕಲಾವಿದರ ಮೂಲಕ ನಮ್ಮೆದುರಿಗೆ ಪ್ರಸ್ತುತಪಡಿಸಿದ ವೈದ್ಯ ಅವರಿಗೊಂದು ಎಲ್ಲರ ಅಭಿಮಾನದ ಅಭಿನಂದನೆ ಸಲ್ಲಲೇ ಬೇಕು. ಹಾಗೆಯೇ ಪಾತ್ರಕ್ಕೆ ಒಪ್ಪುವಂತಹ ಕಲಾವಿದರನ್ನು ಆಯ್ಕೆ ಮಾಡಿರುವುದೇ ಅವರ ಮೊದಲ ಜಯ. ಅದಕ್ಕೆ ತಕ್ಕದಾದ ಸಂಗೀತ ನೀಡಿದ ಸಾತ್ ಇದೆಯಲ್ಲ ಅದು ಅಮೋಘ. ಶ್ರೀಯುತ ಕಾಳಮಂಜಿ ಅವರ ಸೊಗಸಾದ ಸಂಗೀತಕ್ಕೆ ಧನಿಯಾದವರೂ ಸಹ ಇಲ್ಲಿ ಸ್ಮರಣೀಯರು.
ಒಟ್ಟಾರೆ ಇಡೀ ನಾಟಕ ವಾರಾಂತ್ಯದಲ್ಲಿ ನೀಡಿದ ರಸದೌತಣ ಎಂದರೆ ಅದು ಅತಿಶಯೋಕ್ತಿ ಅಲ್ಲ. ಒಂದು ಅಪೂರ್ವ ರಂಗ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿದ ಮತ್ತು ನಿರ್ದೇಶಿಸಿದ ಶ್ರೀವೈದ್ಯ ಹಾಗೂ ಇಡೀ ತಂಡ ಇಲ್ಲಿ ಅಭಿನಂದನೆಗೆ ಅರ್ಹ.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜು ಶಿವಮೊಗ್ಗ.
ಚಿತ್ರ ಕೃಪೆ: ಆದಿತ್ಯ ಪ್ರಸಾದ್ ಎಂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post